ನಾನು ಯಾವೂರ ದಾಸಯ್ಯ, ವರಿಷ್ಠರ ನಿರ್ಧಾರಕ್ಕೆ ಬದ್ಧ: ಈಶ್ವರಪ್ಪ

Kannadaprabha News   | Asianet News
Published : Aug 01, 2021, 08:25 AM IST
ನಾನು ಯಾವೂರ ದಾಸಯ್ಯ, ವರಿಷ್ಠರ ನಿರ್ಧಾರಕ್ಕೆ ಬದ್ಧ: ಈಶ್ವರಪ್ಪ

ಸಾರಾಂಶ

*  ಪಕ್ಷದ ಎಷ್ಟೋ ಪ್ರಮುಖ ನಾಯಕರನ್ನು ಬೇರೆ ಬೇರೆ ಹಂತದಲ್ಲಿ ಕೈಬಿಡಲಾಗಿದೆ *  ಮುಂದಿನ ಚುನಾವಣೆ ಕಟೀಲ್‌ ಹಾಗೂ ಪಕ್ಷದ ನಾಯಕರ ನೇತೃತ್ವದಲ್ಲಿ ಎದುರಿಸುತ್ತೇವೆ  *  ದುರಂತವೆಂದರೆ ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿಲ್ಲ 

ಬೆಂಗಳೂರು(ಆ.01): ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತಂತೆ ಕೇಂದ್ರದ ನಾಯಕರು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಮುಂದಿನ ಚುನಾವಣೆಯನ್ನು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಪಕ್ಷದ ನಾಯಕರ ನೇತೃತ್ವದಲ್ಲಿ ಎದುರಿಸುತ್ತೇವೆ ಎಂದೂ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರದಲ್ಲಿ ಹರ್ಷವರ್ಧನ್‌, ರವಿಶಂಕರ್‌ ಪ್ರಸಾದ್‌, ಪ್ರಕಾಶ್‌ ಜಾವಡೇಕರ್‌ ಸೇರಿದಂತೆ ಹಲವರನ್ನು ಕೈ ಬಿಡಲಾಗಿದೆ. ಪಕ್ಷದ ಎಷ್ಟೋ ಪ್ರಮುಖ ನಾಯಕರನ್ನು ಬೇರೆ ಬೇರೆ ಹಂತದಲ್ಲಿ ಕೈಬಿಡಲಾಗಿದೆ. ಹೀಗಿರುವಾಗ ಈಶ್ವರಪ್ಪ ಯಾವೂರ ದಾಸಯ್ಯ. ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಅಥವಾ ಸೇರಿಸಿಕೊಳ್ಳದಿರಬಹುದು. ಕೇಂದ್ರದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ದುರಂತವೆಂದರೆ ಪೂರ್ಣ ಬಹುಮತ ಸಿಕ್ಕಿಲ್ಲ ಎಂದರು.

'ಡಿಸಿಎಂ, ಸಚಿವ ಸ್ಥಾನ ಕೊಡದಿದ್ರೆ ಶಾಸಕನಾಗೇ ಇರ್ತೀನಿ, ಲಾಬಿ ಕೂಡಾ ಮಾಡಲ್ಲ'

ಮುಂದಿನ ದಿನದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಪಕ್ಷದ ನಾಯಕರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಹಲವು ಮಂದಿ ನನಗೆ ಈಗಲೂ ಕರೆ ಮಾಡುತ್ತಿದ್ದು, ಹಿರಿಯ ಮುಖಂಡರಾದ ಯಡಿಯೂರಪ್ಪ, ಅನಂತ್‌ಕುಮಾರ್‌, ತಾವು ಸೇರಿದಂತೆ ಹಿರಿಯರು ಪಕ್ಷ ಕಟ್ಟಿದವರು. ನಿಮ್ಮನ್ನು ಕೈಬಿಡಬಾರದು ಎಂದು ಅಭಿಮಾನಿಗಳು, ಸ್ವಾಮಿಗಳು ವಿಶ್ವಾಸದಿಂದ ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿಯಾದರೂ ಮಾಡಬೇಕಿತ್ತು ಎನ್ನುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನತಾ ಪಕ್ಷದವರು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಪಕ್ಷ ನಮ್ಮ ತಾಯಿ ಇದ್ದಂತೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಮಗ ಎನ್ನುತ್ತಾರೆ, ಬಾದಾಮಿಗೆ ಅಳಿಯ ಎನ್ನುತ್ತಾರೆ ಮತ್ತು ಚಾಮರಾಜಪೇಟೆಯನ್ನು ಸೊಸೆ ಎನ್ನುತ್ತಾರೆ. ಹಾಗಾದರೆ ಮೊದಲು ನಿಮ್ಮ ತಾಯಿ ಪಕ್ಷ ಯಾವುದು ಹೇಳಿ ಎಂದು ಕಿಡಿಕಾರಿದರು.

ರಾಜ್ಯದಲ್ಲಿರುವುದು ಜೆಡಿಎಸ್‌ ಸರ್ಕಾರ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೇರೆ ಪಕ್ಷದವರೂ ಸಹ ಬಿಜೆಪಿ ಸೇರುತ್ತಿದ್ದಾರೆ. ಬಿಜೆಪಿ ಹಾಲು ಇದ್ದಂತೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೇನು. ಹಾಲಿಗೆ ಸಿಹಿಯಾಗಿ ಬೊಮ್ಮಾಯಿ ಸೇರಿಕೊಂಡಿದ್ದಾರೆ ಎಂದು ಹೇಳಿದರು.
 

PREV
click me!

Recommended Stories

ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?
ಸೋಶಿಯಲ್ ಮೀಡಿಯಾದಿಂದ ದೂರವಿದ್ದು 10 ಸರ್ಕಾರಿ ನೌಕರಿ ಪಡೆದು ಸ್ಫೂರ್ತಿಯಾದ ಸಾಧಕ!