
ಗಾಲೆ(ಜು.28): ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಬಹುತೇಕ ಟೀಂ ಇಂಡಿಯಾ ವಶವಾಗಿದೆ. ವಿಜಯೋತ್ಸವ ಆಚರಿಸುವುದೊಂದೆ ಬಾಕಿಯುಳಿದಿದೆ. ಬೌಲರ್'ಗಳ ಸಾಂಘಿಕ ಪ್ರದರ್ಶನದಿಂದ ಭಾರತದ ಗೆಲುವಿಗೆ ಕ್ಷಣಗಣನೆ ಶುರುವಾಗಿದೆ.
ಮೂರನೇ ದಿನದಂದು 154/5 ವಿಕೇಟ್'ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಶ್ರೀಲಂಕಾ ತಂಡದವರು 291 ರನ್'ಗಳಿಗೆ ತನ್ನೆಲ್ಲ ವಿಕೇಟ್'ಗಳನ್ನು ಕಳೆದುಕೊಂಡು 309 ರನ್ ಹಿನ್ನಡೆ ಅನುಭವಿಸಿದರು. ಮ್ಯಾಥ್ಯೂಸ್ (83:130 ಎಸೆತ, 11 ಬೌಂಡರಿ, 1 ಸಿಕ್ಸ್'ರ್ ) ಹಾಗೂ ಪೆರೇರಾ (92 ಅಜೇಯ: 132 ಎಸೆತ, 10 ಬೌಂಡರಿ, 4 ಸಿಕ್ಸ್'ರ್) ಹೊರತು ಪಡಿಸಿದರೆ ಉಳಿದವರ್ಯಾರು ಪ್ರತಿರೋಧ ತೋರಲಿಲ್ಲ.
ಭಾರತದ ಪರ ರವೀಂದ್ರ ಜಡೇಜಾ 67/3, ಶಮಿ 45/2 ಹಾಗೂ ಯಾದವ್, ಅಶ್ವಿನ್ ಮತ್ತು ಪಾಂಡ್ಯ ತಲಾ ಒಂದು ವಿಕೇಟ್ ಪಡೆದು ಶ್ರೀಲಂಕಾ ಬ್ಯಾಟ್ಸ್'ಮೆನ್'ಗಳನ್ನು ಸಾಧಾರಣ ಮೊತ್ತಕ್ಕೆ ತಡೆದು ನಿಲ್ಲಿಸಿದರು. ಟೀಂ ಇಂಡಿಯಾ ಫಾಲೋ'ಆನ್ ಹೇರದೆ ತಾನೇ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದರು. ಮೊದಲ ಇನ್ನಿಂಗ್ಸ್'ನಲ್ಲಿ ಶತಕಗಳೊಂದಿಗೆ ಭರ್ಜರಿ ಆಟವಾಡಿದ್ದ ಶಿಖರ್ ಧವನ್ ಹಾಗೂ ಚೇತೇಶ್ವರ ಪೂಜಾರ ಇಂದು ಕೇವಲ 14 ಹಾಗೂ 15 ರನ್ ಗಳಿಸಿ ಔಟಾದರು.
ಮುಕುಂದ್, ಕೊಹ್ಲಿ ಉತ್ತಮ ಆಟ
ಆರಂಭಿಕ ಆಟಗಾರ ಅಭಿನವ್ ಮುಕುಂದ್ ಹಾಗೂ ನಾಯಕ ವಿರಾಟ್ ಕೊಹ್ಲಿ 3ನೇ ವಿಕೇಟ್ ನಷ್ಟಕ್ಕೆ 133 ರನ್'ಗಳ ಉತ್ತಮ ಜೊತೆಯಾಟದ ಮೂಲಕ ಶ್ರೀಲಂಕಾಕ್ಕೆ ಮತ್ತೆ ಚುರುಕು ಮುಟ್ಟಿಸಿದರು. ದಿನದ ಕೊನೆ ಗಳಿಗೆಯಲ್ಲಿ ಮುಕುಂದ್ 81 ರನ್ ಗಳಿಸಿ ಔಟಾದರೆ ಕೊಹ್ಲಿ 76 ರನ್'ಗಳೊಂದಿಗೆ ಆಜೇಯರಾಗಿ ಉಳಿದಿದ್ದಾರೆ. ದಿನದಾಂತ್ಯಕ್ಕೆ ಭಾರತ 2ನೇ ಇನ್ನಿಂಗ್ಸ್'ನಲ್ಲಿ 189/3 ಗಳಿಸಿದೆ. ಭಾರತ ತಂಡ ಬಹುತೇಕ ಇನ್ನು 50 ಅಥವಾ 100 ರನ್'ಗಳಿಸಿ ಡಿಕ್ಲೇರ್ ತೆಗೆದುಕೊಳ್ಳುವ ಸಂಭವವಿದ್ದು, ಪಂದ್ಯ ನಾಳೆಯೇ ಮುಗಿಯುವ ಸಾಧ್ಯತೆಯಿದೆ.
ಸ್ಕೋರ್
ಭಾರತ 600 ಹಾಗೂ 189/3
(ಕೊಹ್ಲಿ:81, ಮುಕುಂದ್ : 76)
ಶ್ರೀಲಂಕಾ: 291/10
(ತರಂಗ:64, ಮ್ಯಾಥ್ಯೂಸ್:83,ಪರೇರಾ:92)
ಭಾರತಕ್ಕೆ 498 ರನ್ ಮುನ್ನಡೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.