
ನವದೆಹಲಿ(ಜ.01): ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಬಳಿ ಪದೇ-ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಹಿನ್ನಲೆಯಲ್ಲಿ ಭಾರತ - ಪಾಕಿಸ್ತಾನ ನಡುವೆ ತಟಸ್ಥ ಸ್ಥಳದಲ್ಲಿ ದ್ವಿಪಕ್ಷೀಯ ಟೂರ್ನಿ ಆಯೋಜಿಸಿದರೂ ಆಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಖಡಕ್ ಸಂದೇಶ ರವಾನಿಸಿದ್ದಾರೆ.
ಭದ್ರತಾ ಸಚಿವಾಲಯದ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಚಿವೆ ಸ್ವರಾಜ್, ಪಾಕ್ ಪ್ರಚೋದಿತ ಗಡಿನಿಯಂತ್ರಿತ ರೇಖೆ ಉಲ್ಲಂಘನೆಯಿಂದಾಗಿ ಕ್ರಿಕೆಟ್ ಆಯೋಜಿಸಲು ವಾತಾವರಣ ಸೂಕ್ತವಾಗಿಲ್ಲ ಎಂದು ಹೇಳಿದ್ದಾರೆ. 2017ರಲ್ಲಿ ಭಾರತ ಪಾಕಿಸ್ತಾನ ನಡುವೆ ಬೂದಿಮುಚ್ಚಿದ ಕೆಂಡದಂತಿದ್ದ ವಾತಾವರಣವು, ಪಾಕ್ ಸೆರೆಯಲ್ಲಿರುವ ಕುಲಭೂಷಣ್ ಜಾದವ್ ಅವರ ತಾಯಿ ಹಾಗೂ ಪತ್ನಿಯನ್ನು ನಡೆಸಿಕೊಂಡ ರೀತಿ, ಹಾಗೂ ಪಾಕ್ ಪಡೆಗಳಿಂದ ಮತ್ತೆ ನಿಯಂತ್ರಣ ರೇಖೆ ಉಲ್ಲಂಘಿಸಿ, ದೇಶದ ಸೈನಿಕರನ್ನು ಹತ್ಯೆ ಮಾಡಿದ್ದು ಭಾರತದ ಆಕ್ರೊಶಕ್ಕೆ ಕಾರಣವಾಗಿತ್ತು.
ಪಾಕಿಸ್ತಾನ 2012ರ ಡಿಸೆಂಬರ್'ನಲ್ಲಿ ಕಡೆಯ ಬಾರಿ ಭಾರತದಲ್ಲಿ 3 ಏಕದಿನ ಹಾಗೂ 2 ಟಿ20 ಪಂದ್ಯಗಳ ದ್ವಿಪಕ್ಷೀಯ ಸರಣಿ ಆಡಿತ್ತು. ಇನ್ನು ಭಾರತ ತಂಡವು ಪಾಕ್ ನೆಲದಲ್ಲಿ 2007ರಲ್ಲಿ ಕಡೆಯ ದ್ವಿಪಕ್ಷೀಯ ಸರಣಿ ಆಡಿತ್ತು. ಹದಗೆಟ್ಟ ರಾಜಕೀಯ ವಾತಾವರಣ ಹಾಗೂ ಗಡಿ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆ ಕನಸಿನ ಮಾತು ಎಂಬಂತಾಗಿದೆ.
ಈ ಮೊದಲು ಬಿಸಿಸಿಐ ಕೂಡಾ ಜಾಗತಿಕ ಟೂರ್ನಿಗಳಲ್ಲಿ ಉಭಯ ತಂಡಗಳನ್ನು ಒಂದೇ ಗುಂಪಿನಲ್ಲಿ ಆಡಿಸಬಾರದು ಎಂದು ಐಸಿಸಿಗೆ ಮನವಿ ಮಾಡಿಕೊಂಡಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.