
ಇನ್ನೇನು ಗೆದ್ದೇ ಬಿಟ್ಟೆವು ಎನ್ನುವ ಹಂತದಲ್ಲಿ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲುಂಡಿದ್ದ ಮುಂಬೈ ಇಂಡಿಯನ್ಸ್, ಇಂದು ಸನ್ರೈಸರ್ಸ್ ಹೈದ್ರಾಬಾದ್ ಸವಾಲನ್ನು ಎದುರಿಸಲಿದೆ.
ಸನ್'ರೈಸರ್ಸ್ ಬೌಲಿಂಗ್ ಪಡೆ ಮೇಲೆ ಹೆಚ್ಚಿನ ವಿಶ್ವಾಸವಿರಿಸಿದೆ. ಭುವನೇಶ್ವರ್, ಸ್ಟ್ಯಾನ್ಲೇಕ್, ಸಿದ್ದಾರ್ಥ್ ಕೌಲ್ ತಂಡದ ಪ್ರಮುಖ ವೇಗಿಗಳಾಗಿದ್ದಾರೆ. ಹೈದ್ರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಮೊದಲ ಪಂದ್ಯದಲ್ಲೇ ಗಮನಾರ್ಹ ಪ್ರದರ್ಶನ ನೀಡಿದ್ದರೆ, ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು ಇದೇ ಆಟ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಮನೀಶ್ ಪಾಂಡೆ, ಯೂಸಫ್ ಪಠಾಣ್, ಶಕೀಬ್ ತಂಡದ ಪ್ರಮುಖ ಟ್ರಂಪ್ ಕಾರ್ಡ್ಗಳಾಗಿದ್ದಾರೆ.
ಅತ್ತ ಮೊದಲ ಪಂದ್ಯದಲ್ಲೇ ನಿರಾಸೆಗೊಳಗಾಗಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಇಂದಿನ ಪಂದ್ಯವನ್ನು ಗೆದ್ದು ವಿಶ್ವಾಸವನ್ನು ಇಮ್ಮಡಿಗೊಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಉದ್ಘಾಟನಾ ಪಂದ್ಯದಲ್ಲೇ ನಾಯಕ ರೋಹಿತ್ ಶರ್ಮಾ ನಿರಾಸೆ ಅನುಭವಿಸಿದರೆ, ಶೂನ್ಯಕ್ಕೆ ಔಟಾಗುವ ಮೂಲಕ ಎವಿನ್ ಲೆವಿಸ್ ಆಘಾತಕ್ಕೆ ಒಳಗಾಗಿದ್ದರು. ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಪೊಲಾರ್ಡ್'ರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಆದರೆ, ಕಳೆದ ಪಂದ್ಯದಲ್ಲಿ ಹಿಮ್ಮಡಿ ಗಾಯದ ಸಮಸ್ಯೆಗೆ ಹಾರ್ದಿಕ್ ತುತ್ತಾಗಿದ್ದು, ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಡೆತ್ ಓವರ್'ಗಳಲ್ಲಿ ಬೌಲರ್ಗಳು ಉತ್ತಮ ಪ್ರದರ್ಶನ ನೀಡಬೇಕಾದ ಅವಶ್ಯಕತೆಯಿದೆ. ಕಳೆದ ಪಂದ್ಯದಲ್ಲಿ ಮಿಚೆಲ್ ಮೆಕ್ಲೆನಾಘನ್, ಜಸ್'ಪ್ರೀತ್ ಬುಮ್ರಾ ಹಾಗೂ ಮುಸ್ತಾಫಿಜುರ್ ರಹಮಾನ್ ಕೊನೆ ಓವರ್'ಗಳಲ್ಲಿ ದುಬಾರಿಯಾಗಿದು ಮುಂಬೈ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿತು. ಇನ್ನು ಮಯಾಂಕ್ ಮರ್ಕೆಂಡ್ 3 ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.