
ಕೊಚ್ಚಿ(ಆ.08): ಮುಂಬರುವ 2019ರ ಏಕದಿನ ವಿಶ್ವಕಪ್'ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಆಸೆಯಿದೆ ಎಂದು ಕೇರಳ ವೇಗಿ ಶ್ರೀಶಾಂತ್ ಹೇಳಿದ್ದಾರೆ.
ಸೋಮವಾರವಷ್ಟೇ ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು ರದ್ದುಗೊಳಿಸಿತ್ತು. ಆದರೆ ಬಿಸಿಸಿಐ ಮಾತ್ರ ಈ ಸಂಬಂದ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಇದರ ಬೆನ್ನಲ್ಲೇ ಭಾರತ ತಂಡದ ಪರವಾಗಿ ಮತ್ತೆ ಆಡಬೇಕೆನ್ನುವ ಆಸೆಯನ್ನು ಶ್ರೀಶಾಂತ್ ಹೇಳಿಕೊಂಡಿದ್ದಾರೆ. ‘ತಂಡಕ್ಕೆ ಮರಳುವ ಸಾಮರ್ಥ್ಯ ತನ್ನಲ್ಲಿದೆ. ಇದಕ್ಕೆ ಬಿಸಿಸಿಐ ಹಾಗೂ ಕೇರಳ ಕ್ರಿಕೆಟ್ ಸಂಸ್ಥೆಗಳ ಸಹಕಾರ ಅಗತ್ಯ. ಕಳ್ಳಾಟದಲ್ಲಿ ತೊಡಗಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದ ಪಾಕ್ನ ಮೊಹಮದ್ ಅಮೀರ್ ಅವರಂತಹ ಆಟಗಾರರೇ ಟಿ20, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಇದಕ್ಕೆ ಐಸಿಸಿ ಹಾಗೂ ಸ್ಥಳೀಯ ಕ್ರಿಕೆಟ್ ಸಂಸ್ಥೆಗಳ ಸಹಕಾರವೇ ಕಾರಣ. ನನಗೂ ಇದೇ ರೀತಿ ಸಹಕಾರ ಅಗತ್ಯ’ ಎಂದು ಶ್ರೀಶಾಂತ್ ಹೇಳಿದ್ದಾರೆ.
2015ರಲ್ಲಿ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಶ್ರೀಶಾಂತ್ ಅವರನ್ನು ಆರೋಪ ಮುಕ್ತಗೊಳಿಸಿದ್ದರೂ, ಬಿಸಿಸಿಐ ಮಾತ್ರ ಕೇರಳ ವೇಗಿಯ ನಿಷೇಧವನ್ನು ಹಿಂಪಡೆಯಲು ಒಪ್ಪಿರಲಿಲ್ಲ. ಹೀಗಾಗಿ ಬಿಸಿಸಿಐ ನಿಲುವನ್ನು ಪ್ರಶ್ನಿಸಿ ಶ್ರೀಶಾಂತ್ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ನಲ್ಲೂ ಶ್ರೀಶಾಂತ್ ಪರವಾಗಿ ತೀರ್ಪು ಬಂದಿದ್ದು, ಬಿಸಿಸಿಐ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.