ಪಾನಿಪೂರಿ ಮಾರುತ್ತಿದ್ದ ಹುಡುಗ ಈಗ ಟೀಂಇಂಡಿಯಾ ಕ್ರಿಕೆಟಿಗ

First Published Jul 5, 2018, 4:06 PM IST
Highlights

ಸಾಧಿಸಬೇಕು ಅನ್ನೋ ಛಲ ಇದ್ದರೆ, ಅದೆಷ್ಟೇ ಅಡೆತಡೆಗಳಿದ್ದರೂ ಗುರಿ ಮುಟ್ಟಬಹುದು ಅನ್ನೋದಕ್ಕೆ ಅತ್ಯುತ್ತಮ ಉದಾಹರಣೆ ಇಲ್ಲಿದೆ. ಟೆಂಟ್‌ನಲ್ಲಿ ಮಲಗಿ, ಪಾನಿಪೂರಿ ಮಾರಾಟ ಮಾಡಿ ಇದೀಗ ಟೀಂ ಇಂಡಿಯಾ ಕ್ರಿಕೆಟಿಗನಾಗಿರೋ ಪ್ರತಿಭಾನ್ವಿತ ಯುವಕನ ಕತೆ ಎಲ್ಲರಿಗೂ ಸ್ಪೂರ್ತಿ. ಈ ಯುವ ಕ್ರಿಕೆಟಿಗ ಯಾರು? ಆತ ಪಟ್ಟ ಕಷ್ಟವೇನು?ಇಲ್ಲಿದೆ ನೋಡಿ.

ಮುಂಬೈ(ಜು.05):  ಟೆಂಟ್‌ನಲ್ಲಿ ವಾಸ್ತವ್ಯ, ಪಾನಿ ಪೂರಿ ಮಾರಾಟ, ಊಟವಿಲ್ಲದೆ ಅದೆಷ್ಟೋ ರಾತ್ರಿಗಳು ಖಾಲಿ ಹೊಟ್ಟೆಯಲ್ಲೇ ನಿದ್ದೆ. ಕುಟುಂಬದ ಜವಾಬ್ದಾರಿ ನಿರ್ವಹಿಸಬೇಕಾದ ಅನಿವಾರ್ಯತೆ. ಇದರ ನಡುವೆ ಕ್ರಿಕೆಟಿಗನಾಗಬೇಕೆಂಬ ಕನಸು. ಇಷ್ಟೆಲ್ಲ ಅಡೆತಡೆಗಳ ಮಧ್ಯೆ ಗುರಿ ಮುಟ್ಟೋದು ಅಂದುಕೊಂಡಷ್ಟು ಸುಲಭವಲ್ಲ. 

ಬೆಟ್ಟದಷ್ಟು ಸವಾಲುಗಳನ್ನ ಎದುರಿಸಿ ತಾನು ಅಂದುಕೊಂಡದ್ದನ್ನ ಸಾಧಿಸಿದ ಈ ಕ್ರೆಕಿಟಿಗ ಯಶಸ್ವಿ ಜೈಸ್ವಾಲ್. ಇದೀಗ ಮುಂಬೈನಲ್ಲಿ ನೆಲೆಸಿರುವ ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾ ಅಂಡರ್ 19  ತಂಡಕ್ಕೆ ಆಯ್ಕೆಯಾಗಿದ್ದಾರೆ. 

ಜೀವನ ಪಯಣದಲ್ಲಿ ಸೋತು, ಇನ್ನು ಸಾಕಪ್ಪ ಅನ್ನೋವವರೇ ಹೆಚ್ಚು. ಆದರೆ ಮುಂಬೈನ ಯಶಸ್ವಿ ಜೈಸ್ವಾಲ್ ಇದಕ್ಕೆ ವಿರುದ್ಧ. ಯಶಸ್ವಿ ಜೈಸ್ವಾಲ್ ಮೂಲ ಉತ್ತರ ಪ್ರದೇಶದದ ಭಹಡೊಹಿ. ಪೋಷಕರೊಂದಿಗೆ ಆಡಿ ನಲಿಯುತ್ತಿದ್ದ ಯಶಸ್ವಿ ಜೈಸ್ವಾಲ್‌ಗೆ ಕ್ರಿಕೆಟರ್ ಆಗಬೇಕೆಂಬ ಕನಸು. ಆದರೆ ಮನಯಲ್ಲಿ ಕಿತ್ತು ತಿನ್ನೋ ಬಡತನ.
 

ದಿಕ್ಕು ತೋಚದ ಯಶಸ್ವಿ ಜೈಸ್ವಾಲ್  ತನ್ನ 11ನೇ ವಯಸ್ಸಿಗೆ ಆಟ ಪಾಠ ನಿಲ್ಲಿಸಿ ನೇರವಾಗಿ ಮುಂಬೈ ಸೇರಿಕೊಂಡ. ತನ್ನ ಅಂಕಲ್ ಮನೆ ಮುಂಬೈನಲ್ಲಿದ್ದರೂ, ಅಲ್ಲಿ ಮತ್ತೊಬ್ಬರಿಗೆ ಮಲಗಲ ಜಾಗವಿಲ್ಲ. ಹೀಗಾಗಿ ಯಶಸ್ವಿ ಜೈಸ್ವಾಲ್ ಅನಿವಾರ್ಯವಾಗಿ ಬೇರೆ ಜಾಗ ಹುಡುಕಬೇಕಾಯಿತು. 

ಬಸ್ ನಿಲ್ದಾಣ, ಸಣ್ಣ ಅಂಗಡಿಗಳಲ್ಲಿ ಕೆಲಸಕ್ಕೆ ಸೇರಿದ ಯಶಸ್ವಿ ಜೈಸ್ವಾಲ್  ಡೈರಿ ಶಾಪ್ ಸನಿಹದಲ್ಲಿ ಮಲಗುತ್ತಿದ್ದ. ಬರುತ್ತಿದ್ದ ಹಣದಲ್ಲಿ ಆತನ ಖರ್ಚು ಸಾಗಬೇಕು ಜೊತೆಗೆ ಕ್ರಿಕೆಟ್ ಅಭ್ಯಾಸಕ್ಕೂ ಬೇಕಾಗಿತ್ತು. ಒಂದು ದಿನ ಕ್ರಿಕೆಟ್ ಆಡಿ ವಾಪಾಸ್ ಬರುತ್ತಿದ್ದಂತೆ, ಡೈರಿ ಶಾಪ್ ಮಾಲೀಕ ಇದ್ದ ಎರಡು ಬಟ್ಟೆಗಳನ್ನು ಹೊರಗೆಸೆದು ಅಲ್ಲಿಂದ ಒಡಿಸಿದ್ದರು.

ಜೈಸ್ವಾಲ್ ಮಲಗಲು ಜಾಗವಿಲ್ಲದಾಗ, ಮುಂಬೈನಲ್ಲಿದ್ದ ಅಂಕಲ್ ಮುಸ್ಲೀಂ ಯುನೈಟೆಡ್ ಕ್ಲಬ್ ಜೊತೆ ಮಾತನಾಡಿದರು.  ಅಜಾದ್ ಮೈದಾನದ ಬಳಿಯ ಮುಸ್ಲೀಂ ಕ್ಲಬ್‌ನ ಟೆಂಟ್‌ನಲ್ಲಿ ಮಲಗಲು ಜಾಗ ನೀಡಿದರು. ಕಲ್ಬಾದೇವಿಯಿಂದ ಆಜಾದ್ ಮೈದಾನಕ್ಕೆ ಬಂದ ಜೈಸ್ವಾಲ್‌ಗೆ ಕ್ರಿಕೆಟ್ ಕ್ಲಬ್ ಸೇರಲು ಬಯಿಸಿದರು. ಆದರೆ ಇದಕ್ಕೆ ಹೆಚ್ಚಿನ ಹಣ ಬೇಕಿತ್ತು.

ಕ್ರಿಕೆಟಿಗ ನಾಗೋ ಬಯಕೆಯಿಂದ ಪಾನಿಪೂರಿ ಮಾರಾಟ ಮಾಡಲು ಮುಂದಾದ ಜೈಸ್ವಾಲ್ , ಅಜಾದ್ ಮೈದಾನ ಪಕ್ಕದಲ್ಲಿ ಮಾರಾಟ ಶುರುಮಾಡಿದ. ಇದರಲ್ಲಿ ಬಂದ ಹಣದಲ್ಲಿ ಕ್ರಿಕೆಟ್ ಕ್ಲಬ್ ಸೇರಿಕೊಂಡು ಅಭ್ಯಾಸ ಆರಂಭಿಸಿದ

ರಾಮ್ ಲೀಲಾ, ಆಜಾದ್ ಮೈದಾನದಲ್ಲಿ ಪಾನಿ ಪೂರಿ ಮಾರುತ್ತಿದ್ದ ವೇಳೆ ತನ್ನ ಕ್ಲಬ್‌ನಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರು ಬರುತ್ತಿದ್ದರು. ಇದು ತನಗೆ ತೀವ್ರ ಮುಜುಗರ ತರುತ್ತಿತ್ತು ಎಂದು ಜೈಸ್ವಾಲ್ ತನ್ನ ರೋಚಕ ಕತೆಯನ್ನ ಹೇಳಿದ್ದಾರೆ.

ಕ್ಲಬ್‌ನಲ್ಲಿದ್ದ ಇತರ ಹುಡುಗರಿಗೆ ಅವರ ಪೋಷಕರು ಊಟ ಹಾಗೂ ಇತರ ತನಿಸುಗಳನ್ನ ತರುತ್ತಿದ್ದರು. ಆದರೆ ನನಗೆ ತರಲು ಮುಂಬೈನಲ್ಲಿ ಯಾರು ಇರಲಿಲ್ಲ. ಇಷ್ಟೇ ಅಲ್ಲ ಸರಿಯಾದ ತಿನಿಸು ಖರೀದಿಸಲು ನನ್ನ ಬಳಿ ಹಣವಿರಲಿಲ್ಲ. ನನ್ನ ಪಾಲಿಗೆ ಖಾನ ಖುದ್ ಬನಾವೋ, ಖಾನ ಖುದ್ ಖಾಲೋ.(ತಾನೇ ಅಡುಗೆ ಮಾಡಿ, ತಾನೆ ಊಟಮಾಡು) 

ಕತ್ತಲಾದ ಮೇಲೆ ಪಾನಿಪೂರಿ ಮಾರಾಟ ಮಾಡಿ ಮರುದಿ ಬೆಳಗ್ಗೆಯಿಂದ ಸಂಜೆವರೆಗೂ ಕ್ರಿಕೆಟ್ ಆಡುತ್ತಿದ್ದ ಜೈಸ್ವಾಲ್‌ಗೆ ಊಟ ಮಾಡಲು ಹಣವಿರುತ್ತಿರಲಿಲ್ಲ. ಕ್ರಿಕೆಟ್ ಆಡೋ ಕ್ಲಬ್‌ನ ಇತರ ಹುಡುಗರ ಜೊತೆ ಊಟಕ್ಕೆ ಹೋದಾಗ ನಾನು ಹೇಳುತ್ತಿದ್ದೆ ಹಸಿವಿದೆ, ಆದರೆ ನನ್ನ ಬಳಿ ಹಣವಿಲ್ಲ ಎಂದು ಹಲವು ಬಾರಿ ನನ್ನ ಕ್ಲಬ್ ಹುಡುಗರು ಊಟ ಕೊಡಿಸಿದ್ದಾರೆ ಎಂದು ಯಶಸ್ವಿ ಜೈಸ್ವಾಲ್ ಹೇಳಿದ್ದಾರೆ.

ಅದೆಷ್ಟೋ ದಿನಗಳನ್ನ ಖಾಲಿ ಹೊಟ್ಟೆಯಲ್ಲಿ ಮಲಗಿದ್ದೇನೆ. ಕ್ಲಬ್‌ನಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಆಯ್ಕೆ ಸಮಿತಿ ಗಮನಸೆಳೆದ ಯಶಸ್ವಿ ಜೈಸ್ವಾಲ್ ನೇರವಾಗಿ ಅಂಡರ್ 19 ತಂಡಕ್ಕೆ ಆಯ್ಕೆಯಾಗಿದ್ದಾರೆ. ಸದ್ಯ ಯಶಸ್ವಿ ಜೈಸ್ವಾಲ್ ವಯಸ್ಸು 17. ಇದೀಗ ಯಶಸ್ವಿ ಜೈಸ್ವಾಲ್ ಮುಂಬೈನ ಭವಿಷ್ಯದ ಸ್ಟಾರ್ ಎಂದು ಅಂಡರ್-19 ತಂಡದ ಕೋಚ್ ಸತೀಶ್ ಸಾಮಂತ್ ಹೇಳಿದ್ದಾರೆ.

ಕಳೆದ 5 ವರ್ಷಗಳಲ್ಲಿ ಜೈಸ್ವಾಲ್ 49 ಶತಕ ಸಿಡಿಸಿದ್ದಾರೆ. ಇದೀಗ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿರೋ ಯಶಸ್ವಿ ಜೈಸ್ವಾಲ್, ಶೀಘ್ರದಲ್ಲೇ ಭಾರತ ತಂಡದ ಜೊತೆಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿದ್ದಾನೆ. ಶೀಘ್ರದಲ್ಲೇ ಟೀಂ ಇಂಡಿಯಾದಲ್ಲೂ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆಯಲಿ ಅನ್ನೋದೆ ಎಲ್ಲರ ಹಾರೈಕೆ.

click me!