
ಬೆಂಗಳೂರು(ಡಿ.01): ಗಾಯದ ಸಮಸ್ಯೆಯಿಂದಾಗಿ ತಾರಾ ಕಬಡ್ಡಿ ಪಟು ಪವನ್ ಕುಮಾರ್ ಶೆರಾವತ್ 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಿಂದ ಹೊರಬಿದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಕಬಡ್ಡಿ ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು, ತಮಿಳ್ ತಲೈವಾಸ್ ತಂಡದ ಸ್ಟಾರ್ ರೈಡರ್ ಪವನ್ ಶೆರಾವತ್, ಇದೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಆಟಗಾರನಾಗಿ ಅಲ್ಲ ಬದಲಾಗಿ ವೀಕ್ಷಕ ವಿವರಣೆಗಾರರಾಗಿ ಪವನ್ ಶೆರಾವತ್ ಕಬಡ್ಡಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
23 ವರ್ಷದ ಬೆಂಗಳೂರು ಬುಲ್ಸ್ ತಂಡದ ಮಾಜಿ ನಾಯಕ ಹಾಗೂ ತಮಿಳ್ ತಲೈವಾಸ್ ತಂಡದ ಹಾಲಿ ಆಟಗಾರ ಪವನ್ ಶೆರಾವತ್, ಕಾಲಿನ ಶಸ್ತ್ರಚಿಕಿತ್ಸೆ ಬಳಿಕ ಇದೇ ಮೊದಲ ಬಾರಿಗೆ ಕ್ಯಾಮರ ಮುಂದೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಗೂ ಮುನ್ನ ನಡೆದ ಹರಾಜಿನಲ್ಲಿ ಪವನ್ ಕುಮಾರ್ ಶೆಹ್ರಾವತ್ ಅವರನ್ನು ತಮಿಳ್ ತಲೈವಾಸ್ ಫ್ರಾಂಚೈಸಿಯು ಬರೋಬ್ಬರಿ 2.23 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಪವನ್ ಶೆಹ್ರಾವತ್, ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಪವನ್ ಶೆಹ್ರಾವತ್ ಗುಜರಾತ್ ಜೈಂಟ್ಸ್ ಎದುರಿನ ತಾನಾಡಿದ ಮೊದಲ ಪಂದ್ಯದಲ್ಲಿಯೇ ಗಾಯಕ್ಕೆ ತುತ್ತಾಗಿದ್ದರು. ಇದರ ಬೆನ್ನಲ್ಲೇ ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಇದಾದ ಬಳಿಕ ಪವನ್ ಶೆಹ್ರಾವತ್, ಬಲಗಾಲಿನ ಮಂಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದಾದ ಬಳಿಕ ಅಧಿಕೃತವಾಗಿಯೇ ಪವನ್ ಶೆಹ್ರಾವತ್ 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಿಂದ ಹೊರಬಿದ್ದಿದ್ದರು.
ಕೈ ತಪ್ಪಿದ ಪವನ್ ಶೆರಾವತ್, ಕಣ್ಣೀರಿಟ್ಟ ಬೆಂಗಳೂರು ಬುಲ್ಸ್ ಕೋಚ್!
ಪವನ್ ಶೆಹ್ರಾವತ್ ಸದ್ಯ 987 ರೇಡ್ ಪಾಯಿಂಟ್ಗಳೊಂದಿಗೆ ಪ್ರೊ ಕಬಡ್ಡಿ ಟೂರ್ನಿ ಇತಿಹಾಸದಲ್ಲಿಯೇ ಅತಿಹೆಚ್ಚು ರೇಡ್ ಪಾಯಿಂಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿದ್ದಾರೆ. ಇನ್ನು ಯುಪಿ ಯೋಧಾಸ್ ತಂಡದ ಪ್ರದೀಪ್ ನರ್ವಾಲ್ 1533* ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಬೆಂಗಾಲ್ ವಾರಿಯರ್ಸ್ ತಂಡದ ಮಣೀಂದರ್ ಸಿಂಗ್(1201*), ರಾಹುಲ್ ಚೌಧರಿ(1023*) ಹಾಗೂ ದೀಪಕ್ ನಿವಾಸ್ ಹೂಡಾ(1019*) ಈ ಪಟ್ಟಿಯಲ್ಲಿ ಮೊದಲ 4 ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.