
ಲಖನೌ(ಮೇ.25): 3ನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದ ನಾಲ್ಕು ನಗರಗಳಲ್ಲಿ ನಡೆಯಲಿರುವ ಕೂಟವನ್ನು ಸಂಜೆ 7 ಗಂಟೆಗೆ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಕ್ರೀಡಾಕೂಟದಲ್ಲಿ 200ಕ್ಕೂ ಹೆಚ್ಚು ಯುನಿವರ್ಸಿಟಿಗಳ 4750ರಷ್ಟುಅಥ್ಲೀಟ್ಗಳು ಪಾಲ್ಗೊಳ್ಳಲಿದ್ದು, 21 ಕ್ರೀಡೆಗಳು ನಡೆಯಲಿವೆ. ವಾರಾಣಸಿ, ಗೋರಖ್ಪುರ, ಲಖನೌ ಹಾಗೂ ಗೌತಮ ಬುದ್ಧ ನಗರಗಳು ಕೂಟಕ್ಕೆ ಆತಿಥ್ಯ ವಹಿಸಲಿವೆ. ಜೂ.3ರಂದು ವಾರಣಾಸಿಯಲ್ಲಿ ಕ್ರೀಡಾಕೂಟ ಸಮಾಪ್ತಿಗೊಳ್ಳಲಿದೆ. ಕಬಡ್ಡಿ ಸ್ಪರ್ಧೆಯು ಮೇ 23ರಂದೇ ಆರಂಭಗೊಂಡಿದ್ದು, ಫುಟ್ಬಾಲ್, ಟೆನಿಸ್, ಟೇಬಲ್ ಟೆನಿಸ್, ವಾಲಿಬಾಲ್, ಬಾಸ್ಕೆಟ್ಬಾಲ್ ಸೇರಿದಂತೆ ಕೆಲ ಕ್ರೀಡೆಗಳು ಬುಧವಾರ ಆರಂಭಗೊಂಡವು.
2020ರಲ್ಲಿ ಮೊದಲ ಆವೃತ್ತಿಯ ಕ್ರೀಡಾಕೂಟ ಒಡಿಶಾದಲ್ಲಿ ನಡೆದಿತ್ತು. ಚಂಡೀಗಢದ ಪಂಜಾಬ್ ವಿವಿ ಚಾಂಪಿಯನ್ ಆಗಿತ್ತು. ಕಳೆದ ವರ್ಷ 2ನೇ ಆವೃತ್ತಿ ಬೆಂಗಳೂರಿನ ಜೈನ್ ವಿವಿಯಲ್ಲಿ ಆಯೋಜಿಸಲಾಗಿತ್ತು. ಆತಿಥೇಯ ವಿವಿ ಸಮಗ್ರ ಪ್ರಶಸ್ತಿ ಗೆದ್ದಿತ್ತು.
ಅಥ್ಲೆಟಿಕ್ಸ್: ಗ್ರೀಸ್ನಲ್ಲಿ ಚಿನ್ನ ಗೆದ್ದ ಶ್ರೀಶಂಕರ್
ಅಥೆನ್ಸ್: ಗ್ರೀಸ್ನಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದ ಪುರುಷರ ಲಾಂಗ್ ಜಂಪ್ನಲ್ಲಿ ಭಾರತದ ಶ್ರೀಶಂಕರ್ ಮುರಳಿ ಚಿನ್ನದ ಪದಕ ಜಯಿಸಿದ್ದಾರೆ. 8.18 ಮೀ. ದೂರಕ್ಕೆ ನೆಗೆದ ಶ್ರೀಶಂಕರ್, ಭಾರತದವರೇ ಆದ ಜೆಸ್ವಿನ್ ಆ್ಯಡ್ರಿನ್ರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು.
ATP Rankings: ನೋವಾಕ್ ಜೋಕೋವಿಚ್ರನ್ನು ಹಿಂದಿಕ್ಕಿದ ಅಲ್ಕರಜ್ ನಂ.1!
ಸಮಾಧಾನಕರ ಪ್ರದರ್ಶನ ತೋರಿದ ಜೆಸ್ವಿನ್ 7.85 ಮೀ. ದೂರಕ್ಕೆ ನೆಗೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. 7.80 ಮೀ. ದೂರಕ್ಕೆ ನೆಗೆದ ಆಸ್ಪ್ರೇಲಿಯಾದ ಜಲೆನ್ ರಕ್ಕೆರ್ಗೆ ಕಂಚಿನ ಪದಕ ದೊರೆಯಿತು. ಶ್ರೀಶಂಕರ್ ಕಳೆದ ವರ್ಷವೂ ಚಿನ್ನದ ಪದಕ ಜಯಿಸಿದ್ದರು. ಅವರು ತಮ್ಮ ವೃತ್ತಿಬದುಕಿನ 2ನೇ ಶ್ರೇಷ್ಠ ನೆಗೆತವನ್ನು(8.31 ಮೀ.) ಈ ಕೂಟದಲ್ಲಿ ದಾಖಲಿಸಿದ್ದರು.
ವಿಶ್ವ ಟೇಬಲ್ ಟೆನಿಸ್: ಭಾರತದ ಸವಾಲು ಅಂತ್ಯ
ಡರ್ಬನ್: ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಭಾರತೀಯರ ಸವಾಲು ಅಂತ್ಯಗೊಂಡಿದೆ. ಬುಧವಾರ ತಾರಾ ಆಟಗಾರ್ತಿ, ವಿಶ್ವ ರ್ಯಾಂಕಿಂಗ್ನಲ್ಲಿ 39ನೇ ಸ್ಥಾನದಲ್ಲಿರುವ ಮನಿಕಾ ಬಾತ್ರಾ ಮಹಿಳಾ ಸಿಂಗಲ್ಸ್ 3ನೇ ಸುತ್ತಿನಲ್ಲಿ ವಿಶ್ವ ನಂ.13 ಪ್ಯುರ್ಟೊರಿಕೋದಾ ಆ್ಯಡ್ರಿಯಾನಾ ಡಿಯಾಜ್ ವಿರುದ್ಧ 11-6, 10-12, 9-11, 11-6, 11-13, 3-11 ಅಂತರದಲ್ಲಿ ಸೋತು ಹೊರಬಿದ್ದರು.
ಇದೇ ವೇಳೆ ಪುರುಷರ ಡಬಲ್ಸ್ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಶರತ್ ಕಮಲ್-ಜಿ.ಸತ್ಯನ್ ಜೋಡಿ ಇಂಗ್ಲೆಂಡ್ನ ಪಾಲ್ ಡ್ರಿಂಕ್ಹಾಲ್-ಲಿಯಾಮ್ ಪಿಚ್ಫೋರ್ಡ್ ವಿರುದ್ಧ 1-3 ಅಂತರದಲ್ಲಿ ಸೋಲನುಭವಿಸಿತು. ವಿಶ್ವ ರ್ಯಾಂಕಿಂಗ್ನಲ್ಲಿ 6ನೇ ಸ್ಥಾನದಲ್ಲಿರುವ ಮನಿಕಾ-ಸತ್ಯನ್ ಜೋಡಿ ಮಿಶ್ರ ಡಬಲ್ಸ್ನ ಪ್ರಿ ಕ್ವಾರ್ಟರ್ನಲ್ಲಿ ಸ್ವೀಡನ್ನ ಕ್ರಿಸ್ಟಿನಾ-ಟ್ರಲ್ಸ್ ಮೊರೆಗಾರ್ಡ್ ಜೋಡಿ ವಿರುದ್ಧ 1-3 ಅಂತರದಲ್ಲಿ ಸೋತು ಅಭಿಯಾನ ಕೊನೆಗೊಳಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.