
ಲಾಹೋರ್: ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧ ಫೆ.15ರಂದು ನಿಗದಿಯಾಗಿರುವ ಪಂದ್ಯದಲ್ಲಿ ಆಡಲ್ಲ ಎಂದಿದ್ದ ಪಾಕಿಸ್ತಾನ ಈಗ ತನ್ನ ನಿರ್ಧಾರದಿಂದ ಬಹುತೇಕ ಹಿಂದಕ್ಕೆ ಸರಿದಿದೆ. ಪಾಕಿಸ್ತಾನ ಸರ್ಕಾರದ ನಿಲುವಿಗೆ ವಿರುದ್ಧ ಎಂಬಂತೆ ಈಗ ಸ್ವತಃ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿಯೇ ಪಂದ್ಯದ ಕುರಿತು ಸುಳಿವು ನೀಡಿದ್ದಾರೆ. ಇದರೊಂದಿಗೆ ಹಲವು ದಿನಗಳ ಹೈಡ್ರಾಮಕ್ಕೆ ಬ್ರೇಕ್ ಬೀಳುವ ಸಮಯ ಬಂದಿದ್ದು, ಭಾರತ-ಪಾಕ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸೋಮವಾರ ಸಂಜೆ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಖ್ವಿ, ‘ನಾವು ಐಸಿಸಿ ಹಾಗೂ ಬಾಂಗ್ಲಾ ಕ್ರಿಕೆಟ್ ಮಂಡಳಿ ಜೊತೆ ಚರ್ಚೆ ನಡೆಸಿದ್ದೇವೆ. ಅದರ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದು ಸರಿಯಲ್ಲ. ಅವರ ಪ್ರತಿಕ್ರಿಯೆ ಸಿಕ್ಕ ಬಳಿಕ ನಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಐಸಿಸಿ ಪ್ರತಿಕ್ರಿಯೆ ಬಂದ ಬಳಿಕ ಅದರ ಬಗ್ಗೆ ನಮ್ಮ ಪ್ರಧಾನಿ (ಶೆಹಬಾಜ್ ಶರೀಫ್) ಜೊತೆ ಚರ್ಚೆ ನಡೆಸುತ್ತೇವೆ. ಅಂತಿಮ ನಿರ್ಧಾರವನ್ನು ನಾಳೆ ಅಥವಾ ನಾಡಿದ್ದು ಪ್ರಕಟಿಸುತ್ತೇವೆ’ ಎಂದಿದ್ದಾರೆ.
‘ಐಸಿಸಿ ಅಧಿಕಾರಿಗಳು ನಮ್ಮ ಮನೆಗೆ ಬಂದಿದ್ದಾರೆ. ಅವರನ್ನು ನಾವು ಗೌರವಿಸುತ್ತೇವೆ. ಬಾಂಗ್ಲಾ ಹಾಗೂ ಐಸಿಸಿ ನಡುವಿನ ಸಂಧಾನದ ಬಗ್ಗೆ ಹೆಚ್ಚೇನೂ ಹೇಳಲ್ಲ. ಬಾಂಗ್ಲಾದ ನಿಲುವು ಸರಿಯಾಗಿದ್ದು, ಹೀಗಾಗಿ ನಾವು ಅವರನ್ನು ಬೆಂಬಲಿಸಿದ್ದೇವೆ’ ಎಂದರು.
ಇದೇ ವೇಳೆ ಪಿಸಿಬಿ ಮೇಲೆ ಐಸಿಸಿ ಕಠಿಣ ಕ್ರಮಕೈಗೊಳ್ಳುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ನಖ್ವಿ, ‘ಈ ಬೆದರಿಕೆಗಳಿಗೆ ನಾವು ಹೆದರಲ್ಲ ಎಂಬುದು ನಿಮಗೆ ಗೊತ್ತು. ನಮ್ಮ ಫೀಲ್ಡ್ ಮಾರ್ಷಲ್ (ಅಸೀಂ ಮುನೀರ್) ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗಾಗಿ ಯಾವುದೇ ನಿರ್ಬಂಧಗಳ ಬಗ್ಗೆ ನಮಗೆ ಚಿಂತೆ ಇಲ್ಲ’ ಎಂದರು.
ಭದ್ರತೆ ಕಾರಣ ನೀಡಿ ಬಾಂಗ್ಲಾ ತಂಡ ಭಾರತದಲ್ಲಿ ವಿಶ್ವಕಪ್ ಪಂದ್ಯ ಆಡಲ್ಲ ಎಂದು ಪಟ್ಟುಹಿಡಿದಿತ್ತು. ಹೀಗಾಗಿ ಬಾಂಗ್ಲಾವನ್ನು ಐಸಿಸಿ ವಿಶ್ವಕಪ್ನಿಂದಲೇ ಹೊರಗಿಟ್ಟಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಸರ್ಕಾರ, ಭಾರತ ವಿರುದ್ಧ ಫೆ.15ರ ಪಂದ್ಯ ಆಡಲ್ಲ ಎಂದು ಹೇಳಿತ್ತು. ಬಳಿಕ ಇದನ್ನು ಪುನರುಚ್ಚರಿಸಿದ್ದ ಪ್ರಧಾನಿ ಶೆಹಬಾಜ್ ಶರೀಫ್, ಪಂದ್ಯ ಆಡಲ್ಲ ಎಂದಿದ್ದರು. ಸದ್ಯ ಇದಕ್ಕೆ ವ್ಯತಿರಿಕ್ತ ಹೇಳಿಕೆ ಎಂಬಂತೆ ಪಿಸಿಬಿ ಅಧ್ಯಕ್ಷರು ಪ್ರತಿಕ್ರಿಯಿಸಿದ್ದು, ಸರ್ಕಾರ ಮುಖಭಂಗಕ್ಕೊಳಗಾಗಿದೆ.
ಹಿಂದೂಗಳ ಮೇಲಿನ ಹಿಂಸೆ ಹಿನ್ನೆಲೆಯಲ್ಲಿ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ್ಗೆ ಐಪಿಎಲ್ನಿಂದ ಕೊಕ್
ಬಳಿಕ ಭದ್ರತೆಯ ಕಾರಣ ನೀಡಿ ಭಾರತದಲ್ಲಿ ಆಡಲು ಬಾಂಗ್ಲಾ ನಕಾರ. ತಂಡಕ್ಕೆ ಐಸಿಸಿ ಗೇಟ್ಪಾಸ್
ಇದಾದ ಬೆನ್ನಲ್ಲೇ ಬಾಂಗ್ಲಾದೇಶ ಬೆಂಬಲಿಸಿ ಭಾರತ ವಿರುದ್ಧ ಪಂದ್ಯ ಆಡಲು ಪಾಕ್ ತಂಡ ನಿರಾಕರಣೆ
ಈ ನಿರ್ಧಾರಕ್ಕೆ ಐಸಿಸಿ ಆಕ್ಷೇಪ. ಇಂಥ ಕ್ರಮ ಪಾಕ್ ತಂಡದ ಭವಿಷ್ಯಕ್ಕೆ ಅಪಾಯ ಎಂದು ಎಚ್ಚರಿಕೆ
ಅದರ ಬೆನ್ನಲ್ಲೇ ಐಸಿಸಿ, ಬಾಂಗ್ಲಾ ಕ್ರಿಕೆಟ್ ತಂಡದ ಜೊತೆ ಮಾತುಕತೆ. ಭಾರತ ವಿರುದ್ಧ ಆಡಲು ಒಲವು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.