ಯುಎಸ್‌ ಓಪನ್‌: ನೋವಾಕ್ ಜೋಕೋವಿಚ್ ಶುಭಾರಂಭ, ಮತ್ತೆ ನಂ.1!

By Kannadaprabha NewsFirst Published Aug 30, 2023, 8:48 AM IST
Highlights

ಟೂರ್ನಿಗೂ ಮುನ್ನ 2ನೇ ಸ್ಥಾನದಲ್ಲಿದ್ದ ಜೋಕೊವಿಚ್, ಸ್ಪೇನ್‌ನ ಕಾರ್ಲೊಸ್ ಆಲ್ಕರಜ್‌ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ಮೊದಲ ಸುತ್ತಿನಲ್ಲಿ ಜಯ ಅಗತ್ಯವಿತ್ತು. ಇದನ್ನು ಸಾಧಿಸಿದ ಅವರು ಟೂರ್ನಿ ಮುಕ್ತಾಯಗೊಂಡ ಬಳಿಕ ಅಧಿಕೃತವಾಗಿ ನಂ.1 ಸ್ಥಾನಕ್ಕೇರಲಿದ್ದಾರೆ. ಇನ್ನು 4ನೇ ಶ್ರೇಯಾಂಕಿತ ಡೆನ್ಮಾರ್ಕ್‌ನ ಹೋಲ್ಗರ್ ರ್‍ಯುನೆ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

ನ್ಯೂಯಾರ್ಕ್‌(ಆ.30): ನೋವಾಕ್‌ ಜೋಕೋವಿಚ್‌ ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂನಲ್ಲಿ ಶುಭಾರಂಭ ಮಾಡಿದ್ದು, ವಿಶ್ವ ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಜೋಕೋವಿಚ್, ಫ್ರಾನ್ಸ್‌ನ ಅಲೆಕ್ಸಾಂಡರ್‌ ಮುಲ್ಲರ್‌ ವಿರುದ್ಧ 6-0, 6-2, 6-3 ಸೆಟ್‌ಗಳಲ್ಲಿ ಗೆದ್ದರು. 

ಟೂರ್ನಿಗೂ ಮುನ್ನ 2ನೇ ಸ್ಥಾನದಲ್ಲಿದ್ದ ಜೋಕೊವಿಚ್, ಸ್ಪೇನ್‌ನ ಕಾರ್ಲೊಸ್ ಆಲ್ಕರಜ್‌ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ಮೊದಲ ಸುತ್ತಿನಲ್ಲಿ ಜಯ ಅಗತ್ಯವಿತ್ತು. ಇದನ್ನು ಸಾಧಿಸಿದ ಅವರು ಟೂರ್ನಿ ಮುಕ್ತಾಯಗೊಂಡ ಬಳಿಕ ಅಧಿಕೃತವಾಗಿ ನಂ.1 ಸ್ಥಾನಕ್ಕೇರಲಿದ್ದಾರೆ. ಇನ್ನು 4ನೇ ಶ್ರೇಯಾಂಕಿತ ಡೆನ್ಮಾರ್ಕ್‌ನ ಹೋಲ್ಗರ್ ರ್‍ಯುನೆ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

ಶಿಡ್ಲಘಟ್ಟದಲ್ಲಿ ದೇಶದ ಮೊದಲ ವೀಲ್ಹ್‌ಚೇರ್‌ ಟೆನಿಸ್‌ ಕೇಂದ್ರ

ಬೆಂಗಳೂರು: ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಭಾರತದ ಮೊದಲ ವೀಲ್ಹ್‌ಚೇರ್‌(ಗಾಲಿಕುರ್ಚಿ) ಟೆನಿಸ್ ಕೇಂದ್ರವನ್ನು 1.3 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವುದು ಎಂದು ಇಂಡಿಯನ್ ವಿಲ್ಹ್‌ಚೇರ್‌ ಟೆನಿಸ್‌ ಟೂರ್‌ನ (ಐಡಬ್ಲ್ಯುಟಿಟಿ) ಅಧ್ಯಕ್ಷ ಸುನಿಲ್ ಜೈನ್ ತಿಳಿಸಿದರು.

ಪಾಕ್‌ನ ಆರ್ಶದ್‌ ಸೋಲಿಸಿ ಚಿನ್ನ ಗೆದ್ದ ನೀರಜ್‌..! ಹೃದಯ ಗೆದ್ದ ಚೋಪ್ರಾ ತಾಯಿಯ ಮುತ್ತಿನಂತ ಮಾತು..!

ಮಂಗಳವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಗವಿಕಲ ಟೆನಿಸ್ ಆಟಗಾರರಿಗೆ ಅಗತ್ಯ ತರಬೇತಿ ನೀಡಲು ಈ ಕೇಂದ್ರ ಸಹಕಾರಿಯಾಗಲಿದೆ. ಇಲ್ಲಿ ಮೂರು ಕೋರ್ಟ್‌ಗಳು ಇರಲಿವೆ. ವೀಲ್ಹ್‌ಚೇರ್‌ ಟೆನಿಸ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡಿ, ಪ್ರಶಸ್ತಿಗಳನ್ನು ಜಯಿಸಲು ಇಂತಹ ಕೇಂದ್ರಗಳು ಅಗತ್ಯ. 2024ರೊಳಗೆ ಕೇಂದ್ರ ನಿರ್ಮಿಸಿ, ಎಲ್ಲಾ ವಯೋಮಾನದವರಿಗೂ ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ರ್‍ಯಾಂಕಿಂಗ್‌: ಪ್ರಣಯ್‌ಗೆ ಜೀವನಶ್ರೇಷ್ಠ 6ನೇ ಸ್ಥಾನ

ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ತಾರಾ ಶಟ್ಲರ್‌ ಎಚ್‌.ಎಸ್‌.ಪ್ರಣಯ್‌ ಬ್ಯಾಡ್ಮಿಂಟನ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 6ನೇ ಸ್ಥಾನಕ್ಕೇರಿದ್ದಾರೆ. ಮಂಗಳವಾರ ಪ್ರಕಟಗೊಂಡ ಪುರುಷರ ಸಿಂಗಲ್ಸ್‌ ರ್‍ಯಾಂಕಿಂಗ್‌ನಲ್ಲಿ 31 ವರ್ಷದ ಪ್ರಣಯ್‌ 72437 ಅಂಕಗಳೊಂದಿಗೆ 3 ಸ್ಥಾನ ಜಿಗಿತ ಕಂಡರು. ಅವರು ಅಗ್ರ-10ರಲ್ಲಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದು, ಲಕ್ಷ್ಯ ಸೇನ್‌ 1 ಸ್ಥಾನ ಕುಸಿದು 12ನೇ ಸ್ಥಾನಕ್ಕೆ ತಲುಪಿದ್ದಾರೆ. ಕಿದಂಬಿ ಶ್ರೀಕಾಂತ್‌ 20ನೇ ಸ್ಥಾನದಲ್ಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು 14ನೇ ಸ್ಥಾನಕ್ಕೇರಿದ್ದು, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು?

ಕಿಂಗ್ಸ್‌ ಕಪ್‌ ಫುಟ್ಬಾಲ್‌: ಸುನಿಲ್‌ ಚೆಟ್ರಿ ಗೈರು

ನವದೆಹಲಿ: ಥಾಯ್ಲೆಂಡ್‌ನಲ್ಲಿ ಸೆ.7ರಿಂದ 10ರ ವರೆಗೆ ನಡೆಯಲಿರುವ 4 ದೇಶಗಳ ನಡುವಿನ ಕಿಂಗ್ಸ್‌ ಕಪ್‌ ಫುಟ್ಬಾಲ್‌ ಟೂರ್ನಿಗೆ ತಾರಾ ಆಟಗಾರ ಸುನಿಲ್‌ ಚೆಟ್ರಿ ಗೈರಾಗಲಿದ್ದಾರೆ. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅವರು ಟೂರ್ನಿಯಲ್ಲಿ ಆಡುತ್ತಿಲ್ಲ. ನಾಕೌಟ್‌ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಫಿಫಾ ರ್‍ಯಾಂಕಿಂಗ್‌ನಲ್ಲಿ 99ನೇ ಸ್ಥಾನದಲ್ಲಿರುವ ಭಾರತ ಸೆಮಿಫೈನಲ್‌ನಲ್ಲಿ ಸೆ.7ಕ್ಕೆ ಇರಾಕ್‌ ವಿರುದ್ಧ ಆಡಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಲೆಬನಾನ್‌-ಥಾಯ್ಲೆಂಡ್‌ ಸೆಣಸಲಿವೆ. ಸೆ.10ಕ್ಕೆ ಫೈನಲ್‌ ನಿಗದಿಯಾಗಿದೆ. 2019ರಲ್ಲಿ ಭಾರತ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ಕುಸ್ತಿ ಒಕ್ಕೂಟ ಎಲೆಕ್ಷನ್‌ ಮತ್ತಷ್ಟು ವಿಳಂಬ ಖಚಿತ!

ನವದೆಹಲಿ: ಹಲವು ಬಾರಿ ಮುಂದೂಡಿಕೆಯಾಗಿರುವ ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ)ನ ಬಹುನಿರೀಕ್ಷಿತ ಚುನಾವಣೆ ಮತ್ತಷ್ಟು ವಿಳಂಬವಾಗುವುದು ಖಚಿತವಾಗಿದೆ. ಆ.12ಕ್ಕೆ ನಡೆಯಬೇಕಿದ್ದ ಚುನಾವಣೆಗೆ ಪಂಜಾಬ್‌ ಹಾಗೂ ಹರ್ಯಾಣ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಮಂಗಳವಾರ ಸುಪ್ರೀಂ ಕೋರ್ಟ್‌ ನಿರಾಕರಿಸಿತು. 

ಚುನಾವಣೆಗೆ ತಡೆ ಪ್ರಶ್ನಿಸಿ ಆಂಧ್ರ ಪ್ರದೇಶ ಅಮೆಚೂರ್‌ ಕುಸ್ತಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಭಯ್‌ ಓಕಾ ಹಾಗೂ ಪಂಕಜ್‌ ಮಿತ್ತಲ್‌ ಅವರಿದ್ದ ಪೀಠ, ಚುನಾವಣಾ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿದ್ದಲ್ಲದೇ ಹೈಕೋರ್ಟ್‌ಗೆ ತೆರಳುವಂತೆ ಅರ್ಜಿದಾರರಿಗೆ ನಿರ್ದೇಶಿಸಿತು. ಈ ಮೊದಲು ಜು.6ಕ್ಕೆ ನಡೆಯಬೇಕಿದ್ದ ಚುನಾವಣೆ ಬಳಿಕ ಜು.11ಕ್ಕೆ ಮುಂದೂಡಿಕೆಯಾಗಿತ್ತು. ನಂತರದ ಆ.12ಕ್ಕೆ ಚುನಾವಣೆ ನಡೆಸುವುದಾಗಿ ಡಬ್ಲ್ಯುಎಫ್‌ಐನ ತಾತ್ಕಾಲಿಕ ಸಮಿತಿ ಘೋಷಿಸಿತ್ತು.

click me!