
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಾಪಸ್ಸಾಗಿದ್ದು, ತಂಡವನ್ನು ಇಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮುನ್ನಡೆಸಲಿದ್ದಾರೆ.
ರಾಂಚಿಯಲ್ಲಿ ಆಸ್ಪ್ರೇಲಿಯಾ ವಿರುದ್ಧದ ನಡೆದಿದ್ದ 3ನೇ ಟೆಸ್ಟ್ ವೇಳೆ ವಿರಾಟ್ ಭುಜದ ಗಾಯಕ್ಕೆ ತುತ್ತಾಗಿದ್ದರು. ಧರ್ಮಶಾಲಾದಲ್ಲಿ ನಡೆದ ಕೊನೆ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ಅವರು, ಈ ಆವೃತ್ತಿಯ ಐಪಿಎಲ್ನ ಮೊದಲ ಮೂರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು ಸಂಪೂರ್ಣ ಗುಣಮುಖರಾಗಿದ್ದು ಶುಕ್ರವಾರದ ಪಂದ್ಯಕ್ಕೆ ಲಭ್ಯರಿರಲಿದ್ದಾರೆ. ಈ ಸುದ್ದಿ ಆರ್ಸಿಬಿ ತಂಡಕ್ಕೆ ಮಾತ್ರವಲ್ಲ ಅಭಿಮಾನಿಗಳಲ್ಲೂ ಉತ್ಸಾಹ ಹೆಚ್ಚಿಸಿದೆ.
ಸ್ಥಿರತೆ ಕಾಯ್ದುಕೊಳ್ಳಬೇಕಿದೆ ಆರ್ಸಿಬಿ: ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಸನ್ರೈಸರ್ಸ್ ವಿರುದ್ಧ ಸೋಲುಂಡಿದ್ದ ಆರ್ಸಿಬಿ, ತವರಿನಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ನಡೆದಿದ್ದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಖಾತೆ ತೆರೆದಿತ್ತು. ಆದರೆ ಕಿಂಗ್ಸ್ ಇಲೆವೆನ್ ವಿರುದ್ಧ ಎಬಿ ಡಿವಿಲಿಯರ್ಸ್ ಅಬ್ಬರದ ನಡುವೆಯೂ ತಂಡ ಪಂದ್ಯವನ್ನು ಕೈಚೆಲ್ಲಿತ್ತು. ಅಸ್ಥಿರ ಪ್ರದರ್ಶನದಿಂದ ಕಂಗೆಟ್ಟಿರುವ ತಂಡಕ್ಕೆ ವಿರಾಟ್ ಆಗಮನ ಬಲ ನೀಡಿದೆ. ಕ್ರಿಸ್ ಗೇಲ್ ಲಯ ಕಳೆದುಕೊಂಡು ಪರದಾಡುತ್ತಿರುವುದು ಸಹ ಆರ್ಸಿಬಿಗೆ ದೊಡ್ಡ ತಲೆನೋವಾಗಿ ಪರಿಣಿಮಿಸಿದ್ದು ಆರಂಭಿಕರ ಕೊರತೆ ಎದುರಾಗಿದೆ.
ಮುಂಬೈಗೆ ರಾಣಾ, ಬೂಮ್ರಾ ಬಲ: ಆಡಿರುವ 3 ಪಂದ್ಯಗಳಿಂದ 2 ಗೆಲುವು ಸಾಧಿಸಿರುವ ಮುಂಬೈಗೆ ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ ಸಾಧಿಸಿದ ಜಯ ಆತ್ಮವಿಶ್ವಾಸ ಹೆಚ್ಚಿಸಿದೆ. ರೋಹಿತ್ ಪಡೆ ಸಮತೋಲನದಿಂದ ಕೂಡಿದೆ. ಅತ್ಯದ್ಭುತ ಲಯದಲ್ಲಿರುವ ನಿತೀಶ್ ರಾಣಾ (34,50,45 ರನ್) ಮೂರು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಪಾಂಡ್ಯ ಸಹೋದರರಾದ ಹಾರ್ದಿಕ್ ಹಾಗೂ ಕ್ರುನಾಲ್ ಆಲ್ರೌಂಡ್ ಆಟ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗುತ್ತಿದೆ. ಲಯ ಕಳೆದುಕೊಂಡಿರುವ ಪೊಲ್ಲಾರ್ಡ್ ಬದಲಿಗೆ ಶ್ರೀಲಂಕಾದ ಅಸಿಲಾ ಗುಣರತ್ನೆ ಆಡುವ ಸಂಭವವಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.