ಕಾಮನ್‌ವೆಲ್ತ್ ಗೇಮ್ಸ್'ಗೆ ಕನ್ನಡದ ಕುವರಿಯರು

By Suvarna Web DeskFirst Published Mar 11, 2018, 12:37 PM IST
Highlights

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆಂದು 12 ಆಟಗಾರ್ತಿಯರ ಭಾರತ ತಂಡವನ್ನು ಆಯ್ಕೆಮಾಡಲಾಗಿದ್ದು, ಅದರಲ್ಲಿ ಕೊಡಗು ಜಿಲ್ಲೆಯನವನೀತ ಪಟ್ಟೆಮನೆ ಹಾಗೂ ಮಂಡ್ಯ ಜಿಲ್ಲೆಯಬಾಂಧವ್ಯ ಸ್ಥಾನ ಪಡೆದಿದ್ದಾರೆ.

ಏ.4ರಿಂದ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್'ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಬಾಸ್ಕೆಟ್‌ಬಾಲ್ ಆಟದಲ್ಲಿ ಕನ್ನಡಿತಿಯರಿಬ್ಬರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆಂದು 12 ಆಟಗಾರ್ತಿಯರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಕೊಡಗು ಜಿಲ್ಲೆಯ ನವನೀತ ಪಟ್ಟೆಮನೆ ಹಾಗೂ ಮಂಡ್ಯ ಜಿಲ್ಲೆಯ ಬಾಂಧವ್ಯ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೇ ಇಬ್ಬರೂ ರೈಲ್ವೇ ಉದ್ಯೋಗಿಗಳು. ಅಭ್ಯಾಸ ಪಂದ್ಯಕ್ಕಾಗಿ ಭಾರತ ತಂಡ ಸೋಮವಾರ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲು ರಾಜ್ಯದ ಆಟಗಾರ್ತಿಯರು ಉತ್ಸುಕರಾಗಿದ್ದಾರೆ.

ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ್ದ  ನವನೀತ.

ಕೊಡಗು ಜಿಲ್ಲೆಯ ನವನೀತ ಕಳೆದ ವರ್ಷ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಮಹಿಳಾ

ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನ ‘ಬಿ’ ಡಿವಿಷನ್ ವಿಭಾಗದಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದರು. ಮಾತ್ರವಲ್ಲದೇ ಪಂದ್ಯದಲ್ಲಿ

ಪಾಲ್ಗೊಂಡ ಕರ್ನಾಟಕದ ಏಕೈಕ ಆಟಗಾರ್ತಿ ಎಂಬ ಹಿರಿಮೆಗೂ ಭಾಜನರಾಗಿದ್ದರು. ನವನೀತ ಸುಂಟಿಕೊಪ್ಪದ ಪಿ.ಪಿ.ಉದಯ

ಕುಮಾರ್ ಹಾಗೂ ಪಿ.ಯು.ಗಿರಿಜಾ ದಂಪತಿಯ ಪುತ್ರಿ. ಸುಂಟಿಕೊಪ್ಪದ ಸಂತ ಮೇರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದು, ಮೈಸೂರಿನಲ್ಲಿ ಪಿಯುಸಿ ಪೂರ್ಣಗೊಳಿಸಿದ್ದಾರೆ. ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಎಂ.ಎ.

ಸಮಾಜಶಾಸ್ತ್ರ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಇದೀಗ ದಕ್ಷಿಣ ರೈಲ್ವೇಸ್‌ನಲ್ಲಿ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಚೀನಾದ ತೈವಾನ್‌ನಲ್ಲಿ ಇತ್ತೀಚೆಗೆ ನಡೆದ ವಿಲಿಯಂ ಜಾನ್ ಕಪ್ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ನವನೀತ ಭಾಗವಹಿಸಿದ್ದರು. 2016-17ನೇ ಸಾಲಿನಲ್ಲಿ ಪಾಂಡಿಚೇರಿಯಲ್ಲಿ ನಡೆದ ಸೀನಿಯರ್ ನ್ಯಾಷನಲ್ಸ್‌ನಲ್ಲಿ ಕಂಚಿನ ಪದಕ, 2012-13ರಲ್ಲಿ ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್‌ನ ಪ್ರಶಸ್ತಿ,2014-15ರಲ್ಲಿ ಏಕಲವ್ಯ  ಪ್ರಶಸ್ತಿ, 2014-15ನೇ  ಸಾಲಿನಲ್ಲಿ ಅನಂತಪುರದಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಹಾಗೂ ಬೆಸ್ಟ್ ಆಲ್ ರೌಂಡರ್

ಪ್ರಶಸ್ತಿ, 2015-16ನೇ ಸಾಲಿನಲ್ಲಿ ಮೈಸೂರಿನಲ್ಲಿ ನಡೆದ ಭಾರತೀಯ ರೈಲ್ವೇಸ್ ತಂಡದಿಂದ ಸೀನಿಯರ್ ನ್ಯಾಷನಲ್ ಚಿನ್ನದ ಪದಕ ಹಾಗೂ ಅತ್ಯದ್ಭುತ ಆಟಗಾರ್ತಿ ಪ್ರಶಸ್ತಿಗಳನ್ನು ಪಡೆದು ಕೊಂಡಿದ್ದಾರೆ. ನವನೀತ ಅವರು ಶಾಲಾ ದಿನಗಳಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದು, ಬಾಸ್ಕೆಟ್‌ಬಾಲ್ ಕ್ರೀಡಾಕೂಟಗಳಲ್ಲಿ ಮಿಂಚಿದ್ದರು.

ಭರವಸೆ ಆಟಗಾರ್ತಿ ಬಾಂಧವ್ಯ:

ಇನ್ನೂ 19 ವರ್ಷದ ಬಾಂಧವ್ಯ ಮಂಡ್ಯ ಜಿಲ್ಲೆಯ ಹೆಮ್ಮಿಗೆಯ ಕೃಷಿಕ ಮಹೇಶ್, ಪುಟ್ಟತಾಯಮ್ಮ ದಂಪತಿಯ ಪುತ್ರಿ. 5ನೇ ತರಗತಿಯಿಂದಲೇ ಬಾಸ್ಕೆಟ್'ಬಾಲ್ ಆಡಲು ಆರಂಭಿಸಿದ ಬಾಂಧವ್ಯ, ಮಂಡ್ಯದ ಕ್ರೀಡಾವಸತಿ ನಿಲಯದಲ್ಲಿದ್ದು ತರಬೇತಿ ಪಡೆದಿದ್ದಾರೆ. ಆ ದಿನಗಳಲ್ಲಿ ವಿವೇಕಾನಂದ ಬಾಸ್ಕೆಟ್‌ಬಾಲ್ ಕ್ಲಬ್‌ನಲ್ಲಿ ಆಡಿ ಗಮನ

ಸಳೆದಿದ್ದ ಬಾಂಧವ್ಯರ ಸಾಧನೆಗೆ ತರಬೇತುದಾರ ರವಿಪ್ರಕಾಶ್ ಮುಖ್ಯ ಕಾರಣ. ಮೂಡುಬಿದಿರಿಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿರುವ ಬಾಂಧವ್ಯ, ನಂತರ ಕ್ರೀಡಾ ಕೋಟಾದಡಿ ಕೆಲಸ ಪಡೆದು ದಕ್ಷಿಣ ರೈಲ್ವೇಸ್‌ನಲ್ಲಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಂಧವ್ಯಈಗಾಗಲೇ 18 ರಾಷ್ಟ್ರಮಟ್ಟದ ಬ್ಯಾಸ್ಕೆಟ್‌ಬಾಲ್ ಕ್ರೀಡಾಕೂಟದಲ್ಲಿ, ೫ನೇ ಅಂತಾ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. 10ನೇ ತರಗತಿಯಲ್ಲಿದ್ದಾಗ ಶ್ರೀಲಂಕಾ, ಪ್ರಥಮ ಪಿಯುಸಿಯಲ್ಲಿದ್ದಾಗ ಭಾರತ ಕಿರಿಯರ ತಂಡದಿಂದ ಒಮಾನ್ ದೇಶ, ಸೀನಿಯರ್ ಇಂಡಿಯಾ ತಂಡದಿಂದ ಚೀನಾದಲ್ಲಿ,

ಬ್ಯಾಂಕಾಕ್‌ನಲ್ಲಿ ನಡೆದ ಪಂದ್ಯದಲ್ಲಿ ಜೂನಿಯರ್ ಇಂಡಿಯಾ ತಂಡದ ನಾಯಕಿಯಾಗಿದ್ದರು. ಕರ್ನಾಟಕ ಒಲಿಂಪಿಕ್ ಸಂಸ್ಥೆ ನೀಡುವ ಪ್ರಶಸ್ತಿಗೆ ಬಾಂಧವ್ಯ ಭಾಜನರಾಗಿದ್ದಾರೆ.

- ವಿಘ್ನೇಶ್ ಎಂ. ಭೂತನಕಾಡು ಮಡಿಕೇರಿ

click me!