BCCI ನೊಟೀಸ್ ಬೆನ್ನಲ್ಲೇ CACಗೆ ಕಪಿಲ್ ದೇವ್ ರಾಜಿನಾಮೆ!

By Web DeskFirst Published Oct 2, 2019, 4:13 PM IST
Highlights

ಕ್ರಿಕೆಟ್ ಸಲಹಾ ಸಮಿತಿಯ ಮುಖ್ಯಸ್ಥ ಸ್ಥಾನದಿಂದ ಕಪಿಲ್ ದೇವ್ ಕೆಳಗಿಳಿದಿದ್ದಾರೆ.  ಸಲಹಾ ಸಮಿತಿ ಸದಸ್ಯೆ ಶಾಂತಾ ರಂಗಸ್ವಾಮಿ ರಾಜಿನಾಮೆ ನೀಡಿದ ಬಳಿಕ ಇದೀಗ ಕಪಿಲ್ ಕೂಡ ರಾಜಿನಾಮೆ ನೀಡಿದ್ದು ಬಿಸಿಸಿಐ ಹಾಗೂ ಆಡಳಿತ ಮಂಡಿಳಿ ತಿಕ್ಕಾಟ ಶುರುವಾಗಿದೆ.
 

ಮುಂಬೈ(ಅ.02): ಬಿಸಿಸಿಐ ಹಾಗೂ ಆಡಳಿತ ಸದಸ್ಯರ ನಡುವಿನ ಸ್ವಹಿತಾಸಕ್ತಿ ತಿಕ್ಕಾಟ ಜೋರಾಗುತ್ತಿದೆ. ಕ್ರಿಕೆಟ್ ಸಲಹಾ ಸಮಿತಿಗೆ ನೊಟೀಸ್ ನೀಡಿದ ಬೆನ್ನಲ್ಲೇ ಇದೀಗ ಎರಡನೇ ವಿಕೆಟ್ ಪತನಗೊಂಡಿದೆ. ಸ್ವಹಿತಾಸಕ್ತಿ ಸಂಘರ್ಷದ ನೊಟೀಸ್ ಪಡೆದ ಸಲಹಾ ಸಮಿತಿ ಮುಖ್ಯಸ್ಥ ಕಪಿಲ್ ದೇವ್ ಇದೀಗ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 

ಇದನ್ನೂ ಓದಿ: ಬಿಸಿಸಿ ನೊಟೀಸ್; ಉತ್ತರಕ್ಕೂ ಮೊದಲೇ ರಾಜಿನಾಮೆ ನೀಡಿದ ಶಾಂತಾ!

ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಜೀವ್ ಗುಪ್ತ ದೂರಿನ ಆಧಾರದಲ್ಲಿ ಬಿಸಿಸಿಐ ಎಥಿಕ್ಸ್ ಆಫೀಸರ್ ಡಿಕೆ ಜೈನ್ ಕಪಿಲ್ ದೇವ್ ನೇತೃತ್ವದ ಸಲಹಾ ಸಮಿತಿಗೆ ನೊಟೀಸ್ ನೀಡಿತ್ತು. ಸಲಹಾ ಸಮಿತಿಗೂ ಮೊದಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಚೇರ್ಮೆನ್ ರಾಹುಲ್ ದ್ರಾವಿಡ್‌ಗೂ ಸ್ವಹಿತಾಸಕ್ತಿ ಸಂಘರ್ಷಕ್ಕೆ ನೊಟೀಸ್ ನೀಡಿದೆ.  ನೊಟೀಸ್ ನೀಡಿದ ಬೆನ್ನಲ್ಲೇ ಸಲಹಾ ಸಮಿತಿ ಸದಸ್ಯೆ ಶಾಂತಾ ರಂಗಸ್ವಾಮಿ ರಾಜಿನಾಮೆ ನೀಡಿದ್ದರು. 2 ದಿನದ ಬಳಿಕ ಇದೀಗ ಕಪಿಲ್ ದೇವ್ ಕೂಡ ರಾಜಿನಾಮೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಶಾಸ್ತ್ರಿ ಎದುರಾಗಿದೆ ಸಂಕಷ್ಟ; ಹೊಸದಾಗಿ ನಡೆಯುತ್ತಾ ಕೋಚ್ ಆಯ್ಕೆ?

ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಬಿಸಿಸಿಐಗೆ ಧನ್ಯವಾದ. ಟೀಂ ಇಂಡಿಯಾ ತಂಡಕ್ಕೆ ಕೋಚ್ ಆಯ್ಕೆ ಮಾಡೋ ಜವಾಬ್ದಾರಿ ನನಗೆ ನೀಡಿರುವುದು ಸೌಭಾಗ್ಯವಾಗಿತ್ತು. ಇದೀಗ ತಕ್ಷಣದ ಪರಿಣಾಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಕಪಿಲ್ ದೇವ್, ಸುಪ್ರೀಂ ಕೋರ್ಟ್ ನೇಮಿಸಿದ COA ವಿನೋದ್ ರೈಗೆ ಇಮೇಲ್ ಮೂಲಕ  ರಾಜಿನಾಮೆ ರವಾನಿಸಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದ ಕಪಿಲ್ ದೇವ್ , ಪ್ಲೇಯರ್ಸ್ ಅಸೋಸಿಯೇಶನ್‌ನಲ್ಲಿ ನಿರ್ದೇಶಕರಾಗಿದ್ದಾರೆ. 

ಇದನ್ನೂ ಓದಿ: ಸ್ವಹಿತಾಸಕ್ತಿಗೆ ದ್ರಾವಿಡ್‌ ಒಳಪಡಲ್ಲ: BCCI ಸ್ಪಷ್ಟನೆ

ಕಪಿಲ್ ದೇವ್, ಶಾಂತ ರಂಗಸ್ವಾಮಿ ಹಾಗೂ ಅಂಶುಮಾನ್ ಗಾಯಕ್ವಾಡ್ ಸದಸ್ಯರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯನ್ನು ಪುನರ್ ಆಯ್ಕೆ ಮಾಡಿತ್ತು. ಇದೀಗ ಕಪಿಲ್ ದೇವ್ ಹಾಗೂ ಶಾಂತಾರಂಗಸ್ವಾಮಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅಂಶುಮಾನ್ ಗಾಯಕ್ವಾಡ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಏನಿದು ಸ್ವಹಿತಾಸಕ್ತಿ ಸಂಘರ್ಷ:
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಬಳಿಕ ಕ್ರಿಕೆಟ್ ಹಾಗೂ ಬಿಸಿಸಿಐ ಆಡಳಿತವನ್ನು ಸ್ವಚ್ಚ ಮಾಡಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ಎನ್ ಲೋಧ ನೇತೃತ್ವದ ಸಮಿತಿ ನೇಮಿಸಿತು. ಲೋಧ ಸಮಿತಿ , ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೀಡಿದ ವರದಿ ಆಧರಿ, ಬಿಸಿಸಿಐನಲ್ಲಿ ಹಲವು ಬದಲಾವಣೆಗೆ ಸೂಚಿಸಿತು. ಲೋಧ ಸಮಿತಿ ಸೂಚಿಸಿದ ಶಿಫಾರಸನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಸೂಚನೆ ನೀಡಿದೆ. ಲೋಧ ಸಮಿತಿ ಶಿಫಾರಸಿನಲ್ಲಿ ಸ್ವಹಿತಾಸಕ್ತಿ ಸಂಘರ್ಷ ಪ್ರಮುಖವಾಗಿದೆ.  ಲೋಧ ಸಮಿತಿ ಶಿಫಾರಸಿನ ಪ್ರಕಾರ ಯಾರೂ ಕೂಡ ಬಿಸಿಸಿಐನಲ್ಲಿ ಎರಡು ಹುದ್ದೆ ಹೊಂದುವಂತಿಲ್ಲ. ಇದು ಸ್ವಹಿತಾಸಕ್ತಿಗೆ ವಿರುದ್ಧವಾಗಿದೆ. 


 

click me!