
ಟೋಕಿಯೋ(ಜು.28): ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ. ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಬಿ.ಸಾಯಿ ಪ್ರಣೀತ್, ಅಗ್ರ ಶ್ರೇಯಾಂಕಿತ ಆಟಗಾರ ಜಪಾನ್ನ ಕೆಂಟೋ ಮೊಮೊಟಾ ವಿರುದ್ಧ ಸೋಲುಂಡು ಹೊರಬಿದ್ದರು.
ಇದನ್ನೂ ಓದಿ: ಇಂಡೋನೇಷ್ಯಾ ಓಪನ್ 2019: ಸಿಂಧು ಪ್ರಶಸ್ತಿ ಕನಸು ಭಗ್ನ!
ಶನಿವಾರ ನಡೆದ ಉಪಾಂತ್ಯದ ಪಂದ್ಯದಲ್ಲಿ ಪ್ರಣೀತ್, 18-21, 12-21 ಗೇಮ್ಗಳಲ್ಲಿ ಪರಾಭವಗೊಂಡರು. ಕೇವಲ 45 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತು. ಮೊದಲ ಗೇಮ್ನಲ್ಲಿ ಉತ್ತಮ ಪೈಪೋಟಿ ನೀಡಿದ್ದ ಪ್ರಣೀತ್, 6-11ರ ಹಿನ್ನಡೆ ಹೊಂದಿದ್ದರೂ ಪುಟಿದೆದ್ದು ಗೇಮ್ ಗೆಲ್ಲುವ ವಿಶ್ವಾಸ ಗಳಿಸಿದ್ದರು. ಆದರೆ ಮೊಮೊಟಾ ಆಕ್ರಮಣಕಾರಿ ಆಟವಾಡಿ ಗೇಮ್ ತಮ್ಮದಾಗಿಸಿಕೊಂಡರು. 2ನೇ ಗೇಮ್ನಲ್ಲಿ ಪ್ರಣೀತ್ 9-6ರ ಮುನ್ನಡೆ ಪಡೆದರೂ, ಬಿಡುವಿನ ವೇಳೆಗೆ ಮೊಮೊಟಾ 11-9ರಿಂದ ಮುನ್ನಡೆದರು. ಬಳಿಕ ಸತತವಾಗಿ ಅಂಕ ಕಲೆಹಾಕಿ, ಸುಲಭವಾಗಿ ಫೈನಲ್ ಪ್ರವೇಶಿಸಿದರು. ಭಾನುವಾರ ಪ್ರಶಸ್ತಿಗಾಗಿ ಮೊಮೊಟಾ, ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿವಿರುದ್ಧ ಸೆಣಸಲಿದ್ದಾರೆ.
ಟೂರ್ನಿಯಲ್ಲಿ ಒಂದೂ ಗೇಮ್ ಸೋಲದೆ ಸೆಮೀಸ್ಗೇರಿದ್ದ ಪ್ರಣೀತ್, ಈ ವರ್ಷ ಮೊದಲ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದರು. ಆದರೆ ವಿಶ್ವ ನಂ.1 ಆಟಗಾರನ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಕೆಲ ತಿಂಗಳುಗಳ ಹಿಂದೆ ಸಿಂಗಾಪುರ ಓಪನ್ ಟೂರ್ನಿಯಲ್ಲೂ ಪ್ರಣೀತ್, ಮೊಮೊಟಾ ವಿರುದ್ಧ ಸೋಲುಂಡಿದ್ದರು. ಈ ವರ್ಷ ಸ್ವಿಸ್ ಓಪನ್ ಫೈನಲ್ ಪ್ರವೇಶಿಸಿದ್ದನ್ನು ಹೊರತುಪಡಿಸಿ ಉಳಿದ್ಯಾವ ಟೂರ್ನಿಗಳಲ್ಲಿ ಪ್ರಣೀತ್ಗೆ ಪ್ರಶಸ್ತಿ ಸುತ್ತು ಪ್ರವೇಶಿಸಲು ಸಾಧ್ಯವಾಗಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.