
ಅಹ್ಮದಾಬಾದ್: ಪ್ರಮುಖ ಆಟಗಾರರಾದ ಪ್ರದೀಪ್ ನರ್ವಾಲ್ ಅವರ 13 ಅಂಕ ಹಾಗೂ ಅಜಯ್ ಠಾಕೂರ್ ಅವರ 11 ಅಂಕಗಳ ನೆರವಿನಿಂದಾಗಿ, ಮಂಗಳವಾರ ನಡೆದ ವಿಶ್ವ ಕಬಡ್ಡಿ ಪಂದ್ಯಾವಳಿಯ ತನ್ನ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 69-18 ಅಂಕಗಳ ಅಂತರದಲ್ಲಿ ಮಣಿಸಿದ ಭಾರತ, ಪಂದ್ಯಾವಳಿಯ ಸೆಮಿಫೈನಲ್'ಗೆ ಕಾಲಿಟ್ಟಿದೆ.
ಅಲ್ಲಿನ ಟ್ರಾನ್ಸ್'ಸ್ಟೇಡಿಯಾದಲ್ಲಿ ನಡೆದ ಪಂದ್ಯದಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ಹುರುಪು ತುಂಬಿಸುವಂಥ ಪ್ರದರ್ಶನ ನೀಡಿದ ಭಾರತ, ಈ ಗೆಲವಿನೊಂದಿಗೆ ಟೂರ್ನಿಯ ಅಂಕಪಟ್ಟಿಯಲ್ಲಿ ತಾನಿರುವ ಎ ಗುಂಪಿನಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಈವರೆಗೆ ಐದು ಪಂದ್ಯಗಳನ್ನಾಡಿರುವ ಅದು, 4 ಗೆಲವು, 1 ಸೋಲು ಕಂಡು ಒಟ್ಟಾರೆ 21 ಅಂಕಗಳನ್ನು ಪೇರಿಸಿದೆ. 25 ಅಂಕಗಳಿಸಿರುವ ದಕ್ಷಿಣ ಕೊರಿಯಾದ ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದು, ಭಾರತದೊಂದಿಗೆ ಈ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಿದ ಮತ್ತೊಂದು ತಂಡವಾಗಿದೆ.
ಪಂದ್ಯದ ಆರಂಭದಲ್ಲೇ ಭಾರತೀಯ ಮೂಲದ ಸೋಮಶೇಖರ್ ಕಾಲಿಯಾ ಅವರು, ಇಂಗ್ಲೆಂಡ್ ತಂಡಕ್ಕೆ 2 ಅಂಕಗಳನ್ನು ತಂದಿತ್ತರು. ಆದರೆ, ಮೂರನೇ ನಿಮಿಷದಲ್ಲಿ ಭಾರತ ಪಾಳಯದ ಸಂದೀಪ್ ನರ್ವಾಲ್ ಒಂದು ಸೂಪರ್ ರೈಡ್ ನಡೆಸಿ ಭಾರತಕ್ಕೆ ಒಮ್ಮೆಲೇ ಐದು ತಂದುಕೊಟ್ಟರು. ಅಂತೆಯೇ, ಆರನೇ ನಿಮಿಷದಲ್ಲಿ ಎದುರಾಳಿಗಳನ್ನು ಆಲೌಟ್ ಮಾಡಿದ ಭಾರತ, ತನ್ನ ಅಂಕಗಳ ಅಂತರವನ್ನು 12-3ಕ್ಕೆ ಹೆಚ್ಚಿಸಿಕೊಂಡಿತು.
ಈ ಹಂತದಲ್ಲಿ ಭಾರತಕ್ಕೆ ನೆರವಾದ ರೈಡರ್ ಪ್ರದೀಪ್ ನರ್ವಾಲ್, ಮತ್ತೆರಡು ಅಂಕಗಳನ್ನು ತರುವ ಮೂಲಕ ಈ ಅಂತರವನ್ನು 14-3ಕ್ಕೆ ಹೆಚ್ಚಿಸಿದರು. ಅಲ್ಲಿ ಮಿಂಚಿದ ಸಂದೀಪ್ ನರ್ವಾಲ್ ಕೇವಲ 13 ನಿಮಿಷಗಳಲ್ಲಿ ಭಾರತಕ್ಕೆ 13 ಅಂಕಗಳನ್ನು ತಂದುಕೊಟ್ಟರು. 16ನೇ ನಿಮಿಷದಲ್ಲಿ ಭಾರತ, ಇಂಗ್ಲೆಂಡ್ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡುವ ಮೂಲಕ ತನ್ನ ಅಂಕಗಳ ಅಂತರವನ್ನು 35-5ಕ್ಕೆ ಹೆಚ್ಚಿಸಿಕೊಂಡಿತು. ಇನ್ನು, 20ನೇ ನಿಮಿಷದಲ್ಲಿ ಇಂಗ್ಲೆಂಡ್ ತಂಡವನ್ನು ಮತ್ತೆ ಆಲೌಟ್ ಮಾಡಿದ ಭಾರತ 45-6 ಅಂಕಗಳ ಅಂತರ ಹೆಚ್ಚಿಸಿಕೊಳ್ಳುವ ಮೂಲಕ ಪಂದ್ಯದಲ್ಲಿ ಸಂಪೂರ್ಣ ಪ್ರಭುತ್ವ ಸಾಧಿಸಿತು. ಹೀಗೆ, ಸಾಗಿದ ಭಾರತದ ರೋಚಕ ಪ್ರದರ್ಶನದ ಮುಂದೆ ಮಂಕಾದ ಇಂಗ್ಲೆಂಡ್, ಕೊನೆಗೂ ಸೋಲೊಪ್ಪಿಕೊಂಡಿತು.
ಕೀನ್ಯಾ ಕನಸು ಜೀವಂತ: ದಿನದ ಮತ್ತೊಂದು ಪಂದ್ಯದಲ್ಲಿ ಅಮೆರಿಕ ತಂಡದ ವಿರುದ್ಧ 74-19 ಅಂಕಗಳ ಭಾರೀ ಅಂತರದ ಗೆಲುವು ಸಾಧಿಸಿದ ಕೀನ್ಯಾ, ತನ್ನ ಸೆಮಿಫೈನಲ್ ಕನಸನ್ನು ಜೀವಂತವಾಗಿಟ್ಟಿತು.
(ಕೃಪೆ: ಕನ್ನಡಪ್ರಭ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.