
ಢಾಕಾ(ಅ. 11): ಭಾರತ ಹಾಕಿ ತಂಡ ಏಷ್ಯಾ ಕಪ್'ನಲ್ಲಿ ಶುಭಾರಂಭ ಮಾಡಿದೆ. ಇಂದು ನಡೆದ ಎ ಗುಂಪಿನ ಲೀಗ್ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ 5-1 ಗೋಲ್'ಗಳಿಂದ ಭರ್ಜರಿ ಗೆಲುವು ಪಡೆದಿದೆ. ಇಡೀ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಭಾರತ ತಂಡದ ಕೊಡಗಿನ ವೀರ ಎಸ್.ವಿ.ಸುನೀಲ್, ಲಲಿತ್ ಉಪಾಧ್ಯಾಯ, ರಮಣ್'ದೀಪ್ ಸಿಂಗ್ ಮತ್ತು ಹರ್ಮನ್'ಪ್ರೀತ್ ಸಿಂಗ್ ಅವರು ಗೋಲು ಗಳಿಸಿದರು.
ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಭಾರತ ತಂಡ ಈ ಸಲ ಚಾಂಪಿಯನ್ ಆಗಲು ಸಜ್ಜಾಗಿದೆ. ಭಾರತ ತನ್ನ 2ನೇ ಪಂದ್ಯವನ್ನು ಆತಿಥೇಯ ಬಾಂಗ್ಲಾದೇಶದ ವಿರುದ್ಧ ಅ. 13ರಂದು ಆಡಲಿದೆ. ಅ.15ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಬಹುನಿರೀಕ್ಷಿತ ಹಣಾಹಣಿ ನಡೆಯಲಿದೆ.
ಈ ಟೂರ್ನಿಯಲ್ಲಿ 2 ಗುಂಪುಗಳಿವೆ. ಪ್ರತೀ ಗುಂಪಿನಲ್ಲಿ ಮೊದಲೆರಡು ಸ್ಥಾನ ಗಳಿಸುವ ತಂಡಗಳು ನೇರವಾಗಿ ಸೆಮಿಫೈನಲ್ ಹಂತ ಪ್ರವೇಶಿಸುತ್ತವೆ. ಹೀಗಾಗಿ, ಬಾಂಗ್ಲಾದೇಶ ವಿರುದ್ಧದ ಮುಂದಿನ ಪಂದ್ಯದಲ್ಲಿ ಗೆದ್ದರೆ ಭಾರತದ ಸೆಮಿಸ್ ಹಾದಿ ಸುಗಮವಾಗುತ್ತದೆ.
ರೋಲೆಂಟ್ ಓಲ್ಟ್'ಮ್ಯಾನ್ಸ್ ಅವರನ್ನ ಕೋಚ್ ಸ್ಥಾನದಿಂದ ಕಿತ್ತುಹಾಕಿದ ಬಳಿಕ ಕಳೆದ ತಿಂಗಳು ಮಾರಿಜ್ನೆ ಜೋರ್ಡ್ ಎಂಬ ನೂತನ ಕೋಚ್ ಆಯ್ಕೆಯಾಗಿದ್ದಾರೆ. ನೂತನ ಕೋಚ್ ಅಡಿಯಲ್ಲಿ ಇದು ಮೊದಲ ಟೂರ್ನಿಯಾಗಿರುವುದರಿಂದ ಎಲ್ಲರ ಕಣ್ಣು ಭಾರತ ತಂಡದ ಪ್ರದರ್ಶನದ ಮೇಲೆ ನೆಟ್ಟಿದೆ. ಕೋಚ್ ಬದಲಾವಣೆಯಿಂದ ಭಾರತ ತಂಡದ ಸಾಮರ್ಥ್ಯ ಕುಂಠಿತವಾಗಿಲ್ಲದಿರುವುದು ಮೊದಲ ಪಂದ್ಯದಿಂದ ಸಾಬೀತಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.