ಶ್ರೀಲಂಕಾ ಕ್ರಿಕೆಟಿಗ ಸನತ್ ಜಯಸೂರ್ಯ ಇದೀಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ತನಿಖೆಗೆ ಸಹಕರಿಸಿದ ಜಯಸೂರ್ಯ ಈಗಾಗಲೇ ಐಸಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಐಸಿಸಿ ಹೇಳಿದೆ. ಹೀಗಾಗಿ ನಿಷೇಧದ ತೂಗುಗತ್ತಿ ಜಯಸೂರ್ಯ ಮೇಲಿದೆ.
ದುಬೈ(ಅ.17): ಐಸಿಸಿ ಭ್ರಷ್ಟಾಚಾರ ತನಿಖೆಗೆ ಸಹಕರಿಸದ ಶ್ರೀಲಂಕಾ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ವಿರುದ್ಧ ಐಸಿಸಿ ಹಿಡಿತ ಬಿಗಿಗೊಳಿಸಿದೆ. 14 ದಿನಗಳ ಒಳಗೆ ಉತ್ತರಿಸಲು ಸೂಚಿಸಿರುವ ಐಸಿಸಿ, ಜಯಸೂರ್ಯ ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಆರ್ಟಿಕಲ್ 2.4.6 ಹಾಗೂ 2.4.7 ಉಲ್ಲಂಘಿಸಿದ್ದಾರೆ ಎಂದು ಹೇಳಿದೆ.
ಆರ್ಟಿಕಲ್ 2.4.6 ನಿಯಮ ಉಲ್ಲಂಘನೆಗೆ ಕನಿಷ್ಠ 6 ತಿಂಗಳ ಹಾಗೂ ಗರಿಷ್ಠ 5 ವರ್ಷದ ನಿಷೇಧದ ಶಿಕ್ಷೆ ವಿಧಿಸಲಾಗುತ್ತೆ. ಇದೀಗ ಜಯಸೂರ್ಯ ಈ ನಿಯಮ ಉಲ್ಲಂಘಿಸಿರೋದರಿಂದ ನಿಷೇಧದ ಭೀತಿ ಎದುರಿಸುತ್ತಿದ್ದಾರೆ.
ಐಸಿಸಿ ದೂರಿನ ಕುರಿತು ಕೊಲೊಂಬೋದಲ್ಲಿ ಪ್ರತಿಕ್ರಿಯಿಸಿದ ಶ್ರೀಲಂಕಾ ಬ್ಯಾಟಿಂಗ್ ದಿಗ್ಗಜ ಸನತ್ ಜಯಸೂರ್ಯ, ತಾವು ಸದಾ ಕ್ರಿಕೆಟ್ ಘನತೆ ಎತ್ತಿಹಿಡಿದಿರುವುದಾಗಿ ಹೇಳಿದ್ದಾರೆ. ‘ನಾನು 14 ದಿನಗಳೊಳಗೆ ವಿವರಣೆ ನೀಡಬೇಕಿದೆ. ಆರೋಪದ ಕುರಿತು ಯಾವುದೇ ಹೇಳಿಕೆಗಳನ್ನು ನೀಡದಂತೆ ನನಗೆ ಕಾನೂನು ಸಲಹೆ ನೀಡಲಾಗಿದೆ. ಆದರೆ ನಾನು ಎಂದಿಗೂ ಆಟಕ್ಕೆ ಧಕ್ಕೆ ಉಂಟು ಮಾಡಿಲ್ಲ. ಪ್ರತಿ ಬಾರಿಯೂ ಪಾರದರ್ಶಕವಾಗಿ ನಡೆದುಕೊಂಡಿದ್ದೇನೆ’ ಎಂದು ಜಯಸೂರ್ಯ ಹೇಳಿದ್ದಾರೆ.