ಡಿಡಿಸಿಎಗೆ ಚಾಟಿ ಬೀಸಿದ ಕೋರ್ಟ್

By Suvarna Web DeskFirst Published Nov 7, 2016, 4:27 PM IST
Highlights

ಮಾಜಿ ಕ್ರಿಕೆಟಿಗರಾದ ಮಣೀಂದರ್ ಸಿಂಗ್, ಅತುಲ್ ವಾಸನ್ ಮತ್ತು ನಿಖಿಲ್ ಚೋಪ್ರಾ ಅವರುಗಳನ್ನು ಆಯ್ಕೆಗಾರರನ್ನಾಗಿ ನ್ಯಾ. ಮುದ್ಗಲ್ ನೇಮಿಸಿದ್ದರು. ಆದರೆ, ನ.5ರಂದು ನಡೆದ ಡಿಡಿಸಿಎ ಕ್ರೀಡಾ ಕಾರ್ಯಕಾರಿ ಸಮಿತಿ ಸಭೆ ಈ ಮೂವರ ನೇಮಕವನ್ನೂ ವಜಾಗೊಳಿಸಿತ್ತು.

ನವದೆಹಲಿ(ನ.07): ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯಲ್ಲಿನ ಅವ್ಯವಹಾರದ ಹಿನ್ನೆಲೆಯಲ್ಲಿ ಅದರ ಕ್ರಿಕೆಟ್ ಚಟುವಟಿಕೆಯ ಮೇಲ್ವಿಚಾರಕರನ್ನಾಗಿ ತಾನು ನೇಮಿಸಿದ್ದ ನಿವೃತ್ತ ನ್ಯಾ. ಮುಕುಲ್ ಮುದ್ಗಲ್ ಅವರಿಂದ ನೇಮಕವಾಗಿದ್ದ ಆಯ್ಕೆಗಾರರನ್ನು ವಜಾಗೊಳಿಸಿದ ಡಿಡಿಸಿಎ ಕ್ರಮವನ್ನು ಕಟು ನುಡಿಗಳಲ್ಲಿ ಖಂಡಿಸಿರುವ ದೆಹಲಿ ಉಚ್ಚ ನ್ಯಾಯಾಲಯ, ಇದೀಗ ಆ ಆಯ್ಕೆಗಾರರನ್ನು ಅವರ ಸ್ಥಾನದಲ್ಲಿ ಮರುಸ್ಥಾಪಿಸುವಂತೆ ಆಜ್ಞಾಪಿಸಿದೆ.

ಮಾಜಿ ಕ್ರಿಕೆಟಿಗರಾದ ಮಣೀಂದರ್ ಸಿಂಗ್, ಅತುಲ್ ವಾಸನ್ ಮತ್ತು ನಿಖಿಲ್ ಚೋಪ್ರಾ ಅವರುಗಳನ್ನು ಆಯ್ಕೆಗಾರರನ್ನಾಗಿ ನ್ಯಾ. ಮುದ್ಗಲ್ ನೇಮಿಸಿದ್ದರು. ಆದರೆ, ನ.5ರಂದು ನಡೆದ ಡಿಡಿಸಿಎ ಕ್ರೀಡಾ ಕಾರ್ಯಕಾರಿ ಸಮಿತಿ ಸಭೆ ಈ ಮೂವರ ನೇಮಕವನ್ನೂ ವಜಾಗೊಳಿಸಿತ್ತು.

‘‘ಡಿಡಿಸಿಎ ವಿರುದ್ಧ ನ್ಯಾಯಾಲಯದಲ್ಲಿ ದಾಖಲಾಗಿರುವ ದೂರಿನ ಕುರಿತಾಗಿ ಇನ್ನೂ ಅಂತಿಮ ಆದೇಶ ಹೊರಬೀಳಬೇಕಿದೆ. ಇಷ್ಟಾದರೂ ಅದು ನ್ಯಾಯಾಲಯದಿಂದ ನೇಮಕವಾಗಿರುವ ನ್ಯಾ. ಮೂರ್ತಿಗಳ ನಿರ್ಣಯವನ್ನೇ ಧಿಕ್ಕರಿಸಹೊರಟಿರುವುದು ಒಂದು ವಿಧದಲ್ಲಿ ಮುದ್ಗಲ್ ಅವರನ್ನೇ ಗುರಿಯಾಗಿಸಿಕೊಂಡಂತಿದೆ. ಡಿಡಿಸಿಎ ನಡೆ ನಿಸ್ಸಂಶಯವಾಗಿ ನ್ಯಾಯಾಂಗ ನಿಂದನೆಯಾಗಿದೆ. ಆಯ್ಕೆಗಾರರನ್ನೇ ವಜಾಗೊಳಿಸುವಂಥ ಮಹತ್ವದ ನಿರ್ಧಾರ ತಳೆಯುವ ಮುನ್ನ ನ್ಯಾಯಾಲಯದ ಗಮನಕ್ಕೆ ಇದನ್ನು ತರಬೇಕಿತ್ತು. ಅದಾವುದನ್ನೂ ಮಾಡದೆ ಉದ್ಧಟತನದಿಂದ ವರ್ತಿಸಿರುವುದನ್ನು ನ್ಯಾಯಾಲಯ ಸಹಿಸದು’’ ಎಂದು ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ದೀಪಾ ಶರ್ಮ ಅವರಿದ್ದ ದ್ವಿಸದಸ್ಯ ಪೀಠ ಡಿಡಿಸಿಎಯನ್ನು ತರಾಟೆಗೆ ತೆಗೆದುಕೊಂಡಿತು.

click me!