
ಮುಂಬೈ(ಏ.19): ಜೂನ್'ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯವರೆಗೂ ಹಣಕಾಸು ಹಂಚಿಕೆಗೆ ಸದ್ಯ ಚಾಲ್ತಿಯಲ್ಲಿರುವ ‘ಬಿಗ್ ತ್ರೀ' ಮಾದರಿಯನ್ನು ಉಳಿಸಿಕೊಳ್ಳುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯನ್ನು ಕೇಳಲು ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದೆ.
ಏಪ್ರಿಲ್ 27,28ರಂದು ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ತೆಗೆದುಕೊಳ್ಳಲಾಗುವ ತೀರ್ಮಾನದ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಬೇಕೋ ಇಲ್ಲವೇ ಹಿಂದೆ ಸರಿಯಬೇಕೋ ಎನ್ನುವ ಕುರಿತು ಬಿಸಿಸಿಐ ನಿರ್ಧರಿಸಲಿದೆ ಎಂದು ತಿಳಿದುಬಂದಿದೆ.
‘‘ಸಭೆಯಲ್ಲಿ ಐಸಿಸಿ ಬಳಿ ‘ಬಿಗ್ ತ್ರೀ' ಮಾದರಿ ಮುಂದುವರಿಸಬೇಕೆಂದು ಕೇಳಲು ರಾಜ್ಯ ಸಂಸ್ಥೆಗಳು ಅವಿರೋಧವಾಗಿ ನಿರ್ಧರಿಸಿವೆ. ಜೂನ್ ಸಭೆಯಲ್ಲಿ ಹೊಸ ಮಾದರಿಯನ್ನು ಪ್ರಸ್ತಾಪಿಸಲಾಗುತ್ತದೆ'' ಎಂದು ಬಿಸಿಸಿಐ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದ್ದಾರೆ.
ಐಸಿಸಿಯ ಮೊದಲ ನಿಯಮದಂತೆ 'ಬಿಗ್ ತ್ರಿ' ರಾಷ್ಟ್ರಗಳೆನಿಸಿಕೊಂಡಿರುವ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ಹೆಚ್ಚು ಲಾಭ ಸಿಗುತ್ತಿತ್ತು. ಭಾರತದವರೇ ಆದ ಶಶಾಮಕ್ ಮನೋಹರ್ ಐಸಿಸಿ ಮುಖ್ಯಸ್ಥರಾದ ಬಳಿಕ ಬಿಸಿಸಿಐನ ಪ್ರಬಲ ವಿರೋಧದ ನಡುವೆಯೂ ಬಿಗ್ ತ್ರಿ ನಿಯಮಕ್ಕೆ ಬದಲಾವಣೆ ತರಲು ಮುಂದಾಗಿದ್ದರು. ಫೆಬ್ರವರಿಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ಹೊಸ ನಿಯಮ ಜಾರಿಗೆ ತರುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.