ದ್ರಾವಿಡ್‌ಗೆ BCCI ನೋಟಿಸ್; 2 ವಾರದಲ್ಲಿ ನೀಡಬೇಕಿದೆ ಉತ್ತರ!

By Web DeskFirst Published Aug 6, 2019, 10:01 PM IST
Highlights

ಟೀಂ ಇಂಡಿಯಾ ಅಂಡರ್ 19 ಕೋಚ್ ರಾಹುಲ್ ದ್ರಾವಿಡ್‌ಗೆ ಬಿಸಿಸಿಐ ನೋಟಿಸ್ ನೀಡಿದೆ. 2 ವಾರದಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ. ಕ್ರಿಕೆಟ್‌ನ ಜಂಟ್ಲಮೆನ್ ಎಂದೇ ಗುರುತಿಸಿಕೊಂಡಿರುವ ದ್ರಾವಿಡ್‌ಗೆ ಬಿಸಿಸಿಐ ದಿಢೀರ್ ನೋಟಿಸ್ ನೀಡಿದ್ದು ಯಾಕೆ? ಇಲ್ಲಿದೆ ವಿವರ.

ಮುಂಬೈ(ಆ.06): ಟೀಂ ಇಂಡಿಯಾ ಮಾಜಿ ನಾಯಕ, ಭಾರತ ಅಂಡರ್-19 ತಂಡದ ಕೋಚ್ ರಾಹುಲ್ ದ್ರಾವಿಡ್‌ಗೆ ಬಿಸಿಸಿಐ ನೋಟಿಸ್ ನೀಡಿದೆ. ಸ್ವಹಿತಾಸಕ್ತಿ ಸಂಘರ್ಷದಲ್ಲಿ ರಾಹುಲ್ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ದ್ರಾವಿಡ್‌ಗೆ ನೋಟಿಸ್ ನೀಡಲಾಗಿದೆ. ಆಗಸ್ಟ್ 16 ರೊಳಗೆ ಉತ್ತರಿಸುವಂತೆ ದ್ರಾವಿಡ್‌ಗೆ ಸೂಚನೆ ನೀಡಲಾಗಿದೆ. ರಾಹುಲ್ ದ್ರಾವಿಡ್ ವಿರುದ್ಧ ದೂರು ಬಂದ ಹಿನ್ನಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ಮರ್ಸಿಡೀಸ್ ಬೆಂಝ್ GLE ಖರೀದಿಸಿದ ದ್ರಾವಿಡ್; ಇಲ್ಲಿದೆ ಈ ಕಾರಿನ ವಿಶೇಷತೆ!

ರಾಹುಲ್ ದ್ರಾವಿಡ್ ಇದೀಗ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(NCA) ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇಷ್ಟೇ ಅಲ್ಲ  ಇಂಡಿಯಾ ಸಿಮೆಂಟ್ ಗ್ರೂಪ್‌ನಲ್ಲಿ ದ್ರಾವಿಡ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಬಿಸಿಸಿಐನ ಸ್ವಹಿತಾಸಕ್ತಿ ನಿಯಮಕ್ಕೆ ವಿರುದ್ಧವಾಗಿದೆ ಎಂದು ಮಧ್ಯಮಪ್ರದೇಶ ಕ್ರಿಕೆಟ್ ಸಂಸ್ಥೆ ಸದಸ್ಯ ಸಂಜೀವ್ ಗುಪ್ತಾ ಬಿಸಿಸಿಐಗೆ ದೂರು ಸಲ್ಲಿಸಿದ್ದರು.

ಈ ದೂರಿನ ಆಧಾರದಲ್ಲಿ ಬಿಸಿಸಿಐ ನೋಟಿಸ್ ಜಾರಿ ಮಾಡಿದೆ. 2 ವಾರದಲ್ಲಿ ಉತ್ತರ ನೀಡುವಂತೆ ದ್ರಾವಿಡ್‌ಗೆ ಸೂಚಿಸಲಾಗಿದೆ. ಬಿಸಿಸಿಐ ಪ್ರಕಾರ ಆಗಸ್ಟ್ 16ರಗೊಳಗೆ ದ್ರಾವಿಡ್ ತಮ್ಮ ಉತ್ತರ ನೀಡಬೇಕಿದೆ. ದ್ರಾವಿಡ್ ಉತ್ತರದ ಬಳಿಕ ಈ ಪ್ರಕರಣವನ್ನು ಪರಿಶೀಲಿಸಲಿದ್ದೇವೆ ಎಂದು ಬಿಸಿಸಿಐ ಹೇಳಿದೆ. ದ್ರಾವಿಡ್ ಬಿಸಿಸಿಐ ಕಮಿಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: NCA ಮುಖ್ಯಸ್ಥರಾಗಿ ರಾಹುಲ್‌ ದ್ರಾವಿಡ್‌ ನೇಮಕ

ದೂರುದಾರ ಸಂಜೀವ್ ಗುಪ್ತಾ ಈ ಹಿಂದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷ ಆರೋಪ ಮಾಡಿದ್ದರು. ಇವರಿಬ್ಬರ ಮೇಲೂ ಬಿಸಿಸಿಐಗೆ ದೂರು ನೀಡಿದ್ದಾರೆ. ಸಚಿನ್ ಹಾಗೂ ಲಕ್ಷ್ಮಣ್ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಿದ್ದಾರೆ. ಇದರ ಜೊತೆಗೆ ಐಪಿಎಲ್ ಟೂರ್ನಿಯಲ್ಲಿ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಬಿಸಿಸಿಐ ನಿಯಮ ಉಲ್ಲಂಘಿಸಿದ್ದಾರೆ ಎಂದು ದೂರು ನೀಡಿದ್ದರು. 

click me!