ಮಲೆನಾಡಲ್ಲೂ ಉಗ್ರರ ಕರಿನೆರಳು : ತೀರ್ಥಹಳ್ಳಿಯಲ್ಲಿ ಶಂಕಾಸ್ಪದ ಉಗ್ರ ಅರೆಸ್ಟ್

By Web DeskFirst Published Oct 16, 2019, 2:27 PM IST
Highlights

ಎಲ್ಲೆಡೆ ಬಾಂಗ್ಲಾ ಉಗ್ರರು ಇರುವ ಶಂಕೆ ವ್ಯಕ್ತವಾಗಿದ್ದು ಇದೀಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮನೆಯೊಂದರಲ್ಲಿಯೂ ಶಂಕಾಸ್ಪದ ವ್ಯಕ್ತಿಯೋರ್ವನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. 

ಶಿವಮೊಗ್ಗ (ಅ.16): ಕರ್ನಾಟಕ ಜೆಎಂಬಿ ಉಗ್ರರ ಕಾರ್ಯಸ್ಥಾನವಾಗಿರುವ ಆತಂಕಕಾರಿ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಮಂಗಳವಾರ ತೀರ್ಥಹಳ್ಳಿ ತಾಲೂಕಿನ ಸುರಾನಿಯ ಮನೆಯೊಂದರಲ್ಲಿ ಶಂಕಾಸ್ಪದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಕಳೆದ 15-20 ದಿನಗಳಿಂದ ತೀರ್ಥಹಳ್ಳಿ ಸಮೀಪದ ಸುರಾನಿಯ ತೋಟದ ಮನೆಯೊಂದರಲ್ಲಿ ಶಂಕಾಸ್ಪದ ಚಟುವಟಿಕೆ ನಡೆಯುತ್ತಿದ್ದು, ಅಲ್ಲಿಗೆ ನೆರೆಯ ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಅಪರಿಚಿತ ವ್ಯಕ್ತಿಗಳು ಬಂದು ಹೋಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಮಂಗಳವಾರ ಆ ಭಾಗದಲ್ಲಿ ಪೊಲೀಸ್ ಬಂದೋ ಬಸ್ತ್ ಗಮನಿಸಿದ ಮಾಡಲಾಗಿದ್ದು, ಎಸ್ಪಿ ಕೆ.ಎಂ.ಶಾಂತರಾಜ್, ಎಎಸ್ಪಿ ಡಾ.ಎಚ್.ಟಿ.ಶೇಖರ್ ಸುರಾನಿ ಸುತ್ತಮುತ್ತಲೂ ಮಂಗಳವಾರ ಕೂಂಬಿಂಗ್ ನಡೆಸಿದ್ದಾರೆ. ಹಲವೆಡೆ ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆಗೆ ವ್ಯವಸ್ಥೆ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಧಿಕಾರಿಗಳ ನಿರಾಕರಣೆ : ಈ ಎಲ್ಲ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ. ಸುರಾನಿ ಹಾಗೂ ತೀರ್ಥಹಳ್ಳಿ ಸುತ್ತಮುತ್ತ ಸರ ಅಪಹರಣ, ಜಾನುವಾರು ಕಳ್ಳತನ ಪ್ರಕರಣ ಹೆಚ್ಚಿರುವುದರಿಂದ ಕೂಂಬಿಂಗ್ ನಡೆಸಿದ್ದೇವೆ ಎನ್ನುತ್ತಿದ್ದಾರೆ. ಆದರೆ ಖಚಿತ ಮಾಹಿತಿಗಳ ಪ್ರಕಾರ ಅನುಮಾನಾಸ್ಪದ ನಡವಳಿಕೆ ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಸುರಾನಿಯ ಮನೆಯೊಂದರಿಂದ ವ್ಯಕ್ತಿಯೊಬ್ಬನನ್ನು ಮಂಗಳವಾರ  ಕರೆದೊಯ್ದಿದ್ದಾರೆ ಎನ್ನಲಾಗಿದೆ.

click me!