ಅಧಿಕಾರವಿಲ್ಲದೆ ಕುಮಾರಸ್ವಾಮಿಗೆ ಮಾನಸಿಕ ಸ್ಥಿಮಿತ ಇಲ್ಲ: ಕಟೀಲ್‌

By Kannadaprabha NewsFirst Published Jan 27, 2020, 10:07 AM IST
Highlights

ಅಧಿಕಾರವಿಲ್ಲದೆ ಕುಮಾರಸ್ವಾಮಿಗೆ ಮಾನಸಿಕ ಸ್ಥಿಮಿತ ಇಲ್ಲ: ಕಟೀಲ್‌| ಕೊಲೆ ಬೆದರಿಕೆ ಬಂದದ್ದರೆ ಸರ್ಕಾರಕ್ಕೆ ದೂರು ನೀಡಲಿ| ಪ್ರಚಾರಕ್ಕಾಗಿ ಬಿಜೆಪಿ, ಆರೆಸ್ಸೆಸ್‌ ಬಗ್ಗೆ ಮಾತು ಬೇಡ

 ಬೆಂಗಳೂರು[ಜ.27]: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕೊಲೆ ಬೆದರಿಕೆ ಬಂದಿದ್ದರೆ ಸರ್ಕಾರಕ್ಕೆ ದೂರು ನೀಡಲಿ. ಸೂಕ್ತ ತನಿಖೆ ನಡೆಸಲಿದೆ. ಆದರೆ, ಪ್ರಚಾರಕ್ಕೋಸ್ಕರ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಕೀಳುಮಟ್ಟದ ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

'ಮಾಜಿ ಸಿಎಂಗೆ ಬೇಕಾದ ಭದ್ರತೆ ಎಚ್‌ಡಿಕೆಗೆ ಇದೆ, ಬೆದರಿಕೆ ಇದ್ರೆ ದೂರು ನೀಡಲಿ'

ಕುಮಾರಸ್ವಾಮಿ ಅವರು ಸರ್ಕಾರದ ಬಗ್ಗೆ ಏನು ಬೇಕಾದರೂ ಟೀಕೆ ಮಾಡಲಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರಿಗೆ ನಿಜವಾಗಲೂ ಕೊಲೆ ಬೆದರಿಕೆ ಪತ್ರ ಅಥವಾ ಕರೆ ಬಂದಿದ್ದರೆ ಆ ಬಗ್ಗೆ ಸರ್ಕಾರಕ್ಕೆ ದೂರು ನೀಡಬೇಕು. ಸರ್ಕಾರ ತನಿಖೆ ನಡೆಸಲಿದೆ. ಅದನ್ನು ಬಿಟ್ಟು ಪ್ರಚಾರಕ್ಕಾಗಿ ಬಿಜೆಪಿ, ಆರೆಸ್ಸೆಸ್‌ ವಿರುದ್ಧ ಕೀಳುಮಟ್ಟದ ಆರೋಪದಲ್ಲಿ ತೊಡಗಿದ್ದಾರೆ. ಒಬ್ಬ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು ಈ ರೀತಿ ಮಾಡುವುದು ಶೋಭೆಯಲ್ಲ. ಅಧಿಕಾರ ಕಳೆದುಕೊಂಡು ನೊಂದಿರುವ ಕುಮಾರಸ್ವಾಮಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ಮಾತನಾಡುತ್ತಿರಬಹುದು ಎಂದರು.

ಸೋತವರಿಗೆ ಸಚಿವ ಸ್ಥಾನ ಸಿಎಂಗೆ ಬಿಟ್ಟಿದ್ದು

ಸಚಿವ ಸಂಪುಟ ವಿಸ್ತರಣೆ ಹಾಗೂ ಈ ವೇಳೆ ಉಪಚುನಾವಣೆಯಲ್ಲಿ ಸೋತವರಿಗೂ ಸಚಿವ ಸ್ಥಾನ ನೀಡುವುದು ಅಥವಾ ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟವಿಚಾರ ಎಂದು ಆಡಳಿತಾರೂಢ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಎಚ್‌ಡಿಕೆ, ನಿಜಗುಣಾನಂದ ಶ್ರೀ ಸೇರಿ 15 ಜನರಿಗೆ ಜೀವಬೆದರಿಕೆ!

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಎಲ್ಲರನ್ನೂ ಪಕ್ಷ ಮತ್ತು ಸರ್ಕಾರ ಗೌರವದಿಂದ ನಡೆಸಿಕೊಳ್ಳುತ್ತದೆ. ಆದರೆ, ಈ ವಿಚಾರದಲ್ಲಿ ಕಾಂಗ್ರೆಸ್‌ ಗೊಂದಲ ಸೃಷ್ಟಿಸಲು ಹೊರಟಿದೆ. ಮೂರು ತಿಂಗಳಿಂದ ರಾಜ್ಯ ಕಾಂಗ್ರೆಸ್‌ಗೆ ಅಧ್ಯಕ್ಷರ ನೇಮಕ ಮಾಡಲಾಗಿಲ್ಲ. ತಮ್ಮ ಪಕ್ಷಕ್ಕೆ ನಾವಿಕನಿಲ್ಲದಿದ್ದರೂ ಕಾಂಗ್ರೆಸ್‌ ನಾಯಕರು ಬಿಜೆಪಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

click me!