
ಉಡುಪಿ: ಪರಸ್ಪರ ಪೋಷಕರ ಬಗ್ಗೆಯೇ ಕೆಟ್ಟದಾಗಿ ಮಾತನಾಡಿ ರಾಜ್ಯಮಟ್ಟದಲ್ಲಿ ಅಸಹ್ಯ ಸೃಷ್ಟಿಸಿದ್ದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ನಾಯಕ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿವಿಮಾತು ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಪರಸ್ಪರ ಈ ಕೆಟ್ಟ ವಾಗ್ದಾಳಿಯನ್ನು ನಿಲ್ಲಿಸಿ ಯುವ ಸಮೂಹಕ್ಕೆ ರೋಲ್ ಮಾಡೆಲ್ಗಳಾಗುವಂತೆ ಇಬ್ಬರು ನಾಯಕರಿಗೆ ಕರೆ ನೀಡಿದ್ದಾರೆ. ನಾನು ಅನೇಕ ಅವಮಾನಗಳನ್ನು ಎದುರಿಸಿದ್ದೇನೆ. ಈ ನಾಯಕರು ಬಹಳ ಕೀಳು ಮಟ್ಟದ ಹೇಳಿಕೆಗಳನ್ನು ನೀಡಿದ್ದಾರೆ. ಒಬ್ಬ ಅಕ್ಕನಾಗಿ, ನಾನು ಅವರಿಬ್ಬರಿಗೂ ಸಲಹೆ ನೀಡುತ್ತೇನೆ. ಜನರು ರಾಜಕಾರಣಿಗಳನ್ನು ನೋಡುತ್ತಿದ್ದಾರೆ, ನಾವು ಜನರಿಗೆ ಮಾದರಿಯಾಗಬೇಕು ಮತ್ತು ಅವಮಾನಕಾರಿಯಾಗಿ ವರ್ತಿಸಬಾರದು. ಜನರು ನಮ್ಮ ನಡವಳಿಕೆ ಮತ್ತು ಭಾಷೆಯನ್ನು ಗಮನಿಸುತ್ತಾರೆ. ನಿಮ್ಮ ಜಗಳದ ನಡುವೆ ಪೋಷಕರನ್ನು ಕರೆದು ತರುವುದು ಸರಿಯಲ್ಲ. ಈ ಕಿತ್ತಾಟವನ್ನು ಇಲ್ಲಿಗೆ ಬಿಡಿ. ನೀವಿಬ್ಬರೂ ಸಾಕಷ್ಟು ಬುದ್ಧಿವಂತರು, ಆದ್ದರಿಂದ ಅದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಸಚಿವರು ಕಾಂಗ್ರೆಸ್ ಮತ್ತು ಬಿಜೆಪಿಯ ಇಬ್ಬರು ಯುವ ನಾಯಕರಿಗೆ ಸಲಹೆ ನೀಡಿದ್ದಾರೆ.
ನವೆಂಬರ್ ಕ್ರಾಂತಿ ಕುರಿತು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?
ಶನಿವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದಾಗ ಮಾಧ್ಯಮದವರು ಪ್ರತಾಪ್ ಸಿಂಹ ಹಾಗೂ ಪ್ರದೀಪ್ ಈಶ್ವರ್ ಕಿತ್ತಾಟದ ಬಗ್ಗೆ ಕೇಳಿದ ಪ್ರಶ್ನೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಹೀಗೆ ಉತ್ತರಿಸಿದ್ದಾರೆ. ಹಾಗೆಯೇ ನವೆಂಬರ್ ಕ್ರಾಂತಿ ಕುರಿತ ಚರ್ಚೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತೆ, ಕ್ರಾಂತಿ ಮತ್ತು ಶಾಂತಿ ಇವೆರಡು ಹೈಕಮಾಂಡ್ಗೆ ಸಂಬಂಧಿಸಿದ ವಿಷಯಗಳು. ಬದಲಾವಣೆಗಳು ಎಐಸಿಸಿ ಅಧ್ಯಕ್ಷರಿಗೆ ಬಿಟ್ಟದ್ದು. ನನ್ನನ್ನೂ ಒಳಗೊಂಡಂತೆ, ನಾವೆಲ್ಲರೂ ಪಕ್ಷ ಏನು ಹೇಳುತ್ತದೆ ಎಂಬುದನ್ನು ಕೇಳುತ್ತೇವೆ. ಪಕ್ಷವು ನಮ್ಮನ್ನು ಗುರುತಿಸಿ ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಪಕ್ಷದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ ಎಂದು ಸೂಚಿಸಿದರೆ, ನಾನು ಸಂತೋಷದಿಂದ ಅದನ್ನು ಸ್ವೀಕರಿಸುತ್ತೇನೆ ಎಂದು ಹೇಳಿದರು.
ಧರ್ಮಸ್ಥಳವು ಪವಿತ್ರ ಸ್ಥಳ ಎಂಬ ಸಂದೇಶ ಹೊರಡಬೇಕು:
ಹಾಗೆಯೇ ಧರ್ಮಸ್ಥಳ ಪ್ರಕರಣದ ಬಗ್ಗೆ ಕೇಳಿದಾಗ ಈ ಬಗ್ಗೆ ಹೈಕೋರ್ಟ್ ಸ್ಟೇ ನೀಡಿದೆ. ನಾವು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಮತ್ತು ಪಾಲಿಸುತ್ತೇವೆ. ಸರ್ಕಾರ ತನಿಖೆಯಲ್ಲಿ ಹಿನ್ನಡೆ ಎದುರಿಸುತ್ತಿದೆಯೇ ಎಂದು ಚರ್ಚಿಸುವುದು ಸರಿಯಲ್ಲ. ಸರ್ಕಾರ ತಡೆಯಾಜ್ಞೆಯನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ. ಧರ್ಮಸ್ಥಳವು ಪವಿತ್ರ ಸ್ಥಳ ಎಂಬ ಸಂದೇಶ ಹೊರಡಬೇಕು ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕ ರಾಜ್ಯ ಚಳುವಳಿಗೆ ಪ್ರತ್ಯೇಕ ಧ್ವಜ ಹಾರಿಸಿದವರಿಗೆ ಬೆಂಬಲ ಇಲ್ಲ:
ಕಲ್ಯಾಣ ಕರ್ನಾಟಕ ರಾಜ್ಯ ಚಳುವಳಿಗೆ ಪ್ರತ್ಯೇಕ ಧ್ವಜ ಹಾರಿಸಿದವರನ್ನು ನಾನು ಬೆಂಬಲಿಸುವುದಿಲ್ಲ ಎಂದು ಹೆಬ್ಬಾಳ್ಕರ್ ಮಾಧ್ಯಮದವ ಪ್ರಶ್ನೆಗೆ ಉತ್ತರಿಸಿದರು. ಕರ್ನಾಟಕ ರಾಜ್ಯೋತ್ಸವ ದಿನವು ಬಹಳ ಪವಿತ್ರವಾಗಿದೆ. ಕರ್ನಾಟಕದ ಏಕೀಕರಣಕ್ಕಾಗಿ ಹಿರಿಯರು ಮತ್ತು ಬರಹಗಾರರು ಹೋರಾಡಿದ್ದಾರೆ ಈ ಶುಭ ಸಮಯದಲ್ಲಿ ನಾನು ಈ ಬೆಳವಣಿಗೆಗಳ ಬಗ್ಗೆ ಮಾತನಾಡುವುದಿಲ್ಲ. ಮುಂಬರುವ ದಿನಗಳಲ್ಲಿ ಈ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತೇನೆ, ಆದರೆ ಈಗ ಅಲ್ಲ ಎಂದು ಅವರು ಹೇಳಿದರು.
ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದ ಸಚಿವರುಸರ್ಕಾರಕ್ಕೆ ಸಂಪನ್ಮೂಲಗಳ ಕೊರತೆಯಿಲ್ಲ ಮತ್ತು ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಹೊಸ ಪಕ್ಷ ಕಟ್ತಾರಾ ಅಣ್ಣಾಮಲೈ? ಗನ್ ತೋರಿಸಿ ಯಾರನ್ನೂ ಪಕ್ಷದಲ್ಲಿ ಉಳಿಸಲು ಸಾಧ್ಯವಿಲ್ಲ ಎಂದ ಅಣ್ಣಾಮಲೈ
ಇದನ್ನೂ ಓದಿ: ರಾಷ್ಟ್ರ ಮಟ್ಟದ ಕಬ್ಬಡಿ ಆಟಗಾರ ತೇಜ್ಪಾಲ್ ಗುಂಡೇಟಿಗೆ ಬಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.