ಭಾರತವನ್ನು ಹಿಂದುರಾಷ್ಟ್ರ ಮಾಡಿಯೇ ತೀರುತ್ತೇವೆ: ಪ್ರಮೋದ್‌ ಮುತಾಲಿಕ್

By Kannadaprabha NewsFirst Published Jan 6, 2024, 1:29 PM IST
Highlights

ಇನ್ನು ಕೆಲವೇ ದಿನಗಳಲ್ಲಿ ಭಾರತವನ್ನು ನಾವು ಹಿಂದು ರಾಷ್ಟ್ರ ಮಾಡಿಯೇ ತೀರುತ್ತೇವೆ. ಕಾಂಗ್ರೆಸ್ಸಿನವರಿಗೆ ಧೈರ್ಯವಿದ್ದರೆ ತಡೆಯಲಿ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಕಾಂಗ್ರೆಸ್ಸಿಗೆ ಸವಾಲು ಹಾಕಿದರು.

ಹುಬ್ಬಳ್ಳಿ (ಜ.06): ಇನ್ನು ಕೆಲವೇ ದಿನಗಳಲ್ಲಿ ಭಾರತವನ್ನು ನಾವು ಹಿಂದು ರಾಷ್ಟ್ರ ಮಾಡಿಯೇ ತೀರುತ್ತೇವೆ. ಕಾಂಗ್ರೆಸ್ಸಿನವರಿಗೆ ಧೈರ್ಯವಿದ್ದರೆ ತಡೆಯಲಿ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಕಾಂಗ್ರೆಸ್ಸಿಗೆ ಸವಾಲು ಹಾಕಿದರು. ದೊಂಬಿ ಪ್ರಕರಣದಲ್ಲಿ ಬಂಧಿತನಾಗಿರುವ ಶ್ರೀಕಾಂತ ಪೂಜಾರಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇಡೀ ದೇಶವೇ ಇಂದು ರಾಮಮಯವಾಗಿದ್ದು, ಕಾಂಗ್ರೆಸ್ಸಿನವರಿಗೆ ಹೊಟ್ಟೆ ಉರಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲವು ಕಾಣುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ಆಗ ನಾವು ಹಿಂದು ರಾಷ್ಟ್ರ ಮಾಡಿಯೇ ತೀರುತ್ತೇವೆ. ನಂತರ ಈ ಹಿಂದು ರಾಷ್ಟ್ರದಲ್ಲಿ ಮುಸ್ಲಿಂ, ಕ್ರಿಶ್ಚಿಯನ್‌, ಶಿಖ್‌ ಸೇರಿದಂತೆ ಎಲ್ಲ ಧರ್ಮದವರೂ ನೆಮ್ಮದಿಯಿಂದ ಬಾಳುವಂತಹ ವಾತಾವರಣ ಸೃಷ್ಟಿಸುತ್ತೇವೆ ಎಂದರು.

ಶ್ರೀಕಾಂತ್ ಪೂಜಾರಿ ಒಬ್ಬನೇನ ಹಿಂದೂ?: ಸಚಿವ ಪರಮೇಶ್ವರ್

ಮುಖ್ಯಮಂತ್ರಿ ನಿರ್ದೇಶನ: ಕಾಂಗ್ರೆಸ್ಸಿನವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಈಗಲೇ ಕಾಡುತಿದೆ. ಹಾಗಾಗಿ ಶ್ರೀರಾಮನ ಭಕ್ತರು, ಹಿಂದು ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಬಂಧಿಸುವ ಕಾರ್ಯ ಮಾಡುತ್ತಿದ್ದಾರೆ. 31ವರ್ಷದ ನಂತರ ಪ್ರಕರಣಗಳನ್ನು ಹೊರ ತೆಗೆಯಲು ಮುಖ್ಯಮಂತ್ರಿಗಳೇ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಅದರಂತೆ ಅಧಿಕಾರಿಗಳು ಪಾಲನೆ ಮಾಡಿದ್ದಾರೆ. ಇಲ್ಲಿ ಯಾವ ಅಧಿಕಾರಿ ಇರುತ್ತಾರೆ ಎಂಬುದು ಮುಖ್ಯವಲ್ಲ. ಸರ್ಕಾರದ ನಿರ್ದೆಶನಗಳನ್ನು ಅವರು ಪಾಲಿಸುತ್ತಾರೆ ಎಂದರು.

ಅಬ್ಬಯ್ಯನೋ... ಅಬ್ದುಲ್ಲಾನೋ: ಶ್ರೀಕಾಂತ ಪೂಜಾರಿ ರೌಡಿ ಶೀಟರ್, ಆತನ ಮೇಲೆ ಹಲವಾರು ಪ್ರಕರಣಗಳಿವೆ ಎಂದು ಮುಖ್ಯಮಂತ್ರಿ, ಗೃಹಮಂತ್ರಿ ಹಾಗೂ ಸ್ಥಳೀಯ ಶಾಸಕರು ಹೇಳಿಕೆ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಸ್ಥಳೀಯ ಶಾಸಕ ಅಬ್ಬಯ್ಯನೊ ಅಬ್ದುಲ್ಲಾನೊ ಗೊತ್ತಿಲ್ಲ ಎಂದು ಅಪಹಾಸ್ಯ ಮಾಡಿದ ಮುತಾಲಿಕ, ಪೂಜಾರಿ ಮೇಲೆ 1992ರ ನಂತರ 13 ಪ್ರಕರಣಗಳು ದಾಖಲಾಗಿದ್ದು, ಎಲ್ಲದರಲ್ಲೂ ಆತ ನಿರ್ದೋಷಿಯಾಗಿ ಹೊರ ಬಂದಿದ್ದಾನೆ ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್ ವ್ಯವಸ್ಥಿತವಾಗಿ ಸುಳ್ಳು ಪ್ರಕರಣ ಹಾಕಿದೆ. ಬೇರೆಯವರು ದುಡ್ಡು ಕೊಟ್ಟಿದ್ದಾರೆ, ಅದಕ್ಕೆ ಬಂಧನ ಮಾಡಲಿಲ್ಲ. ಪೂಜಾರಿ ದುಡ್ಡು ಕೊಡಲಾಗಿಲ್ಲ ಅದಕ್ಕೆ ಆತನನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ಸಿನಿಂದಲೇ ಕುಮ್ಮಕ್ಕು: ವಿಪ ಸದಸ್ಯ ಬಿ.ಕೆ. ಹರಿಪ್ರಸಾದ ಅವರ ಗೋಧ್ರಾ ಹೇಳಿಕೆಗೆ ಪ್ರತಿಕ್ರಿಯಿಸಿದ ಮುತಾಲಿಕ, ಗೋಧ್ರಾ ಘಟನೆಗೆ ಮುಸ್ಲಿಮರು ಕಾರಣಾಗಿದ್ದಾರೆ ಎಂಬುದು ಹರಿಪ್ರಸಾದಗೆ ನೆನಪಿರಲಿ. ಇದೀಗ ಕಾಂಗ್ರೆಸ್ಸಿನವರೇ ಇಂತಹ ಘಟನೆ ನಡೆಯಲಿ ಎಂದು ಕುಮ್ಮಕ್ಕು ಕೊಡುತ್ತಿದ್ದಾರೆಯೇ? ಅಥವಾ ಗಲಭೆ ಎಬ್ಬಿಸಲು ಬಿ.ಕೆ. ಹರಿಪ್ರಸಾದ ಏನಾದರೂ ಪ್ಲ್ಯಾನ್ ಮಾಡುತ್ತಿದ್ದಾರೆಯೇ?. ಪೊಲೀಸರು ಈ ಕೂಡಲೇ ಹರಿಪ್ರಸಾದ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿಬೇಕೆಂದು ಒತ್ತಾಯಿಸಿದರು.

ಶ್ರೀಕಾಂತ್‌ ಪೂಜಾರಿ ಬಂಧನದಿಂದ ರಾಜ್ಯ ಸರ್ಕಾರದ ಸುಳ್ಳು ಬಯಲು: ಈಶ್ವರಪ್ಪ

ಯತೀಂದ್ರ ಹೇಳಿಕೆಗೂ ಆಕ್ರೋಶ: ಭಾರತ ಹಿಂದು ರಾಷ್ಟ್ರ ಮಾಡಿದರೆ ಪಾಕಿಸ್ತಾನದಂತೆ ದಿವಾಳಿಯಾಗಲಿದೆ ಎಂಬ ಮುಖ್ಯಮಂತ್ರಿ ಪುತ್ರ ಯತೀಂದ್ರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್‌, ಯತೀಂದ್ರ ಅವರ ಅಪ್ಪನ ಲುಂಗಿ ಹಿಡಿದುಕೊಂಡು ಬಂದವರು. ಪಾಕಿಸ್ತಾನ್, ಅಪಘಾನಿಸ್ಥಾನ ಹಾಗೇ ಆಗುತ್ತೆ ಅಂದರೆ ಅಲ್ಲಿ ಆರ್ಥಿಕ ದಿವಾಳಿಯಾಗಿದೆ ಎಂದು ಕಾಂಗ್ರೆಸ್ ಈಗಲಾದರೂ ಒಪ್ಪಿಕೊಳ್ಳುತ್ತದೆಯೇ? ನನಗೆ ಹಿಂದುತ್ವ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!