ಪಕ್ಷಕ್ಕೆ ಗುಡ್‌ ಬೈ ಹೇಳಿದ ಕರ್ನಾಟಕ ಬಿಜೆಪಿ ನಾಯಕ,ಇನ್ನು ಹಲವರು ರಾಜೀನಾಮೆ ಬಗ್ಗೆ ಸುಳಿವು

By Suvarna NewsFirst Published Jul 9, 2021, 4:23 PM IST
Highlights

* ಪಕ್ಷಕ್ಕೆ ಗುಡ್‌ ಬೈ ಹೇಳಿದ ಕರ್ನಾಟಕ ಬಿಜೆಪಿ ನಾಯಕ
* ಆಂತರಿಕ ಕಿತ್ತಾಟದಿಂದ ಬೇಸತ್ತು ಬಿಜೆಪಿಗೆ ಗುಡ್‌ಬೈ
* ಅನೇಕ ಶಾಸಕರು, ಮಾಜಿ ಶಾಸಕರು ಎಎಪಿಯನ್ನು ಸೇರಲಿದ್ದಾರೆ ಎಂದು ಹೊಸ ಬಾಂಬ್

ಬೆಂಗಳೂರು, (ಜುಲೈ.09):  ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಎಚ್‌.ಡಿ.ಬಸವರಾಜು ಅವರು ಬಿಜೆಪಿಗೆ ಗುಡ್‌ ಬೈ ಹೇಳಿದ್ದಾರೆ.

ಆಮ್‌ ಆದ್ಮಿ ಪಾರ್ಟಿಯ ತತ್ತ್ವ ಸಿದ್ಧಾಂತಗಳು ಹಾಗೂ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರವರ ಜನಪರ ಆಡಳಿತವನ್ನು ಮೆಚ್ಚಿ, ಹಾಗೂ ಸ್ವಪಕ್ಷ ಬಿಜೆಪಿಯಲ್ಲಿನ ಭ್ರಷ್ಟಾಚಾರ, ಆಂತರಿಕ ಕಿತ್ತಾಟದಿಂದ ಬೇಸತ್ತು ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕರಾದ ಎಚ್‌.ಡಿ.ಬಸವರಾಜುರವರು ಇಂದು (ಶುಕ್ರವಾರ) ಎಎಪಿಗೆ ಸೇರ್ಪಡೆಯಾದರು.

ಬಳಿಕ ಪ್ರತಿಕ್ರಿಯಿಸಿದ ಬಸವರಾಜು, ಆಮ್‌ ಆದ್ಮಿ ಪಾರ್ಟಿಯು ಆರಂಭದ ದಿನದಿಂದಲೂ ಪ್ರಾಮಾಣಿಕತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೇ ಮುನ್ನಡೆಯುತ್ತಿದೆ. ಕಳಂಕರಹಿತ ಹಾಗೂ ಪಾರದರ್ಶಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಸಾಮಾನ್ಯ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರಣದಿಂದ ಅನೇಕರು ಎಎಪಿಯತ್ತ ಆಕರ್ಷಿತರಾಗುತ್ತಿದ್ದಾರೆ. ದೇಶಾದ್ಯಂತ ಅನೇಕ ಸಾಧಕರು, ಗಣ್ಯ ವ್ಯಕ್ತಿಗಳು ಹಾಗೂ ವಿವಿಧ ಪಕ್ಷಗಳು ಮುಖಂಡರು ನಮ್ಮ ಪಕ್ಷವನ್ನು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಬೆಂಬಲ ವ್ಯಕ್ತವಾಗಲಿದ್ದು, ಕರ್ನಾಟಕದ ಅನೇಕ ಶಾಸಕರು, ಮಾಜಿ ಶಾಸಕರು ಎಎಪಿಯನ್ನು ಸೇರಲಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ಬಿಜೆಪಿ ಶಾಸಕರೋರ್ವರ ಉಚ್ಛಾಟನೆಗೆ ವರಿಷ್ಠರಿಗೆ ಶೀಘ್ರ ದೂರು

ಈ ಬಗ್ಗೆ  ಎಎಪಿ ಪ್ರಕಟಣೆ ಹೊರಿಡಿಸಿದ್ದು, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ ಹಾಗೂ ಕರ್ನಾಟಕ ಅಹಿಂದ ಪರಿಷತ್‌ನ ಅಧ್ಯಕ್ಷರಾಗಿ ಎಚ್‌.ಡಿ.ಬಸವರಾಜುರವರು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಸ್ತ ಅಹಿಂದ ವರ್ಗದ, ವಿಶೇಷವಾಗಿ ಪರಿಶಿಷ್ಟ ಪಂಗಡದ ಆಶಾಕಿರಣವಾಗಿದ್ದಾರೆ. ದಲಿತರು, ಶೋಷಿತರು, ಬಡವರು, ನೊಂದವರ ಸಹಾಯಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿರುವ ಇಂತಹ ಅನುಭವಿ ಹಾಗೂ ಪ್ರಾಮಾಣಿಕ ನಾಯಕ ಎಎಪಿಯನ್ನು ಸೇರಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಅವರನ್ನು ಆಮ್‌ ಆದ್ಮಿ ಪಾರ್ಟಿಯು ತುಂಬುಹೃದಯದಿಂದ ಬರಮಾಡಿಕೊಳ್ಳುತ್ತಿದೆ ಎಂದು ಹೇಳಿದೆ.

ಎಚ್‌.ಡಿ.ಬಸವರಾಜು ಅವರು 2018ರಲ್ಲಿ ಕಾಂಗ್ರೆಸ್‌ ಬಿಟ್ಟು ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

click me!