ನಿರ್ಮಲಾ ಸೀತಾರಾಮನ್, ಜೆ.ಪಿ.ನಡ್ಡಾ ಸೇರಿ ಕೇಂದ್ರ ಸಚಿವರುಗಳು ರಾಜೀನಾಮೆ ಕೊಡಲಿ: ಸಚಿವ ಶರಣ ಪ್ರಕಾಶ್ ಪಾಟೀಲ್

By Govindaraj SFirst Published Sep 29, 2024, 7:42 PM IST
Highlights

ನಿರ್ಮಲಾ ಸೀತರಾಮನ್, ಜೆ.ಪಿ. ನಡ್ಡಾ ಹಾಗೂ ವಿಜಯೇಂದ್ರ ಮೇಲೆ ಎಫ್ಐಆರ್ ದಾಖಲಾಗಿರುವುದು ರಾಜಕೀಯ ಪ್ರೇರಿತ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿರುವ ವಿಚಾರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಪ್ರತಿಕ್ರಿಯಿಸಿದರು.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಸೆ.29): ಮುಡಾ ಪ್ರಕರಣದಲ್ಲಿ ಏನೂ ತಪ್ಪು ಮಾಡದ ಸಿಎಂ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ಕೇಳುವ ಮೊದಲು ಕೆಲವು ಕಂಪೆನಿಗಳ ವಿರುದ್ಧ ಐಟಿ, ಇಡಿ ಬಳಸಿ ಹೆದರಿಸಿ, ಬೆದರಿಸಿ 8 ಸಾವಿರ ಕೋಟಿ ರೂಪಾಯಿ ಚುನಾವಣಾ ಬಾಂಡ್ ಪಡೆದಿರುವ ಬಿಜೆಪಿಯ ಕೇಂದ್ರ ಸಚಿವರುಗಳು ಮೊದಲು ರಾಜೀನಾಮೆ ನೀಡಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಅವರು ಆಗ್ರಹಿಸಿದ್ದಾರೆ. ಮಡಿಕೇರಿಯಲ್ಲಿ ಇರುವ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ ಎಂಆರ್ಐ ಸ್ಕ್ಯಾನಿಂಗ್ ಯಂತ್ರದ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. 

Latest Videos

ನಿರ್ಮಲಾ ಸೀತರಾಮನ್, ಜೆ.ಪಿ. ನಡ್ಡಾ ಹಾಗೂ ವಿಜಯೇಂದ್ರ ಮೇಲೆ ಎಫ್ಐಆರ್ ದಾಖಲಾಗಿರುವುದು ರಾಜಕೀಯ ಪ್ರೇರಿತ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಇದಕ್ಕೆ ಯಾರು ನಿರ್ದೇಶನ ನೀಡಲು ಸಾಧ್ಯ. ಐಫ್ಐಆರ್ ದಾಖಲಿಸಲು ಹೇಳಿರುವುದು ಕೋರ್ಟ್ ಅಲ್ಲವೆ.? ಕೋರ್ಟ್ ನಿರ್ದೇಶನದ ಮೇಲೆ ಎಫ್ಐಆರ್ ಆಗಿದ್ದು, ತನಿಖೆ ಆಗಬೇಕಾಗಿದೆ. ಮುಡಾ ಕೇಸು ಒಂದು ಸಣ್ಣ ಕೇಸು. ಇಡಿ, ಐಟಿಗಳನ್ನು ದುರುಪಯೋಗ ಮಾಡಿಕೊಂಡು ದಬ್ಬಾಳಿಕೆಯಿಂದ ಬಾಂಡ್ ಸಂಗ್ರಹಿಸಲಾಗಿದೆ ಎಂದು ಎಫ್ಐಆರ್ ಆಗಿದೆ, ಅದರಲ್ಲಿ ದಾಖಲೆಗಳಿವೆ. ಐಟಿ ದಾಳಿ ಆಗುತ್ತೆ ಆಮೇಲೆ ಅವರು ಚುನಾವಣಾ ಬಾಂಡ್ ಕೊಡುತ್ತಾರೆ. 

ನಂತರ ಆ ಕೇಸು ಮುಚ್ಚಿಹೋಗುತ್ತದೆ. ಒಂದಲ್ಲ ಇಂತಹ ನಿದರ್ಶನಗಳು ಹಲವು ಇವೆ. ಬಿಜೆಪಿ 8000 ಕೋಟಿಯನ್ನು ಚುನಾವಣಾ ಬಾಂಡ್ ಮೂಲಕ ಸಂಗ್ರಹಿಸಿದೆ. ಬೆದರಿಕೆಯೊಡ್ಡಿ ಹಣ ಸಂಗ್ರಹಿಸಿದೆ ಅಂತ ಎಫ್ಐಆರ್ ದಾಖಲಾಗಿದೆ. ಎಲ್ಲಾ ಪಕ್ಷಗಳು ಚುನಾವಣಾ ಬಾಂಡ್ ಸಂಗ್ರಹಿಸಿವೆ. ಅದರಲ್ಲಿ ಯಾವುದೇ ಅಕ್ರಮವಿಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶರಣ ಪ್ರಕಾಶ್  ಪಾಟೀಲ ಅವರು ಹೌದು ಕಾಂಗ್ರೆಸ್ ಕೂಡ ಚುನಾವಣಾ ಬಾಂಡ್ ಸ್ವೀಕರಿಸಿದೆ. ಆದರೆ ಕಾಂಗ್ರೆಸ್ ಯಾರಿಗೂ ಫೇವರ್ ಮಾಡಿಲ್ಲ. 

ಮಹಾರಾಷ್ಟ್ರದಲ್ಲಿ ಕನ್ನಡ ಡಿಂಡಿಮ: ಕನ್ನಡ ಭಾಷಿಕರ ಸಮಾಗಮಕ್ಕೆ ಸಿದ್ಧವಾದ ಸುಕ್ಷೇತ್ರ ಗುಡ್ಡಾಪುರ

ಯಾರಿಗಾದರೂ ಫೇವರ್ ಮಾಡಿ ಬಾಂಡ್ ತೆಗೆದುಕೊಂಡಿದ್ದರೆ ಅದು ಅಕ್ರಮ. ಚುನಾವಣಾ ಬಾಂಡ್ ಸಂಗ್ರಹಿಸುವಾಗ ಅಧಿಕಾರದಲ್ಲಿ ನಮ್ಮ ಸರ್ಕಾರ ಇರಲಿಲ್ಲ, ಹೀಗಾಗಿ ನಾವು ಯಾರಿಗೂ ಫೇವರ್ ಮಾಡಿಲ್ಲ. ಆದರೆ ಬಿಜೆಪಿ ಬೆದರಿಸಿ ಬ್ಲಾಕ್ ಮೇಲ್ ಮಾಡಿ ಬಾಂಡ್ ತೆಗೆದುಕೊಂಡಿದೆ. ಇದೊಂದು ದೊಡ್ಡ ಹಗರಣ. ಇದರಲ್ಲಿ ಪ್ರಧಾನಿಯಿಂದ ಹಿಡಿದು ಎಲ್ಲಾ ಸಚಿವರು ಇದರಲ್ಲಿ ಬರುತ್ತಾರೆ. ಆದ್ದರಿಂದ ಮೊದಲು ಅವರು ರಾಜೀನಾಮೆ ಕೊಡಬೇಕು ಎಂದು ಮಡಿಕೇರಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಆಗ್ರಹಿಸಿದರು.

click me!