ಜೆಡಿಎಸ್‌ ಶಾಸಕನ ಪ್ರೀತಿಗೆ ಸೋಮಣ್ಣ ಫುಲ್‌ ಖುಷ್‌: ಸಚಿವರ ಖುಷ್‌ಗೆ ಬಿಜೆಪಿಗರಿಗೆ ಶಾಕ್‌..!

By Kannadaprabha NewsFirst Published Sep 9, 2024, 3:32 PM IST
Highlights

ಸೋಮಣ್ಣ ಸ್ವಾಗತಕ್ಕೆ ಸಕಲ ವ್ಯವಸ್ಥೆಗಳನ್ನು ಜೆಡಿಎಸ್‌ ಶಾಸಕ ಕಂದಕೂರು ನೇತೃತ್ವದಲ್ಲೇ ನಡೆದಂತಿತ್ತು. ಬಂಟಿಂಗ್ಸ್‌- ಬ್ಯಾನರ್‌ಗಳಲ್ಲಿ ಸಚಿವ ಸೋಮಣ್ಣ- ಶಾಸಕ ಕಂದಕೂರು ಢಾಳಾಗಿ ಕಾಣಿಸುತ್ತಿದ್ದರು. ಯಾರು ಬಿಜೆಪಿಗರು- ಯಾರು ಜೆಡಿಎಸ್‌ನವರು ಅನ್ನೋದೇ ಯಾದಗಿರಿಗರಿಗೆ ಕನ್‌ಫ್ಯೂಶನ್‌ ಆಗಿತ್ತು. ಬಿಜೆಪಿಗರು ಈ ಕಾರ್ಯಕ್ರಮಕ್ಕೆ ಒಂದು ರೀತಿಯಲ್ಲಿ ಪ್ರೇಕ್ಷಕರಂತೆ ಕಂಡು ಬಂದರು.

-ಆನಂದ ಸೌದಿ
-ಶೇಷಮೂರ್ತಿ ಅವಧಾನಿ

ಯಾದಗಿರಿ(ಸೆ.09):  ಸಚಿವ ಸೋಮಣ್ಣ ಮೊದಲ ಬಾರಿ ಯಾದಗಿರಿಗೆ ಬರುತ್ತಿರುವುದರಿಂದ ಬಿಜೆಪಿ ವಲಯದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ, ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆದಿರುತ್ತದೆ ಎಂದೆಲ್ಲಾ ಜನ ಅಂದಿಕೊಂಡಿದ್ದರು. ಆದರೆ ಅದ್ಯಾಕೋ ಕಮಲ ಪಾಳಯದಲ್ಲಿ ವಿಷಾದ ಮಡುಗಟ್ಟಿದ ಛಾಯೆ ಆವರಿಸಿತ್ತು. ಹರಿದು ಹಂಚಿ ಹೋಗಿರುವ ಜಿಲ್ಲಾ ಬಿಜೆಪಿಗರಲ್ಲಿ ಯಾರು ಮುಂದಾಗಬೇಕು ಎಂದು ಚಿಂತನ-ಮಂಥನ ನಡೆಸುವಷ್ಟರಲ್ಲೇ, ಗುರುಮಠಕಲ್‌ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರು ಭರ್ಜರಿ ರಂಗಪ್ರವೇಶ ಮಾಡಿ ಬಿಜೆಪಿಗೆ ಭರ್ಜರಿ ಶಾಕ್‌ ನೀಡಿದ್ದರು)

Latest Videos

ಸೋಮಣ್ಣ ಓಕೆ, ಕಂದಕೂರು ಯಾಕೆ?

ವಿವಿಧ ಕಾಮಗಾರಿಗಳ ಪರಿಶೀಲನೆಗೆಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಎರಡ್ಮೂರು ದಿನಗಳ ಹಿಂದೆ ಯಾದಗಿರಿ ಪ್ರವಾಸ ಹಮ್ಮಿಕೊಂಡಿದ್ದರು. ಮೊದಲ ಬಾರಿಗೆ ಅವರು ಯಾದಗಿರಿಗೆ ಬರುತ್ತಿರುವುದರಿಂದ ಬಿಜೆಪಿ ವಲಯದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ, ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆದಿರುತ್ತದೆ ಎಂದು ಜನ ಅಂದಾಡಿಕೊಂಡಿದ್ದರಾದರೂ, ಕಮಲ ಪಾಳಯದಲ್ಲಿ ಅದ್ಯಾಕೋ ವಿಷಾದ ಮಡುಗಟ್ಟಿದ ಛಾಯೆ ಆವರಿಸಿದಂತಿತ್ತು. ಹರಿದು ಹಂಚಿ ಹೋಗಿರುವ ಜಿಲ್ಲಾ ಬಿಜೆಪಿಗರಲ್ಲಿ ಯಾರು ಮುಂದಾಗಬೇಕು ಎಂದು ಚಿಂತನ-ಮಂಥನ ನಡೆಸುವಷ್ಟರಲ್ಲೇ, ಗುರುಮಠಕಲ್‌ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರು ಭರ್ಜರಿ ರಂಗಪ್ರವೇಶ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ನನ್ನ ತಾಲೂಕು ಕನಕಪುರದಿಂದ ಚಾಮರಾಜನಗರಕ್ಕೆ ಹೊಸ ರೈಲ್ವೆ ಯೋಜನೆಗೆ ಕ್ರಮ: ಕೇಂದ್ರ ಸಚಿವ ಸೋಮಣ್ಣ

ಸೋಮಣ್ಣ ಸ್ವಾಗತಕ್ಕೆ ಸಕಲ ವ್ಯವಸ್ಥೆಗಳನ್ನು ಜೆಡಿಎಸ್‌ ಶಾಸಕ ಕಂದಕೂರು ನೇತೃತ್ವದಲ್ಲೇ ನಡೆದಂತಿತ್ತು. ಬಂಟಿಂಗ್ಸ್‌- ಬ್ಯಾನರ್‌ಗಳಲ್ಲಿ ಸಚಿವ ಸೋಮಣ್ಣ- ಶಾಸಕ ಕಂದಕೂರು ಢಾಳಾಗಿ ಕಾಣಿಸುತ್ತಿದ್ದರು. ಯಾರು ಬಿಜೆಪಿಗರು- ಯಾರು ಜೆಡಿಎಸ್‌ನವರು ಅನ್ನೋದೇ ಯಾದಗಿರಿಗರಿಗೆ ಕನ್‌ಫ್ಯೂಶನ್‌ ಆಗಿತ್ತು. ಬಿಜೆಪಿಗರು ಈ ಕಾರ್ಯಕ್ರಮಕ್ಕೆ ಒಂದು ರೀತಿಯಲ್ಲಿ ಪ್ರೇಕ್ಷಕರಂತೆ ಕಂಡು ಬಂದರು.

ಸೋಮಣ್ಣ ಅವರಿಗೆ ಜೆಡಿಎಸ್ ಶಾಸಕ ಕಂದಕೂರು ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದ ಬಗ್ಗೆ ಪ್ರವಾಸ ಪಟ್ಟಿಯಲ್ಲಿದ್ದುದು ಕಂಡು, ಬಿಜೆಪಿಗರಲ್ಲೇ ಕಸಿವಿಸಿಗೆ ಕಾರಣವಾಗಿ, ಮುಲಾಜಿಗೆ ಬಿದ್ದಂತೆ ತಾವೂ ಜಿಲ್ಲಾ ಕಚೇರಿಯಲ್ಲಿ ಸನ್ಮಾನ ಶಾಸ್ತ್ರ ಪೂರೈಸಿದರು. ಅಲ್ಲಿ ಕಾಫಿ ಕಳುಹಿಸಿದ್ದು ಕಂದಕೂರು ಪಡೆ. ಕಡೇಚೂರು ರೈಲ್ವೆ ಬೋಗಿ ಫ್ಯಾಕ್ಟರಿ ಭೇಟಿಯಿಂದ ಹಿಡಿದು, ಯಾದಗಿರಿಯಲ್ಲಿ ಒಂದಿಡೀ ದಿನ ಸೋಮಣ್ಣ ಹಾಗೂ ಶಾಸಕ ಕಂದಕೂರು ಜೋಡಿಯ ಸಾಲು ಸಾಲು ಸಭೆ ಸಮಾರಂಭ ಕಾರ್ಯಕ್ರಮಗಳು, ಧಾರ್ಮಿಕ ಮಠಗಳ ಪೀಠಾಧಿಪತಿಗಳ ಆಶೀರ್ವಾದ ಪಡೆಯಲು ತೆರಳಿದ್ದ ರೀತಿ, ಕಮಲ ಪಕ್ಷದವರನ್ನೇ ಕಂಗಾಲಾಗಿಸಿತ್ತು. ಕಡೇಚೂರು ಪ್ರವೇಶಿಸಿದ ಸೋಮಣ್ಣಗೆ, ಶಾಸಕ ಕಂದಕೂರು ಬೆಂಬಲಿಗರು ಕ್ರೇನುಗಳಲ್ಲಿ ಗುಲಾಬಿ ಹೂವಿನ ಸುರಿಮಳೆ ಸುರಿಸಿದ್ದು ತುಂತುರು ಮಳೆಯಲ್ಲಿ ವಾತಾವರಣ ಇಂಪ್ರೆಸ್ಸಿವ್‌ ಆಗಿತ್ತು..

ಶಾಸಕ ಕಂದಕೂರು ಚುರುಕಿ ನಡೆಗೆ ಮನಸೋತ ಸೋಮಣ್ಣ, "ಶರಣ್‌ ನಿನಗೆ ದತ್ತಕ್‌ ತೊಗೋಬೇಕು ಅನ್ನಿಸ್ತಿದೆ ಎಂದಾಗ, ಜೆಡಿಎಸ್‌ ಪಾಳೆಯದಲ್ಲಿ ಕರತಾಡನ ಮುಗಿಲು ಮುಟ್ಟಿತ್ತು. ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು ಭವಿಷ್ಯದಲ್ಲಿ ಯಾದಗಿರಿಗೆ ಪ್ಲಾಟ್‌ಫಾರಂ ಕಂಡುಕೊಳ್ಳಲು ತಯಾರಿ ನಡೆಸಿದ್ದಾರೆಯೇ ಅನ್ನೋ ಮಾತುಗಳು ಬಿಜೆಪಿ ವಲಯದಲ್ಲೇ ಪಿಸುಗುಟ್ಟುತ್ತಿದ್ದವು. ಒಟ್ನಲ್ಲಿ, ಸೋಮಣ್ಣ ಭೇಟಿ ಬಿಜೆಪಿಗರಿಗೆ ನುಂಗಲಾರದ ತುತ್ತಾಗಿತ್ತು ಎನ್ನಬಹುದು, ಸೋಮಣ್ಣ ಓಕೆ, ಕಂದಕೂರು ಯಾಕೆ ಅನ್ನೋ ಮಾತುಗಳ ಮಧ್ಯೆ ಖುದ್ದು ಸೋಮಣ್ಣ ಅವರು, ಶಾಸಕ ಕಂದಕೂರರನ್ನೇ ಹೊಗಳಿದ್ದೇ ಹೊಗಳಿದ್ದು..! ಸಿಕಂದರಾಬಾದ್‌ವರೆಗೂ ತೆರಳಿ ಕಂದಕೂರು ಸೋಮಣ್ಣನರನ್ನು ಬೀಳ್ಕೊಟ್ಟು ಬಂದರು. ಇಲ್ಲೊಂದಿಷ್ಟು ರೈಲುಗಳು ನಿಂತರೆ, ಅದಕ್ಕೆ ಕಂದಕೂರ ಕಾರಣ ಅನ್ನಲಾಗ್ತಿದೆ..

ಬೇಳೆ ಬೇಯಿಸಿಕೊಂಡ ಕಲಬುರಗಿ ಶಾಸಕರು!

ರಾಜಕೀಯ ಜಿದ್ದಾಜಿದ್ದಿ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲೀಗ ಹಾಲಿ ಶಾಸಕ ಕಾಂಗ್ರೆಸ್ಸಿನ ಅಲ್ಲಂಪ್ರಭು ಪಾಟೀಲ್‌, ಮಾಜಿ ಶಾಸಕ ಬಿಜೆಪಿಯ ದತ್ತಾತ್ರೇಯ ರೇವೂರ್‌ ನಡುವೆ ಟಾಕ್‌ ವಾರ್‌ ಶುರುವಾಗಿದೆ. ಇವರಿಬ್ಬರು ಅಧ್ಯಕ್ಷರಾಗಿರುವ ಸಂಸ್ಥೆಗಳಿಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಗಿರುವ ಸಿಎ ನಿವೇಶನಗಳಲ್ಲಿ ನಿಯಮಗಳ ಉಲ್ಲಂಘನೆ ಆಗಿದೆ ಎಂಬ ಆರೋಪಗಳನ್ನೇ ಮುಂದಿಟ್ಟುಕೊಂಡು ಇವರ ಮಾತಿನ ಸಮರ ಶುರುವಾಗಿದೆ. ಇಬ್ಬರೂ ಒಬ್ಬರ ಮೇಲೋಬ್ಬರು ಕೆಸರು ಎರಚಾಟಕ್ಕೆ ಮುಂದಾದರೂ ಕೂಡಾ ಅದರಲ್ಲೂ ಶಿಸ್ತು ಇರಲಿ ಅನ್ನೋರು ಅನ್ನಬಹುದು.

ಏಕೆಂದರೆ ಇಬ್ಬರೂ ತಮ್ಮ ಟೀಕೆಗಳ ಬಾಣ ಪ್ರಯೋಗಕ್ಕೆ ತಾವೇ ವೇದಿಕೆ ನಿರ್ಮಿಸಿಕೊಂಡವರಲ್ಲ. ಕಾಂಗ್ರೆಸ್‌ನ ಹಾಲಿ ಶಾಸಕ ಅಲ್ಲಂಪ್ರಭು ಪಾಟೀಲರು ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಮಾವೇಶದ ಸುದ್ದಿ ಬಗ್ಗೆ ಹೇಳಲು ಕರೆದ ಸುದ್ದಿಗೋಷ್ಠಿಯಲ್ಲೇ ಕೊನೆಗೆ ಉಳಿದ ಅಲ್ಪ ಸಮಯದಲ್ಲೇ ಮಾಜಿ ಶಾಸಕ ದತ್ತಾತ್ರೇಯ ಪಾಟೀಲರ ವಿರುದ್ಧ ವಾಗ್ದಾಳಿ ನಡೆಸಿ ಕೈಬಿಟ್ಟರು.

ಯಾದಗಿರಿ ಸಮಗ್ರ ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂಚೂಣಿಯಲ್ಲಿ ಬರುವಂತೆ ನೋಡಿಕೊಳ್ಳಿ: ಸಚಿವ ಸೋಮಣ್ಣ

ಪತ್ರಿಕೆಗಳಲ್ಲಿ ಈ ವಾಗ್ದಾಳಿ ಕಂಡು ಕಿಡಿಕಿಡಿಯಾದರೂ ದತ್ತಾತ್ರೇಯ ಪಾಟೀಲ್‌ ರೇವೂರ್‌ ಕೂಡಾ ನೇರ ಇದೇ ಕಾರಣಕ್ಕೆ ಸುದ್ದಿಗೋಷ್ಠಿ ಕರೆಯದೆ ಕೈಯಲ್ಲಿ ನಾಲ್ಕು ದಂಟು ಹೆಸರು, ಉದ್ದು, ಈರಳ್ಳು ಫಸಲು ಎತ್ತಿಕೊಂಡು ಬಂದು ಮಳೆಗೆ ಹಾಳಾಗಿದೆ, ಇದನ್ನು ನೋಡೋದಕ್ಕೂ ಪುರುಸೊತ್ತಿಲ್ಲ ಶಾಸಕರಿಗೆ ಎಂದು ತಿವಿಯುತ್ತಲೇ ತಮ್ಮ ಸಿಎಂ ಸೈಟ್‌ ಕುರಿತಾದ ಅವರ ಆರೋಪಗಳಿಗೆ ಮಾರುತ್ತರ ನೀಡುವ ಪ್ರಯತ್ನ ಮಾಡಿದರು.

ಇವರಿಬ್ಬರ ಸುದ್ದಿಗೋಷ್ಠಿ ಅಟೆಂಡ್‌ ಆದ ಸುದ್ದಿಗಾರರು ಪರೇಶಾನ್‌, ಆಹಾ, ಇವರಿಬ್ಬರು ಶಾಸಕರು ಅದೇನ್‌ ಜಾಣರಪ್ಪ? ತಮ್ಮದೇ ವೈಯಕ್ತಿಕ ವಿಷಯಗಳ ಆರೋಪ- ಪ್ರತ್ಯಾರೋಪ ಶುರುಮಾಡಿಕೊಂಡರೂ ಕೂಡಾ ಬೇಳೆಕಾಳು ಫಸಲಿನ ದಂಟು ತಂದೋ, ಧರ್ಮಸ್ಥಳ ಮಂಜುನಾಥ ನಾಮಾವಳಿ ಮೇಲೆಯೇ ತಮ್ಮ ಬೇಳೆ ಅದ್ಹೇಗೆ ಬೇಯಿಸಿಕೊಂಡರು ನೋಡಿ ಎಂದು ತಬ್ಬಿಬ್ಬಾದರೆನ್ನಿ.

ಅಂದಹಾಗೆ ಇವರಿಬ್ಬರೂ ಅಭಿವೃದ್ಧಿ, ರೈತರ ವಿಚಾರಗಳನ್ನು ಪ್ರಸ್ತಾಪಿಸಿದರೂ ಅಸಲಿಗೆ ಇವರಿಬ್ಬರ ವಾಕ್ಸಮರದ ಹಿಂದಿನ ಮರ್ಮ ಸಿಎಂ ಸೈಟ್‌ ವಿಷಯವೇ ಆಗಿರೋದು ಕಲಬರಗಿ ಮಂದಿ ಪಾಲಿಗೆ ಗುಟ್ಟಾಗಿಯಂತೂ ಉಳಿದಿಲ್ಲ ಬಿಡಿ.

click me!