
ನವದೆಹಲಿ (ಆ.21): ಕಾವೇರಿ ನದಿಯಿಂದ ತಮಿಳುನಾಡಿಗೆ 10 ಟಿಎಂಸಿ ನೀರು ಬಿಟ್ಟಿದ್ದಕ್ಕೆ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, ‘ಕಾಂಗ್ರೆಸ್ ತನ್ನ ಮಿತ್ರಪಕ್ಷ ಡಿಎಂಕೆ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಿದೆ’ ಎಂದು ಅರೋಪಿಸಿದೆ. ಪಕ್ಷದ ಪರವಾಗಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ‘ಕರ್ನಾಟಕದ ಹೆಚ್ಚಿನ ಭಾಗಗಳು ಬರಗಾಲಕ್ಕೆ ತುತ್ತಾಗಿದ್ದು, ಕಾಂಗ್ರೆಸ್ ಸರ್ಕಾರವು ಇತರ ಪಕ್ಷಗಳೊಂದಿಗೆ ಸಮಾಲೋಚಿಸದೆ ನೀರು ಬಿಡಲು ನಿರ್ಧರಿಸಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಲಿದೆ’ ಎಂದು ಆರೋಪಿಸಿದರು.
‘ಕರ್ನಾಟಕದ 16 ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ರೈತರು ಆತ್ಮಹತ್ಯೆಯಿಂದ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ ಮತ್ತು ವಿದ್ಯುತ್ ಲೋಡ್ ಶೆಡ್ಡಿಂಗ್ನಿಂದ ಕೃಷಿಗೆ ಹೊಡೆತ ಬಿದ್ದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ದುರಾಡಳಿತ, ಅಭಿವೃದ್ಧಿ ಕೊರತೆ ಮತ್ತು ಭ್ರಷ್ಟಾಚಾರದಿಂದ ಕೂಡಿದೆ’ ಎಂದು ಆರೋಪಿಸಿದರು. ‘ಕಾಂಗ್ರೆಸ್ ಪಕ್ಷ ಕೇವಲ ‘ಘಮಂಡಿಯಾ’ ಕೂಟ (ದುರಂಹಂಕಾರದ ‘ಇಂಡಿಯಾ’ ಮೈತ್ರಿಕೂಟ) ಉಳಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಟ್ಟಿದೆ. ಡಿಎಂಕೆ ಕಾಂಗ್ರೆಸ್ ಮೇಲೆ ಒತ್ತಡ ಹೇರಿದ ಇತಿಹಾಸವನ್ನು ಹೊಂದಿದೆ ಮತ್ತು ಕಾಂಗ್ರೆಸ್ ಅದಕ್ಕೆ ಮಣಿದ ಇತಿಹಾಸವನ್ನು ಹೊಂದಿದೆ’ ಎಂದು ವಾಗ್ದಾಳಿ ನಡೆಸಿದರು.
ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದವರು ಅರಸು: ಶೋಭಾ ಕರಂದ್ಲಾಜೆ
ಇದೇ ವೇಳೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೃಷಿ ಸಮಸ್ಯೆಗಳ ಬಗ್ಗೆ ಅರಿಯಲು ಯಾವತ್ತೂ ಬೆಂಗಳೂರಿನಿಂದ ಆಚೆ ಹೋಗಿಲ್ಲ ಮತ್ತು ಅವರ ಪ್ರವಾಸವು ದೆಹಲಿಯೊಂದಿಗೆ ವ್ಯವಹರಿಸಲು ಸೀಮಿತವಾಗಿದೆ’ ಎಂದು ಆಪಾದಿಸಿದರು.
4 ದೇಶಗಳ ಜತೆ ಮಹತ್ವದ ಚರ್ಚೆ: ಡಿಜಿಟಲ್ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ, ಕೌಶಲ್ಯಾಭಿವೃದ್ಧಿ, ಸೈಬರ್ ಸೆಕ್ಯುರಿಟಿ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಫ್ರಾನ್ಸ್ ಮತ್ತು ಟರ್ಕಿ ದೇಶಗಳ ಜೊತೆ ಶುಕ್ರವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಭಾರತದಲ್ಲಿ ನಡೆಯುತ್ತಿರುವ ಜಿ20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಸಭೆಯ ಬಳಿಕ ಸಚಿವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಾಂಗ್ಲಾದೇಶದ ಐಸಿಟಿ ಸಚಿವ ಜುನೇದ್ ಅಹ್ಮದ್ ಪಲಾಕ್ ಅವರ ಜೊತೆ ಮಾತುಕತೆ ನಡೆಸಿದರು.
ಇಂಡಿಯಾ ಸ್ಟೇಕ್, ಸೈಬರ್ ಭದ್ರತೆ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ಉಭಯ ದೇಶಗಳ ಸಹಭಾಗಿತ್ವದ ಕುರಿತು ಚರ್ಚಿಸಿದರು. ಈ ವೇಳೆ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ದಕ್ಷಿಣ ಏಷ್ಯಾದಲ್ಲಿ ಹೊಸ ಕತೆಯನ್ನು ಬರೆಯಲಿದೆ ಎಂದು ಹೇಳಿದರು. ಫ್ರಾನ್ಸ್ನ ಡಿಜಿಟಲ್ ಸಚಿವಾಲಯದ ರಾಯಭಾರಿ ಹೆನ್ರಿ ವೆರ್ಡಿಯರ್ ಜೊತೆ ಮಾತನಾಡಿದ ಅವರು, ಯಾವ ದೇಶಗಳು ತಮ್ಮ ಸರ್ಕಾರ ಮತ್ತು ಆರ್ಥಿಕತೆಯನ್ನು ಡಿಜಿಟಲ್ ಮಾಡಲು ಬಯಸುತ್ತವೆಯೋ ಅಂತಹ ರಾಷ್ಟ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ನಂತಹ ಸಮಾನಮನಸ್ಕ ದೇಶಗಳಿಗೆ ಅವಕಾಶಗಳಿವೆ ಎಂದು ಹೇಳಿದರು.
ಕೊಡಗು-ಮೈಸೂರು ಲೋಕಸಭೆ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿ ಯಾರಿದ್ದಾರೆ?: ಪ್ರತಾಪ್ ಸಿಂಹ
ಟರ್ಕಿಯ ಉದ್ಯಮ ಮತ್ತು ತಂತ್ರಜ್ಞಾನ ಸಚಿವಾಲಯದ ಸಚಿವ ಮೆಹ್ಮೆತ್ ಫೇಯ್್ತ ಕಾಸಿರ್ ಜೊತೆ ಚರ್ಚೆ ನಡೆಸಿದ ಅವರು, ಭವಿಷ್ಯದ ತಂತ್ರಜ್ಞಾನ ಕೇವಲ ಕೆಲವು ದೇಶಗಳನ್ನು ಮಾತ್ರ ಒಳಗೊಳ್ಳಬಾರದು. ಹೆಚ್ಚು ದೇಶಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದರು. ದಕ್ಷಿಣ ಕೊರಿಯಾದ ವಿಜ್ಞಾನ ಮತ್ತು ಐಸಿಟಿ ಸಚಿವರೊಂದಿಗೆ ಮಾತುಕತೆ ನಡೆಸಿದ ಅವರು, ಎಲೆಕ್ಟ್ರಾನಿಕ್ಸ್ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹಾಗೂ ದಕ್ಷಿಣ ಕೊರಿಯಾಗಳ ಸಂಬಂಧ ಉತ್ತಮಗೊಳಿಸುವ ಕುರಿತಾಗಿ ಚರ್ಚೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.