
ಕೆ.ಆರ್.ಪೇಟೆ (ಜು.22) : ರಾಜ್ಯ ಸರ್ಕಾರದ ಸಚಿವರ ನಡುವೆ ಹಣ ಲೂಟಿ ಮಾಡಲು ಪೈಪೋಟಿ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಆರೋಪಿಸಿದರು.
ಪಟ್ಟಣದ ಟಿಬಿ ಬಡಾವಣೆಯ ಪುರಸಭಾ ಮೈದಾನದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸಿ/ಎಸ್ಟಿ ಕುಟುಂಬದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನೇ ದೋಚುವ ಸರ್ಕಾರ ಅಧಿಕಾರದಲ್ಲಿದೆ ಎಂದು ದೂರಿದರು.
ಸಂಡೂರಲ್ಲಿ ಗಣಿಗಾರಿಕೆಗೆ ಸಹಿ ಮಾಡಿದ್ದು ಮಹಾ ಅಪರಾಧ: ಕುಮಾರಸ್ವಾಮಿ ವಿರುದ್ಧ ಎಸ್.ಆರ್. ಹಿರೇಮಠ ವಾಗ್ದಾಳಿ
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರು. ಹಗರಣ ಆಗಿಲ್ಲ. ಕೇವಲ 94 ಕೋಟಿ ಅವ್ಯವಹಾರ ಆಗಿದೆ ಎಂದು ಸ್ವತಃ ಮುಖ್ಯಮಂತ್ರಿ ಹೇಳುತ್ತಾರೆ. 94 ಕೋಟಿ ಕದ್ದರೆ ಅದು ಕಳ್ಳತನ ಅಲ್ಲವೇ. ರಾಜ್ಯದಲ್ಲಿ ಜನರ ತೆರಿಗೆ ಹಣ ಲೂಟಿಯಾಗುತ್ತಿದೆ. ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಬಿಜೆಪಿ ಕಾಲದ 21 ಹಗರಣಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗ ಹೇಳುತ್ತಿದ್ದಾರೆ. ಈ ಹಿಂದೆ ಅವರೇ ಸಿಎಂ ಆಗಿದ್ದರು. ಆಗ ಏಕೆ ತನಿಖೆ ಮಾಡಿಸಲಿಲ್ಲ ? ಎಂದು ಎಂದು ಪ್ರಶ್ನಿಸಿದರು.
ಎಸ್.ಎಂ.ಕೃಷ್ಣ ಅಧಿಕಾರದ ಅವಧಿಯಲ್ಲಿನ ಅರ್ಕಾವತಿ ಬಡಾವಣೆಯನ್ನು ರೀಡೂ ಹೆಸರಿನಲ್ಲಿ, ಡಿನೋಟಿಫಿಕೇಷನ್ ಹೆಸರಿನಲ್ಲಿ ದೊಡ್ಡದೊಡ್ಡ ಕುಳಗಳಿಗೆ ಹಂಚಿದ್ದಾರೆ. ನೈಸ್ ಕಂಪನಿಯ ಹಗಲು ದರೋಡೆ ಬಗ್ಗೆ ಕಾಂಗ್ರೆಸ್ಸಿಗರೇ ಆದ ಟಿ.ಬಿ.ಜಯಚಂದ್ರ ನೀಡಿದ್ದ ವರದಿಯನ್ನು ಸರ್ಕಾರ ಕಸದ ಬುಟ್ಟಿಗೆ ಹಾಕಿದೆ. ಭ್ರಷ್ಟರ ಕೈಯಲ್ಲಿ ಆಡಳಿತ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಕಾಲದಲ್ಲಿ ರೈತರು ಟಿಸಿ ಹಾಕಿಸಿಕೊಳ್ಳಲು 25 ಸಾವಿರ ರು. ಸಾಕಾಗಿತ್ತು. ಆದರೆ, ಈಗ ಎರಡುವರೆ ಲಕ್ಷ ಕೊಡಬೇಕಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಎಷ್ಟು ದಿನ ನೀವು ನಿಮ್ಮ ಗ್ಯಾರಂಟಿ ನೀಡುತ್ತೀರಿ. ಖಜಾನೆ ಖಾಲಿಯಾದ ಮೇಲೆ ನಿಮ್ಮ ಗ್ಯಾರಂಟಿ ಯೋಜನೆಗೆ ಎಲ್ಲಿಂದ ಹಣ ತರುತ್ತೀರಿ ಎಂದು ಆಕ್ರೋಶ ಹೊರ ಹಾಕಿದರು.
ಎಚ್ಡಿಕೆ ಮಂಡ್ಯಕ್ಕೆ ಏನು ಮಾಡ್ತಿದ್ದಾನೆ ಅಂತಾರೆ, ನನಗೆ ಉಸಿರಾಡಲು ಆಗ್ತಿಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ
ನಾನು ಸಿಎಂ ಆಗಿದ್ದಾಗ ನಾಡಿನ ತಾಯಂದಿರ ಅಪೇಕ್ಷೆಯ ಮೇರೆಗೆ ಸಾರಾಯಿ, ಮತ್ತು ಲಾಟರಿಗಳನ್ನು ನಿಷೇಧಿಸಿದ್ದೆ. ಈಗ ಶಾಸಕರಾಗಿರುವವರು ಮಟ್ಕ, ಜೂಜು ಆಟ ಆಡಿಸಿಕೊಂಡು ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.