
ಬೀದರ್(ಏ.19): ಡಿಸಿಸಿ ಬ್ಯಾಂಕ್ ಮೇಲೆ ಐಟಿ ದಾಳಿಯಾಗಿದ್ದು ಮೊದಲ ಬಾರಿ. ಇದು ನಿಮ್ಮ ಕರ್ಮಕಾಂಡದ ಫಲವಾಗಿದೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿರುದ್ಧ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು. ಗುರುವಾರ ನಗರದ ಗಣೇಶ ಮೈದಾನದಲ್ಲಿ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಮಾತನಾಡಿದ ಅವರು, ಐಟಿ, ಸಿಬಿಐ ಸ್ವತಂತ್ರ ಸಂಸ್ಥೆಗಳಾಗಿವೆ. ಅವರಿಗೆ ನಾನೇಕೆ ದಾಳಿ ಮಾಡಿಸಲಿ ಎಂದರು.
ಈಶ್ವರ ಖಂಡ್ರೆ ಅವರೇ ಸುಳ್ಳು ಹೇಳುತ್ತಾರೆ ಎಂದು ತಿಳಿದುಕೊಂಡಿದ್ದೆ ಆದರೆ ಈಗ ತಂದೆಯಂತೆ ಮಗ ಕೂಡ ಸುಳ್ಳು ಹೇಳುವುದರಲ್ಲಿ ಪ್ರತಿಸ್ಪರ್ಧೆ ನಡೆಸಿದಂತೆ ಕಾಣುತ್ತಿದೆ ಎಂದ ಅವರು ಬುಧವಾರ ನಡೆದ ಕಾಂಗ್ರೆಸ್ ಸಮಾರಂಭದಲ್ಲಿ ಸಾಗರ ಖಂಡ್ರೆ ನನಗೆ ಸವಾಲು ಮಾಡಿದ್ದಾರೆ. ಆದರೆ ನಿಮ್ಮ ಕುಟುಂಬದ ಹಿನ್ನೆಲೆ ನೋಡಿಕೊಳ್ಳಿ ಎಂದು ವ್ಯಂಗ್ಯವಾಡಿದರು.
'ಅವನೊಬ್ಬ ರೌಡಿ' ಅಂತಾ ಜನರೇ ಹೇಳ್ತಾರೆ: ಡಿಕೆ ಸುರೇಶ್ ವಿರುದ್ಧ ಆರ್ ಆಶೋಕ್ ವಾಗ್ದಾಳಿ
ಈಶ್ವರ ಖಂಡ್ರೆ ಚುನಾವಣೆಗೆ ಮುನ್ನವೇ ಸೀರೆ ಹಂಚುವುದು, ಹಣ ಹಂಚುವುದು, ಹತ್ತಾರು ಕೋಟಿ ಖರ್ಚು ಮಾಡಿ ಮಗನ ಕಟೌಟ್ ಹಾಕುವುದು, ಕ್ಯಾಲೆಂಡರ್ ಹಂಚುವುದು ಮಾಡಿದ್ದಾರೆ. ಆದರೆ ಜನರಿಗೆ ಸುಳ್ಳು ಹೇಳುವುದರಲ್ಲಿ ಇಬ್ಬರು ನಿಸ್ಸೀಮರಾಗಿದ್ದಾರೆ ಎಂದು ಆರೋಪಿಸಿದರು.
ಸಾಗರ ಖಂಡ್ರೆಗೆ ಅವರ ಕುಟುಂಬದ ಮೇಲಿರುವ ಆರೋಪಗಳ ಪಟ್ಟಿ ಮಾಡಿದ ಖೂಬಾ, ಖಂಡ್ರೆ ಕುಟುಂಬದ ಮೇಲೆ ದಲಿತ ವಕೀಲರಾದ ಕುಂದೆ ಅವರ ಹತ್ಯೆ ಆರೋಪ ಇದೆ. ಇದನ್ನು ನಿಮ್ಮ ತಂದೆಗೆ ಕೇಳಿ ಎಂದು ಸಾಗರ ಖಂಡ್ರೆಗೆ ಕಿವಿ ಮಾತು ಹೇಳಿದರು.
ಅನವಶ್ಯಕವಾಗಿ ನನ್ನ ಮೇಲೆ ಆರೋಪ ಮಾಡುತ್ತಿರುವ ಖಂಡ್ರೆ ಕುಟುಂಬ 65 ವರ್ಷದ ರಾಜಕಾರಣದಲ್ಲಿ ನಕಲಿ ಬಸ್ ಟಿಕೆಟ್ ಯಾರ ಕಾಲದಲ್ಲಿ ನಡೆಯಿತು ಹೇಳಬೇಕು. ಅನೇಕ ವರ್ಷಗಳು ಕಳೆದರೂ ಕಾರಂಜಾ ಜಲಾಶಯ ಪೂರ್ಣಗೊಂಡಿಲ್ಲ. ಆದರೆ ಪ್ರತಿ ವರ್ಷ ಕೆನಲ್ ದುರುಸ್ತಿ ಹೆಸರಿನಲ್ಲಿ ಲಕ್ಷಾಂತರ ರು. ಖರ್ಚಾಗುತ್ತದೆ, ಇದು ಏಕೆ ಎಂದು ಗೊತ್ತಾಗಿಲ್ಲ. ಜಿಲ್ಲೆಯಾದ್ಯಂತ ಕರಿ ಕಲ್ಲಿನ ಕಾಂಪೌಂಡ್ ಬೆಳೆಯುತಾ ಹೋಯಿತು. ಜನರಿಗೆ ನ್ಯಾಯ ಏನು ಕೋಡುತ್ತೀರಾ ಎಂದು ಪ್ರಶ್ನಿಸಿದರು.
ಮಂಡ್ಯ ಸ್ಪರ್ಧೆ ಬಿಟ್ಟು ಬಿಜೆಪಿ ಬೆಂಬಲಿಸುತ್ತಿರುವ ಸುಮಲತಾಗೆ ಇಡಿ, ಐಡಿ ಭಯವೇ?: ಈಶ್ವರ್ ಖಂಡ್ರೆ
ಫಸಲ್ ಬಿಮಾ ಎಂಬುವುದೇ ಸಾಗರ್ಗೆ ಗೊತ್ತಿಲ್ಲ. ಜಿಲ್ಲೆಯಲ್ಲಿ ಸುಮಾರು 1200 ಕೋಟಿ ರು. ರೈತರ ಖಾತೆಗೆ ನೇರವಾಗಿ ಜಮೆ ಮಾಡಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ವಿದ್ಯಾನಿಧಿ, ರೈತರಿಗೆ 4 ಸಾವಿರ ರು. ಸಹಾಯದ ಧನವನ್ನು ಸ್ಥಗಿತಗೊಳಿಸಿದೆ. ಬರಗಾಲ ಘೋಷಣೆಯಾಗಿದ್ದರೂ ರೈತರಿಗೆ ನಯಾ ಪೈಸೆ ನೀಡಿಲ್ಲ ಇದು ರೈತ ವಿರೋಧಿ ಸರ್ಕಾರ ಅಲ್ಲವೇ ಎಂದು ಪ್ರಶ್ನಿಸಿದರು.
ಮರಾಠಾ ಅಭ್ಯರ್ಥಿಯನ್ನು ನಿಲ್ಲಿಸಿ ಕಾಂಗ್ರೆಸ್ಗೆ ಲಾಭ ಮಾಡಬೇಡಿ:
ಮರಾಠಾ ಸಮಾಜ ಬಾಂಧವರು ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯನ್ನಾಗಿ ನಿಲ್ಲಿಸಿ ಕಾಂಗ್ರೆಸ್ಗೆ ಲಾಭ ಮಾಡಬೇಡಿ. ನಿಮ್ಮ ಏನೇ ಸಮಸ್ಯೆ ಇದ್ದರೂ ಕುಳಿತುಕೊಂಡು ಮಾತಾಡೋಣ ಬನ್ನಿ ಎಂದು ಮರಾಠಿಯಲ್ಲಿ ಮಾತಾಡಿ, ಭಗವಂತ ಖೂಬಾ ಮನವಿ ಮಾಡಿದ ಪ್ರಸಂಗ ಜರುಗಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.