* ಕೆಪಿಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿಗೆ ಬೆದರಿಕೆ ಕರೆ
* ಪತ್ರಿಕಾಗೋಷ್ಠಿ ನಡೆಸಿದ ವಿಷಯವನ್ನು ಬಹಿರಂಗಪಡಿಸಿದ ಭವ್ಯಾ ನರಸಿಂಹಮೂರ್ತಿ
* ಇದರ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹ
ಬೆಂಗಳೂರು, (ಜೂನ್.12): ಕೆಪಿಸಿಸಿ ವಕ್ತಾರೆ ಭವ್ಯಾ ನರಸಿಂಹಮೂರ್ತಿಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಬಗ್ಗೆ ಸ್ವತಃ ಅವರೇ ಬೆಂಗಳೂರಿನಲ್ಲಿ ಇಂದು (ಶನಿವಾರ) ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವನ್ನು ಬಹಿರಂಗಪಡಿಸಿದರು.
ನಾನು ಕೆಪಿಸಿಸಿ ಮೀಡಿಯಾ ಪ್ಯಾನಲಿಸ್ಟ್ ಇರುವ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಕಾರ್ಯಗಳ ಬಗ್ಗೆ ವಿವರಣೆ ನೀಡುತ್ತೇನೆ. ಆದರೆ ಇದನ್ನು ಸಹಿಸಲಾಗದೇ ಕರೆ ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಚರ್ಚೆಗಳಿಗೆ ಹೋಗಿ ಬಂದ ನಂತರ ಇಂತಹ ಕರೆಗಳು ಬರುತ್ತಿವೆ. ಸೈಬರ್ ಕ್ರೈಂ ಪೊಲೀಸರಿಗೆ ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೂ ಈ ಬಗ್ಗೆ ದೂರು ನೀಡಿದ್ದೇನೆ. ಆದರೆ ಮತ್ತೆ ದೂರು ಕೊಡೋಕೆ ಹೋದ್ರೆ ನಮಗೇ ಪ್ರಶ್ನೆ ಕೇಳ್ತಾರೆ. ನಮ್ಮ ವ್ಯಾಪ್ತಿಗೆ ನಿಮ್ಮ ಕೇಸ್ ಬರಲ್ಲವೆಂದು ಡಿಸಿಪಿ ವಾಪಸ್ ಕಳಿಸಿದ್ದಾರೆ ಎಂದು ಆರೋಪಿಸಿದರು.
ನನಗೆ ಮತ್ತೆ 2 ದಿನಗಳಿಂದ ಬೆದರಿಕೆ ಕರೆಗಳು ಬರುತ್ತಲೇ ಇವೆ. ಇದನ್ನು ಒಬ್ಬರೇ ಮಾಡುತ್ತಿಲ್ಲ. ಬದಲಿಗೆ ಯೋಜನೆ ರೂಪಿಸಿ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಅವರು ದೂರಿದರು.
ಜೂನ್ 9ರಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಕ್ರೈಂ ಬ್ರ್ಯಾಂಚ್ಗೆ ದೂರು ನೀಡುತ್ತಿದ್ದಾಗಲೂ ಕರೆ ಬಂದಿತ್ತು. ನೀವೇ ಮಾತಾಡಿ ಎಂದು ಪೊಲೀಸರಿಗೆ ಮೊಬೈಲ್ ಕೊಟ್ಟಿದ್ದೆ. ಸಿಮ್ಗಳು ಬೇರೆ ಬೇರೆ ರಾಜ್ಯಗಳಲ್ಲಿ ರಿಜಿಸ್ಟ್ರೇಷನ್ ಆಗಿವೆ. ಆದರೆ ಎಲ್ಲರೂ ಕನ್ನಡದಲ್ಲೇ ಮಾತನಾಡುತ್ತಾರೆ. ಹೀಗಾಗಿ ಸ್ಥಳೀಯರೇ ನನಗೆ ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದರು.