
ಕಲಬುರಗಿ (ಫೆ.24): ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಮಾತೇ ಇಲ್ಲ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಮಾಡುವ ಕುರಿತಾದ ನಿರ್ಧಾರವೇನಿದ್ದರೂ ಪಕ್ಷದ ಹೈಕಮಾಂಡ್ ಮಾತ್ರ ಮಾಡುತ್ತದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವಧಿಗಿಂತಲೂ ಹೆಚ್ಚಿರುತ್ತಾರೆ. ಆ ಮೂಲಕ ರೆಕಾರ್ಡ್ ಮುರಿಯುತ್ತಾರೆ ಎಂದರು. ಇಷ್ಟಕ್ಕೂ ರೆಕಾರ್ಡ್ ಇರೋದೇ ಮುರಿಯೋದಕ್ಕೆ ಅಂತನ್ನುವ ಮಾತಿದೆ. ಈ ಮಾತು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಅನ್ವಯವಾಗುತ್ತದೆ.
ಯಾರೇ ಮುಖ್ಯಮಂತ್ರಿಯಾದರೂ ಅವಕಾಶ ಸಿಕ್ಕಾಗ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಬೇಕಾಗುತ್ತದೆ. ಅದನ್ನೇ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ನುಡಿದರು. ರಾಜ್ಯದಲ್ಲಿ ದಲಿತ ಸಮಾವೇಶ ನಡೆಸುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ದಲಿತ ಸಮಾವೇಶ ನಡೆಯುತ್ತಲೇ ಇರುತ್ತದೆ. ಆ ಕುರಿತು ಎಲ್ಲಿಯೂ ಅಪಸ್ವರ ಕೇಳಿಬಂದಿಲ್ಲ. ಪಕ್ಷದ ವೇದಿಕೆಯಿಂದ ಮಾಡುವುದಾದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಾಗುತ್ತದೆ. ಇಷ್ಟಕ್ಕೂ ದಲಿತ ಸಮಾವೇಶ ಮಾಡದಂತೆ ಪಕ್ಷದ ಹೈಕಮಾಂಡ್ ಎಲ್ಲಿಯೂ ಹೇಳಿಲ್ಲವಲ್ಲ ಎಂದರು.
ಯಾವುದಾದರೂ ವಿಷಯ ಮಾತನಾಡುವಾಗ ಪಕ್ಷಕ್ಕೆ ಮುಜುಗರ ಆಗದಂತೆ ಮಾತನಾಡಬೇಕೆಂದು ಇದೇ ವೇಳೆ ಸಚಿವ ಮಹಾದೇವಪ್ಪ ಕಿವಿಮಾತು ಹೇಳಿದರು. ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಪ್ರಕರಣ ಕುರಿತು ಪ್ರಸ್ತಾಪಿಸಿದ ಅವರು, ಇದು ದುರಾದೃಷ್ಟವಶತ್ ನಡೆದ ಘಟನೆ. ನಾವೆಲ್ಲರೂ ಭಾರತೀಯರು. ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರ ಇಲ್ಲಿಯವರೆಗೆ ಸಾಕಷ್ಟು ಚರ್ಚೆಯಾಗಿದೆ. ಅಂತಿಮವಾಗಿ ಇಬ್ಬರಿಗೂ ಸೇರಬೇಕಾದ ಹಳ್ಳಿಗಳು ಸೇರಿಯಾಗಿದೆ. ಇಷ್ಟಾದರೂ ಈ ರೀತಿ ಕ್ಯಾತೆ ತೆಗೆಯುವವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. ಪಿಯುಸಿ ಪರೀಕ್ಷೆಯಲ್ಲಿ ಹಿಜಾಬ್ ಬಳಕೆಗೆ ಅವಕಾಶ ನೀಡುವ ವಿಚಾರ ಪ್ರಸ್ತಾಪಿಸಿದ ಸಚಿವರು, ಕಾನೂನಿನ ಚೌಕಟ್ಟಿನಲ್ಲಿ ಏನೆಲ್ಲಾ ಅವಕಾಶಗಳಿವೆ ಎಂಬುದನ್ನು ಪರಾಮರ್ಶಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ನುಡಿದರು.
ಆರ್ಥಿಕ ಬೆಳವಣಿಗೆಯಲ್ಲಿ ಸಣ್ಣ, ಸೂಕ್ಷ್ಮ ಕೈಗಾರಿಕೆಗಳ ಪಾತ್ರ ಪ್ರಮುಖ: ಸಚಿವ ಮಹದೇವಪ್ಪ
ಎಸ್ಸಿಪಿ/ಟಿಎಸ್ಪಿ ಹಣ ದುರ್ಬಳಕೆ ಇಲ್ಲ: ಎಸ್ಸಿಪಿ/ಟಿಎಸ್ಪಿ ಅನುದಾನವನ್ನು ಉದ್ದೇಶಿತ ಕಾರಣಕ್ಕೆ ಬಿಟ್ಟು ಇತರ ಉದ್ದೇಶಗಳಿಗೆ ಬಳಸುವಂತಿಲ್ಲ. ಇತ್ತೀಚೆಗೆ ಬಜೆಟ್ ಸಿದ್ಧತಾ ಪೂರ್ವ ಸಭೆಯಲ್ಲಿ ಮುಖ್ಯಮಂತ್ರಿ ದಲಿತ ಸಂಘಟನೆಗಳ ಮುಖಂಡರನ್ನು ಕರೆದು ಚರ್ಚಿಸಿದ್ದಾರೆ. ಅವರು ಸಹ ಸಾಕಷ್ಟು ಸಲಹೆ ನೀಡಿದ್ದಾರೆ ಎಂದು ಸಚಿವ ಮಹಾದೇವಪ್ಪ ತಿಳಿಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ/ಟಿಎಸ್ಪಿ ಹಣ ಬಳಸುವುದಿಲ್ಲ. ಆ ಯೋಜನೆಯಲ್ಲಿ ಬರುವ ಅನುದಾನವನ್ನು ಅದೇ ಜನರಿಗೆ ಬಳಕೆ ಮಾಡಲಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.