Karnataka Politics: ಹೊರಟ್ಟಿ ಬಿಜೆಪಿ ಸೇರಲು ತಾಂತ್ರಿಕ ಅಡ್ಡಿ..!

By Girish GoudarFirst Published May 17, 2022, 5:08 AM IST
Highlights

*   ಸಭಾಪತಿ, ಉಪಸಭಾಪತಿ ಇಲ್ಲದೆ ಎಂಎಲ್‌ಸಿ ರಾಜೀನಾಮೆ ಯಾರಿಗೆ ಸಲ್ಲಿಕೆ?
*  ತಾಂತ್ರಿಕ ಅಡ್ಡಿ ನೀಗಲು ಶೀಘ್ರ ಹಂಗಾಮಿ ಸಭಾಪತಿ/ಉಪಸಭಾಪತಿ ನೇಮಕ?
*   ಪರಿಷತ್‌ ಸಭಾಪತಿ ಹೊರಟ್ಟಿ ರಾಜೀನಾಮೆ
 

ಬೆಂಗಳೂರು(ಮೇ.17):  ಜೆಡಿಎಸ್‌ನ(JDS) ಹಿರಿಯ ನಾಯಕ ಬಸವರಾಜ ಹೊರಟ್ಟಿ(Basavaraj Horatti) ಅವರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಪರಿಷತ್ತಿನ ಸಭಾಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸೋಮವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಭಾಪತಿಯಾಗಿ ಮಾಡಿರುವ ಕಾರ್ಯಗಳು ಮತ್ತು ಜೆಡಿಎಸ್‌ನಲ್ಲಿನ ಸುದೀರ್ಘ ಅನುಭವ ಕುರಿತು ಮಾಹಿತಿ ನೀಡಿದ ಬಳಿಕ ರಾಜೀನಾಮೆ ಸಲ್ಲಿಸಿದರು. ಉಪಸಭಾಪತಿ ಹುದ್ದೆ ಖಾಲಿ sಇರುವ ಕಾರಣ ವಿಧಾನಪರಿಷತ್‌ನ ಕಾರ್ಯದರ್ಶಿ ಮಹಾಲಕ್ಷ್ಮೇ ಅವರಿಗೆ ರಾಜೀನಾಮೆ ನೀಡಿದರು.

ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಜೆಡಿಎಸ್‌ನಲ್ಲಿದ್ದ ಬಸವರಾಜ ಹೊರಟ್ಟಿ ಅವರು ಬಿಜೆಪಿಗೆ ಸೇರಲು ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕಾರಕ್ಕಿರುವ ತಾಂತ್ರಿಕ ಕಾರಣ ಅಡ್ಡಿಯಾಗಿದೆ. ಹೀಗಾಗಿ ಸಭಾಪತಿ ಹುದ್ದೆಗೆ ಸಲ್ಲಿಸಿರುವ ರಾಜೀನಾಮೆ ಅಂಗೀಕಾರಕ್ಕಷ್ಟೇ ಪ್ರಕ್ರಿಯೆ ಆರಂಭಗೊಂಡಿದೆ.

Family Politics: ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಮಲ ಮುಡಿದರೇ ಹೊರಟ್ಟಿ?

ಸಭಾಪತಿ ಹುದ್ದೆಗೆ ಹೊರಟ್ಟಿ ಅವರು ಮೇಲ್ಮನೆ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಅದನ್ನು ರಾಜ್ಯಪಾಲರಿಗೆ(Governor) ಕಳುಹಿಸುತ್ತಾರೆ. ರಾಜ್ಯಪಾಲರು ಅದನ್ನು ಅಂಗೀಕರಿಸುವುದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ, ಮೇಲ್ಮನೆ ಸದಸ್ಯ ಸ್ಥಾನಕ್ಕೆ ಹೊರಟ್ಟಿ ಅವರು ಸಭಾಪತಿ(Speaker) ಅಥವಾ ಉಪಸಭಾಪತಿಗೆ ಮಾತ್ರ ರಾಜೀನಾಮೆ ನೀಡಬೇಕಾಗಿದೆ. ಅವರೇ ಸಭಾಪತಿಯಾದ್ದರಿಂದ ಸಭಾಪತಿಗೆ ರಾಜೀನಾಮೆ ನೀಡಲು ಬರುವುದಿಲ್ಲ. ಸದ್ಯ ಉಪಸಭಾಪತಿ ಹುದ್ದೆಯೂ ಖಾಲಿ ಇರುವ ಕಾರಣದಿಂದಾಗಿ ಹೊರಟ್ಟಿಅವರ ಸದಸ್ಯತ್ವ ರಾಜೀನಾಮೆಗೆ ತಡೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಉಪಸಭಾಪತಿ ಹುದ್ದೆಗೆ ಯಾರನ್ನಾದರೂ ನೇಮಕ ಮಾಡುವವರೆಗೆ ಮೇಲ್ಮನೆ ಸದಸ್ಯ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ ಸಲ್ಲಿಕೆ ಮಾಡಲು ಬರುವುದಿಲ್ಲ. ತಕ್ಷಣಕ್ಕೆ ಸರ್ಕಾರ ಹಂಗಾಮಿ ಉಪಸಭಾಪತಿಯನ್ನಾದರೂ ನೇಮಕ ಮಾಡಬೇಕಿದೆ.
ತಾಂತ್ರಿಕ ಕಾರಣದಿಂದಾಗಿ ಹೊರಟ್ಟಿ ರಾಜೀನಾಮೆಯನ್ನು ತಡೆಹಿಡಿದಿರುವುದರಿಂದ ಬಿಜೆಪಿ ಸೇರ್ಪಡೆಯನ್ನು ಮುಂದೂಡಬೇಕಾಗುತ್ತದೆ. ಇಲ್ಲದಿದ್ದರೆ ಸರ್ಕಾರವು ತರಾತುರಿಯಲ್ಲಿ ಮಂಗಳವಾರವೇ ಹಂಗಾಮಿ ಸಭಾಪತಿ ಅಥವಾ ಉಪಸಭಾಪತಿಯನ್ನು ನೇಮಕ ಮಾಡಿದರೆ ಮೇಲ್ಮನೆ ಸದಸ್ಯ ಸ್ಥಾನದ ರಾಜೀನಾಮೆ ಪ್ರಕ್ರಿಯೆ ನಡೆಸಿ ಸಂಜೆ ವೇಳೆಗೆ ಬಿಜೆಪಿಗೆ ಸೇರಬಹುದು ಎನ್ನಲಾಗಿದೆ.

ಈ ಮೊದಲಿನ ನಿರ್ಧಾರದಂತೆ ಹೊರಟ್ಟಿ ಅವರು ಮಂಗಳವಾರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುವ ಕಾರ್ಯಕ್ರಮವಿತ್ತು. ಇದೀಗ ಅವರ ಸದಸ್ಯತ್ವದ ರಾಜೀನಾಮೆ ಅಂಗೀಕಾರದ ಬೆಳವಣಿಗೆ ಆಧರಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸೇರ್ಪಡೆ ಬಳಿಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅವರನ್ನು ಘೋಷಣೆ ಮಾಡಲಾಗುತ್ತದೆ.
 

click me!