ಸಿಎಂ ಸಭೆಯಲ್ಲಿ ವಿಜಯೇಂದ್ರ ಹೆಸ್ರು ಪ್ರಸ್ತಾಪ: ಯತ್ನಾಳ್- ರೇಣುಕಾಚಾರ್ಯ ಜಟಾಪಟಿ....

By Suvarna NewsFirst Published Jan 4, 2021, 8:40 PM IST
Highlights

ಪದೇ-ಪದೇ ಸಿಎಂ ಬಿಎಸ್‌ವೈ ವಿರುದ್ಧ ಬಹಿರಂಗ ಹೇಳಿಕೆ ಕೊಡುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಇಂದಿನ ಸಿಎಂ ಸಭೆಯಲ್ಲಿ ವಿಜಯೇಂದ್ರ  ಹಸ್ತಕ್ಷೇಪ ಪ್ರಸ್ತಾಪ ಮಾಡಿದ್ದಾರೆ.

ಬೆಂಗಳೂರು, (ಜ.04): ಮುಂಬೈ, ಮಧ್ಯ ಕರ್ನಾಟಕ ಭಾಗದ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ನಡೆಸಿದ ಸಭೆಯಲ್ಲಿ ಸಭೆಯಲ್ಲಿ ಸಿಎಂ ಪುತ್ರ ವಿಜಯೇಂದ್ರ ಬಗ್ಗೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆಕ್ಷೇಪ ವ್ಯಕ್ತಪಡಿಸಿರುವ ಪ್ರಸಂಗ ನಡೆದಿದೆ.

ಹೌದು..ಇಷ್ಟು ದಿನ ಕೇವಲ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಸಿಎಂ ಹಾಗೂ ಅವರ ಪುತ್ರ ವಿಜಯೇಂದ್ರ ಬಗ್ಗೆ ಹೇಳಿಕೆ ಕೊಡುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಂದು (ಸೋಮವಾರ) ನಡೆದ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪನವರ ಎದುರೇ ಧ್ವನಿ ಎತ್ತಿದ್ದಾರೆ.

ಯಾವುದಕ್ಕೂ ಡೋಂಟ್ ಕೇರ್: ಸಿಎಂ ಸಭೆಯಲ್ಲೂ ಸಿಡಿದೆದ್ದ ಯತ್ನಾಳ್

ಯತ್ನಾಳ್ ಮಾತು
ನಾನು ಶಾಸಕ, ನಾನು ನಿಮ್ಮ ಬಳಿ ಮಾತನಾಡಬೇಕು. ನಾನು ನಿಮ್ಮ ಮಗನ ಬಳಿ ಯಾಕೆ ಮಾತಾಡಬೇಕೆಂದು ಯತ್ನಾಳ್​ ಪ್ರಶ್ನೆ ಹಾಕಿದರು. ಎಲ್ಲದಕ್ಕೂ ಮಗನ ಮಾತೇ ಅಂತಿಮ ಮಾಡುವುದಾದರೆ, ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಪಾಡೇನು? ಎಂದು ಪ್ರಶ್ನಿಸಿದರು. ಈ ವೇಳೆ ಸಿಎಂ, ಯತ್ನಾಳ್‌ಗೆ ನಿಧಾನಕ್ಕೆ ಮಾತಾಡು ಎಂದರು.

ಬಳಿಕ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಮಧ್ಯೆ ಪ್ರವೇಶಿಸಿ, ಏಕವಚನದಲ್ಲೇ ಯತ್ನಾಳ್‌ರನ್ನು ತರಾಟೆಗೆ ತೆಗೆದುಕೊಂಡು ಸಿಎಂ ಬೆಂಬಲಕ್ಕೆ ನಿಂತರು.  

ವಿಜಯೇಂದ್ರ ನಿನಗೆ ಏನ್ ಮಾಡಿದ್ದಾರೆ? ನಿನ್ನ ಕ್ಷೇತ್ರಕ್ಕೆ ಏನು ಅನುದಾನ ಕಡಿಮೆ ಮಾಡಿದ್ದಾರೆ ಹೇಳು? ಕೆಲವು ಸಚಿವರು ಮಾಡುವ ತಪ್ಪಿಗೆ ನೀ ಮುಖ್ಯಮಂತ್ರಿಗಳ ಮೇಲೆ ಕೂಗಾಡ್ತಿಯಾ ಎಂದು ರೇಣುಕಾಚಾರ್ಯ, ಯತ್ನಾಳ್‌ ಮೇಲೆ ರೇಗಾಡಿದರು. ರೇಣುಕಾಚಾರ್ಯ ಕೂಡ ಕೂಗಾಟ ಶುರು ಮಾಡ್ತಿದಂತೆ ಯತ್ನಾಳ್ ಸೈಲೆಂಟ್ ಆಗ್ಬಿಟ್ಟರು.

ಒಟ್ಟಿನಲ್ಲಿ ಇಂದಿನ ಸಿಎಂ ಸಭೆಯಲ್ಲಿ ಶಾಸಕಾರದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ  ರೇಣುಕಾಚಾರ್ಯ  ನಡುವೆ ಭರ್ಜರಿ ಜಟಾಪಟಿ ನಡೆದಿದೆ.

click me!