
ಉಡುಪಿ (ಜ.29): ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ, ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ, ಅವರಿಗೆ ಅಭಿವೃದ್ಧಿ ಮತ್ತು ಬಡವರ ಚಿಂತನೆ ಬೇಕಾಗಿಲ್ಲ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ, ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರೇ. ನಾವು ಪ್ರತಿದಿನ ಎದ್ದು ದೇವರಿಗೆ ನಮಸ್ಕಾರ ಮಾಡಿಯೇ ಮನೆಯಿಂದ ಹೊರಡೋದು, ನಾನು ಕಿಷ್ಕಿಂದ ಇರುವ ಜಿಲ್ಲೆಯಲ್ಲಿರುವವನು, ನಾನು ಪ್ರತಿ ವರ್ಷ ಆಂಜನೇಯ ಮಾಲೆ ಹಾಕುತ್ತೇನೆ, ಆದರೆ ಭಕ್ತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಮಾಲೆ ಹಾಕುತ್ತೇನೆ. ಆದರೆ ಚುನಾವಣೆ ಬಂದಾಗ ಮಾತ್ರ ಬಿಜೆಪಿಗೆ ಧರ್ಮ, ಮಸೀದಿ, ಪಾಕಿಸ್ತಾನ ನೆನಪಾಗುತ್ತದೆ ಎಂದವರು ಬಿಜೆಪಿಗೆ ತಿರುಗೇಟು ನೀಡಿದರು.
ಸಂಸದರಿಂದ ಪ್ರಯತ್ನ ಇಲ್ಲ: ಕನ್ನಡಕ್ಕೆ ಶಾಸ್ತ್ರೀಯ ಮಾನ್ಯತೆ ಸಿಕ್ಕಿದೆ. ಇದರಿಂದ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಬರಬೇಕಾಗಿತ್ತು. ಬೇರೆ ರಾಜ್ಯಗಳಿಗೆ ಇಂತಹ ಅನುದಾನ ಸಿಕ್ಕಿದೆ. ಆದರೆ ನಮ್ಮ ರಾಜ್ಯದ ಸಂಸದರು ಈ ಅನುದಾನ ನೀಡುವಂತೆ ಮೋದಿ ಅವರಿಗೆ ಒಂದು ಪತ್ರ ಬರೆದಿಲ್ಲ, ಯಾವುದೇ ಪ್ರಯತ್ನವನ್ನೂ ಮಾಡಿಲ್ಲ ಎಂದವರು ಆರೋಪಿಸಿದರು. ಮೋದಿ ಅವರನ್ನು ಕಂಡರೆ ನಮ್ಮ ರಾಜ್ಯದ ಸಂಸದರಿಗೆ ಹೆದರಿಕೆಯಾಗುತ್ತದೆ, ಇನ್ನು ಅನುದಾನ ಕೇಳೋದು ಎಲ್ಲಿಂದ ಬಂತು ಎಂದು ಲೇವಡಿ ಮಾಡಿದ ಸಚಿವರು, ನಮ್ಮ ಸಂಸದರು ಕೇವಲ ಮಾಧ್ಯಮದ ಮುಂದೆ ಮಾತನಾಡುತ್ತಾರೆ. ಆದ್ದರಿಂದ ಈ ತಿಂಗಳ ಅಂತಕ್ಕೆ ನಾನು ದೆಹಲಿಗೆ ಹೋಗುತಿದ್ದೇನೆ ಎಂದರು.
ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದ್ದರಿಂದ ಕಾಂಗ್ರೆಸ್ ಶುದ್ಧವಾಯ್ತು: ಸಚಿವ ಎಂ.ಬಿ.ಪಾಟೀಲ್
ಅನುದಾನ ಕೊರತೆ ಇಲ್ಲ: ಕನ್ನಡ ಸಂಸ್ಕೃತಿ ಇಲಾಖೆಯ ಅನುದಾನದಲ್ಲಿ ಜಿಲ್ಲಾವಾರು ತಾರತಮ್ಯವಾಗುತ್ತಿರುವ ಬಗ್ಗೆ ನನಗೆ ಮಾಹತಿ ಇಲ್ಲ, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ನಾವು ಪಕ್ಷವನ್ನು ನೋಡಿಕೊಂಡು ಅನುದಾನ ಹಂಚಿಕೆ ಮಾಡುತ್ತಿಲ್ಲ, ಆ ರೀತಿ ಮಾಡುವುದು ಬಿಜೆಪಿ ಮಾತ್ರ ಎಂದರು. ಜಿಲ್ಲೆಯಿಂದ ಇಲಾಖೆಯ ಕಾರ್ಯಕ್ರಮಗಳಿಗೆ ಪ್ರಸ್ತಾಪ ಬಂದರೆ ಹಣ ನೀಡುತ್ತೇವೆ. ಈ ಬಾರಿ ಕನ್ನಡ ಸಂಸ್ಕೃತಿ ಇಲಾಖೆಗೆ 40- 50 ಕೋಟಿ ರು. ಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ, ನಮ್ಮಲ್ಲಿ ಅನುದಾನದ ಕೊರತೆ ಇಲ್ಲ, ಬಿಜೆಪಿಗೆ ಮಾತ್ರ ಕೊರತೆ ಕಾಣುತ್ತದೆ ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.