ಬೆಂಗಳೂರು (ಜು.15): ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಆಗಮಿಸಿ ಮತ್ತೆ ಚುನಾಯಿತರಾದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಕಂಡು ಬರುತ್ತಿದೆ.
ಸದ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಒಂದು ಸ್ಥಾನ ಖಾಲಿಯಿದೆ. ಒಂದು ವೇಳೆ ಪಕ್ಷದ ವರಿಷ್ಠರು ಸಂಪುಟ ಪುನಾರಚನೆಗೆ ಹಸಿರು ನಿಶಾನೆ ತೋರಿದರೆ ಕೆಲವರನ್ನು ಕೈಬಿಟ್ಟು ಇನ್ನೊಂದಿಷ್ಟುಹೊಸಬರಿಗೆ ಅವಕಾಶ ಕಲ್ಪಿಸುವ ಇರಾದೆ ಯಡಿಯೂರಪ್ಪ ಅವರಿಗಿದೆ. ಪುನಾರಚನೆಗೆ ಅನುಮತಿ ನೀಡದಿದ್ದರೆ ಖಾಲಿ ಇರುವ ಒಂದು ಸ್ಥಾನವನ್ನು ಮುನಿರತ್ನ ಅವರಿಗೆ ನೀಡುವ ಮೂಲಕ ಹಿಂದೆ ತಾವು ನೀಡಿದ್ದ ಮಾತನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
'ಮುನಿರತ್ನ ಸಚಿವರಾಗೋದು ನಿಶ್ಚಿತ, ಜಾರಕಿಹೊಳಿಗೆ ಅನುಕೂಲ'
ಮುನಿರತ್ನ ಮತ್ತು ಎಚ್.ವಿಶ್ವನಾಥ್ ಹೊರತುಪಡಿಸಿ ಅನ್ಯ ಪಕ್ಷದಿಂದ ವಲಸೆ ಬಂದವರೆಲ್ಲರೂ ಸಚಿವ ಸ್ಥಾನ ಅಲಂಕರಿಸಿದ್ದಾರೆ. ತಾಂತ್ರಿಕ ಕಾರಣಕ್ಕಾಗಿ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಹೀಗಾಗಿ, ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಒಲವು ಹೊಂದಿದ್ದಾರೆ ಎನ್ನಲಾಗಿದೆ.