
ಬೆಂಗಳೂರು(ಜ.23): ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕರು ಬುಧವಾರ ರಾತ್ರಿ ಪ್ರತ್ಯೇಕವಾಗಿ ಸಭೆ ನಡೆಸಿದ್ದು ಕುತೂಹಲ ಮೂಡಿಸಿದೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿಗಳಾದ ಆರ್.ಅಶೋಕ್, ಡಾ.ಸಿ. ಎನ್.ಅಶ್ವತ್ಥನಾರಾಯಣ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಅವರು ಸದಾನಂದಗೌಡರ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು.
ಕಳೆದ ಬಾರಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ನಾಯಕರಲ್ಲಿ ಅಸಮಾಧಾನ ಹೊಗೆ ಯಾಡಿತ್ತು. ಹೀಗಾಗಿ, ಈ ಬಾರಿ ಅಂಥ ಬಿಕ್ಕಟ್ಟು ಉದ್ಭವಿಸಬಾರದು ಎಂಬ ಉದ್ದೇಶದಿಂದ ಹಿರಿಯ ನಾಯಕರು ಈಗ ಸಭೆ ಸೇರಿ ಸಮಾಲೋಚಿಸಿದರು ಎನ್ನಲಾಗಿದೆ.
ಕಾಂಗ್ರೆಸ್ ಗಾಂಧೀಜಿಯನ್ನು ಕಬ್ಜಾ ಮಾಡಲು ಹೊರಟಿದೆ: ಸದಾನಂದಗೌಡ
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ನೇಮಕಕ್ಕೆ ಪಕ್ಷದಲ್ಲಿ ಸಂಘಟನಾ ಪರ್ವ ಹಾಗೂ ಚುನಾವಣಾ ಪರ್ವ ನಡೆಯುತ್ತಿವೆ. ಅವೆರಡನ್ನು ಸಮನ್ವಯಗೊಳಿಸಿ ಮೊದಲ ಹಂತದಲ್ಲಿ ಆಗುವ ಪ್ರಕ್ರಿಯೆ ಬಗ್ಗೆ ಜಿಲ್ಲಾ ನಾಯಕರ ಜೊತೆ ಸಹಮತದ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ನಾವು ಸಭೆ ನಡೆಸಿದೆವು ಎಂದು ಹೇಳಿದರು.
ಮಂಡಲ ಹಾಗೂ ಜಿಲ್ಲಾಮಟ್ಟದ ಅಧ್ಯಕ್ಷರ ನೇಮಕ ಕುರಿತು ಈಗಾಗಲೇ ಜಿಲ್ಲಾ ಮಟ್ಟದ ನಾಯಕರೊಂದಿಗೆ ಭೇಟಿ ಮಾಡಿ ಒಂದು ಹಂತದ ಚರ್ಚೆ ಮಾಡಿ ಬಂದಿದ್ದಾರೆ. ಅದರ ಮುಂದುವರೆದ ಭಾಗವಾಗಿ ನಾವು ಎಲ್ಲ ಜಿಲ್ಲಾ ನಾಯಕರ ಜೊತೆ ಚರ್ಚೆ ಮಾಡುವ ಸಲುವಾಗಿ ನಾವು ಸೇರಿದ್ದೆವು ಎಂದು ತಿಳಿಸಿದರು.
ಇನ್ನೊಂದು ರಾಜ್ಯದಲ್ಲಿ ಬಿಜೆಪಿಯನ್ನು ಶಕ್ತಿಯುತವಾ ಶಕ್ತಿಯುತವಾಗಿ ಕಟ್ಟಲು ನಾವು ಬದ್ಧರಾಗಿರುವವರು, ನಾವು ಬಿಜೆಪಿ ಪರವಾಗಿರುವವರು, ಬಿಜೆಪಿಯನ್ನ ಶಕ್ತಿಯುತವಾಗಿ ಕಟ್ಟುವ ಸಲುವಾಗಿ ಒಗ್ಗಟ್ಟಿನಿಂದ ಸಾಗುತ್ತೇವೆ. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು. ಕೋರ್ ಕಮಿಟಿಯಲ್ಲಿ ಯಾರಿಗೂ ಯಾರೂ ವಾರ್ನಿಂಗ್ ಮಾಡಿಲ್ಲ, ಹಲವು ವಿಚಾರಗಳು ಸೌಹರ್ದಯುತವಾಗಿ ಚರ್ಚೆ ಆಗಿದೆ. ಎಲ್ಲವನ್ನು ಬಗೆಹರಿಸಲಾಗುವುದು ಎಂದರು.
ಸದಾನಂದಗೌಡ ಮಾತನಾಡಿ, ರಾಷ್ಟ್ರೀಯ ಮುಖಂಡರಾದ ಆಗರ್ವಾಲ್, ರಾಧಾ ಕೃಷ್ಣ ಸುಧಾಕರ್ ರೆಡ್ಡಿ ಅವರು ಮಂಗಳವಾರ ಕೋರ್ ಕಮಿಟಿ ಸಭೆ ನಡೆಸಿ ಬೆಂಗಳೂರಿನ ಮೂರು ಸಂಘಟನಾತ್ಮಕ ಜಿಲ್ಲೆಗೆ ಅಧ್ಯಕ್ಷರನ್ನು ನೇಮಿಸಲು ಪ್ರತ್ಯೇಕ ಸಭೆ ನಡೆಸಿ ಎಲ್ಲರೂ ಸಹಮತದಿಂದ ಹೆಸರುಗಳನ್ನು ಅಂತಿಮಗೊಳಿಸಿ ಎಂದು ಸೂಚಿಸಿದ್ದರು. ಆದ್ದರಿಂದ ಚರ್ಚೆ ನಡೆಸಿದ್ದು ಗುರುವಾರ ವರಿಷ್ಠರಿಗೆ ವರದಿ ಕಳುಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಅಶೋಕ್ ಮಾತನಾಡಿ, ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಒಮ್ಮತದಿಂದ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಬೇಕು ಎಂದು ರಾಜ್ಯ ಉಸ್ತುವಾರಿಗಳು ಸೂಚನೆ ನೀಡಿ ಎರಡು ದಿನದಲ್ಲಿ ಪಟ್ಟಿ ನೀಡುವಂತೆ ಹೇಳಿದ್ದರು. ಆದ್ದರಿಂದ ಚರ್ಚೆ ನಡೆಸಿದೆವು ಎಂದರು.
ಬಿಜೆಪಿ ನಾಯಕರ ಬಣ ಜಗಳ ತೀವ್ರ, ದಿಲ್ಲಿ ಕರೆ ಬಂದಿತ್ತು ಒಬ್ನೇ ಬರೋಲ್ಲ ಅಂದೆ: ಯತ್ನಾಳ್
ಜಿಲ್ಲಾ, ಮಂಡಲ ಅಧ್ಯಕ್ಷರ ನೇಮಕ: ರವಿ ಆಕ್ಷೇಪ, ಬಿವೈವಿ ಸಮಜಾಯಿಷಿ
ಬೆಂಗಳೂರು: ಮಂಗಳವಾರ ನಡೆದ ಬಿಜೆಪಿ ಕೋರ್ಕಮಿಟಿ ಸಭೆಯಲ್ಲಿ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ಈ ವೇಳೆ ಉಸ್ತು ವಾರಿ ರಾಧಾ ಮೋಹನ್ ಅಗರವಾಲ್ ಮಧ್ಯೆ ಪ್ರವೇಶಿಸಲು ಯತ್ನಿಸಿದರು. ಅದಕ್ಕೆ ತಮ್ಮ ಮಾತು ಮುಂದು ವರೆಸಿದ ರವಿ, ನೀವು ಅಪರೂಪಕ್ಕೆ ರಾಜ್ಯಕ್ಕೆ ಬರುತ್ತೀರಿ. ಆಗಾಗ ಬಂದು ಸಭೆ ಮಾಡುತ್ತೀರಿ. ಇಲ್ಲಿಯ ವಸ್ತುಸ್ಥಿತಿ ನಿಮಗೆ ಗೊತ್ತಿದೆಯೇ ಪ್ರಶ್ನಿಸಿದರು ಎಂದು ತಿಳಿದು ಬಂದಿದೆ. ಇದಕ್ಕೆ ಸಭೆಯಲ್ಲೇ ಸಮಜಾಯಿಷಿ ನೀಡಿದ ವಿಜಯೇಂದ್ರ, ಹಿಂದಿನದನ್ನು ಬಿಟ್ಟುಬಿಡಿ. ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತೇನೆ ಎಂಬ ಭರವಸೆ ನೀಡಿದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.