ಟಿಕೆಟ್‌ಗಾಗಿ ಭಾರೀ ಲಾಬಿ : ಬಿಎಸ್‌ವೈ ಭೇಟಿಯಾದ ರಮೇಶ್

By Kannadaprabha NewsFirst Published Sep 30, 2021, 8:13 AM IST
Highlights
  • ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರೀ ಲಾಬಿ
  • ಸ್ಥಳೀಯ ನಾಯಕ ರಮೇಶ್‌   ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ

ಬೆಂಗಳೂರು (ಸೆ.30):  ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ (Sindagi constituency) ಉಪಚುನಾವಣೆ ಘೋಷಣೆ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ (BJP) ಟಿಕೆಟ್‌ಗಾಗಿ ಭಾರೀ ಲಾಬಿ ಶುರುವಾಗಿದ್ದು, ಸ್ಥಳೀಯ ನಾಯಕ ರಮೇಶ್‌ ಭೂಸನೂರ್‌ (Ramesh Balappa Bhusanur) ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಕಾವೇರಿ ನಿವಾಸದಲ್ಲಿ ಬುಧವಾರ ಯಡಿಯೂರಪ್ಪ ಅವರನ್ನು ಭೇಟಿಯಾದ ರಮೇಶ್‌ ಭೂಸನೂರ್‌ ತಮಗೆ ಟಿಕೆಟ್‌ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಸಿಂದಗಿ ಕ್ಷೇತ್ರದಿಂದ ಸ್ಪರ್ಧಿಸಲು ವರಿಷ್ಠರ ಮೇಲೆ ಒತ್ತಡ ಹಾಕಿ ತಮಗೆ ಟಿಕೆಟ್‌ ಕೊಡಿಸಬೇಕು ಎಂದಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ದೊಡ್ಡ ಸವಾಲಾಗಿದ್ದು, ಐವರು ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಪ್ರಮುಖ ಮುಖಂಡರ ಮನವೊಲಿಕೆಯ ಪ್ರಯತ್ನ ಆರಂಭವಾಗಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರನ್ನು ರಮೇಶ್‌ ಭೂಸನೂರ್‌ ಭೇಟಿಯಾಗಿದ್ದಾರೆ ಎನ್ನಲಾಗಿದೆ.

ಸಿಂದಗಿಯಲ್ಲಿ ವಲಸೆ ರಾಜಕಾರಣ: ಬಿಜೆಪಿ ಸೇರಲಿರುವ ಜೆಡಿಎಸ್ ನಾಯಕ

ಸಿಂದಗಿ ಕ್ಷೇತ್ರದಿಂದ ಕಣಕ್ಕಿಳಿಯಲು ಮಾಜಿ ಶಾಸಕ, ಗಾಣಿಕ ಸಮುದಾಯದ ರಮೇಶ್‌ ಭೂಸನೂರ ಸೇರಿದಂತೆ ಶಿವಾನಂದ ಪಾಟೀಲ ಸೋಮಜಾಳ, ಅಶೋಕ ಅಲ್ಲಾಪುರ, ಶಂಭು ಕಕ್ಕಳಮೇಲಿ, ಡಾ. ಗೌತಮ್‌ ಚೌಧರಿ ಪ್ರಮುಖ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಈ ಐವರಲ್ಲಿ ಯಾರಿಗೆ ಟಿಕೆಟ್‌ ಅಂತಿಮಗೊಳಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ನಾವು ಸ್ಪರ್ಧೆ ಮಾಡಲ್ಲ

ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ವಿಧಾನ ಸಭೆ ಉಪಚುನಾವಣೆಯಲ್ಲಿ (Assembly Election) ನಾನಾಗಲಿ ಅಥವಾ ನನ್ನ ಮಗನಾಗಲಿ ಸ್ಪರ್ಧಿಸುವುದಿಲ್ಲ. ಸ್ಪರ್ಧೆ ಮಾಡುತ್ತಾರೆಂಬುದು ಸತ್ಯಕ್ಕೆ ದೂರವಾದ ಮಾತು. ಆ ಕ್ಷೇತ್ರದ ಚುನಾವಣೆ ಉಸ್ತುವಾರಿಯನ್ನು ನನಗೆ ವಹಿಸಲಾಗಿದ್ದು, ಅಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನನ್ನ ಗುರಿ ಎಂದು ಮಾಜಿ ಡಿಸಿಎಂ, ವಿಧಾನ ಪರಿಷತ ಸದಸ್ಯ ಲಕ್ಷ್ಮಣ ಸಂಗಪ್ಪ ಸವದಿ (Laxman Savadi) ಹೇಳಿದರು.

ತಾಲೂಕಿನ ಝಂಜುರವಾಡ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಸಾಲ ವಿತರಣೆ ಸಮಾರಂಭದ ನಂತರ  ಮಾತನಾಡಿದರು.

ಬಿಜೆಪಿಗೆ ಬರಲು ಹಣದ ಆಮಿಷ: ಶಾಸಕರ ಬಳಿಯೇ ಕೇಳ್ತೇನೆ ಎಂದ ಲಕ್ಷ್ಮಣ ಸವದಿ

ಸಿಂದಗಿ ಕ್ಷೇತ್ರಕ್ಕೆ ತೆರಳಿ ಅಲ್ಲಿರುವ ಮುಖಂಡರು, ಸ್ಥಳೀಯ ನಾಯಕರು, ಸಮುದಾಯದ ಮುಖಂಡರನ್ನು ಜತೆ ಸಭೆ ನಡೆಸುತ್ತೇನೆ. ಅಭ್ಯರ್ಥಿ ಯಾರೆಂಬುವುದನ್ನು ಇನ್ನೂ ಘೋಷಣೆ ಮಾಡಿಲ್ಲ. ಸ್ಥಳೀಯರ ಭಾವನೆ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

click me!