ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಂದೂಡಿಕೆ

By Santosh NaikFirst Published Jan 9, 2023, 4:25 PM IST
Highlights

ಸಿದ್ಧರಾಮಯ್ಯ ಅವರ ಕುರಿತಾಗಿ ಬಿಜೆಪಿ ಬಿಡುಗಡೆ ಮಾಡಲು ಉದ್ದೇಶಿಸಿದ್ದ ಸಿದ್ದು ನಿಜ ಕನಸುಗಳು ಪುಸ್ತಕಕ್ಕೆ ಸಿಟಿ ಸಿವಿಲ್‌ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದರ ಬೆನ್ನಲ್ಲಿಯೇ ಈ ಪುಸ್ತಕ ಬಿಡುಗಡೆಯನ್ನು ಮುಂದೂಡಿಕೆ ಮಾಡಿರುವುದಾಗಿ ಆಯೋಜಕರು ಘೋಷಿಸಿದ್ದಾರೆ.

ಬೆಂಗಳೂರು (ಜ.9): ಸಿದ್ಧರಾಮಯ್ಯ ಅವರ ಕುರಿತಾಗಿ ಬಿಜೆಪಿ ಬಿಡುಗಡೆ ಮಾಡಲು ನಿರ್ಧಾರ ಮಾಡಿದ್ದ ಸಿದ್ದು ನಿಜ ಕನಸುಗಳು ಪುಸ್ತಕಕ್ಕೆ ಸಿಟಿ ಸಿವಿಲ್‌ ಕೋರ್ಟ್‌ ತಡೆಯಾಜ್ಞೆ ನೀಡಿದ ಬೆನ್ನಲ್ಲಿಯೇ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡಿರುವುದಾಗಿ ಆಯೋಜಕರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿಯೂ ತಿಳಿಸಿದ್ದಾರೆ. ಸೋಮವಾರ ನಾಲ್ಕು ಗಂಟೆಗೆ ಪುರಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ರಾಜ್ಯದ ವಿವಿಧೆಡೆಯಲ್ಲಿ ಪ್ರತಿಭಟನೆಗಳು ಜೋರಾಗಿದ್ದವು. ಈ ನಡುವೆ ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ಧರಾಮಯ್ಯ ಪುಸ್ತಕ ಬಿಡುಗಡೆಗೆ ತಡೆ ಕೋರಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್‌ 2.30ರ ಸುಮಾರಿಗೆ ಪುಸ್ತಕ ಬಿಡಗಡೆ, ಮಾರಾಟ ಹಾಗೂ ಮಾಧ್ಯಮ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. "ಸಿದ್ದು ನಿಜಕನಸುಗಳು" ಎಂಬ ಪುಸ್ತಕದ ಮೂಲಕ ಹಲವು ಸೂಕ್ಷ್ಮ ವಿಷಯಗಳನ್ನು ಬಹಿರಂಗಪಡಿಸುವ ಜತೆ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಿ ಕೊಡುವ ಪ್ರಯತ್ನವನ್ನು ಶ್ಲಾಘಿಸುತ್ತೇನೆ. ಈ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ನೀವೂ ಬನ್ನಿ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿಎನ್‌ ಅಶ್ವಥ್‌ ನಾರಾಯಣ್‌ ಭಾನುವಾರ ಸಂಜೆಯ ವೇಳೆಗೆ ಆಹ್ವಾನ ಪತ್ರಿಕೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಸಿದ್ದು ನಿಜಕನಸುಗಳು ಸಂಪುಟ-1ರ ಲೋಕಾರ್ಪಣೆ ಹಾಗೂ ಅಧ್ಯಕ್ಷತೆಯನ್ನು ಅಶ್ವಥ್‌ ನಾರಾಯಣ ಮಾಡಲಿದ್ದಾರೆ ಎಂದು ಪ್ರಕಟಿಸಲಾಗಿತ್ತು. ಮುಖ್ಯ ಅತಿಥಿಯಾಗಿ ವಿಧಾನಪರಿಷತ್‌ ಸದಸ್ಯ ಹಾಗೂ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹಾಜರಿರಬೇಕಾಗಿತ್ತು. ಅದರೊಂದಿಗೆ ಚಿಂತಕ, ಬರಹಗಾರ ರೋಹಿತ್‌ ಚಕ್ರತೀರ್ಥ, ಪ್ರತ್ರಕರ್ತ ಸಂತೋಷ್‌ ತಮ್ಮಯ್ಯ, ವಿಕ್ರಮ ಹಾಗೂ ಸಂವಾದದ ಸಂಪಾದಕ ವೃಷಾಂಕ್‌ ಭಟ್‌ ಹಾಗೂ ಬರಹಗಾರ, ಸಾಮಾಜಿಕ ಕಾರ್ಯಕರ್ತ ರಾಕೇಶ್‌ ಶೆಟ್ಟಿ ಸಮಾರಂಭದಲ್ಲಿ ಇರುವುದು ಖಚಿತವಾಗಿತ್ತು.

ಆಹ್ವಾನ ಪತ್ರಿಕೆಯ ಅನುಸಾರ ಹೇಳುವುದಾದರೆ, ವಿಕೆಪಿ ಎನ್ನುವ ಅನಾಮಧೇಯ ವ್ಯಕ್ತಿ ಈ ವಿವಾದಾತ್ಮಕ ಪುಸ್ತಕವನ್ನು ಬರೆದಿದ್ದಾರೆ. ಇದು ಮೊದಲ ಸಂಪುಟವಾಗಿದ್ದು, ಇನ್ನೂ ಹಲವು ಸಂಪುಟಗಳಲ್ಲಿ ಸಿದ್ದು ಅವರ ನಿಜಕನಸುಗಳನ್ನು ಬಿತ್ತರ ಮಾಡಲಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿತ್ತು.

ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೆ ಕೋರ್ಟ್‌ ತಡೆಯಾಜ್ಞೆ

ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವ ದುರುದ್ದೇಶದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜ.9ರಂದು ಮಧ್ಯಾಹ್ನ 3 ಗಂಟೆಗೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಪುರಭವನದಲ್ಲಿ ಈ ಕಾರ್ಯಕ್ರಮ ಇರುವ ಬಗ್ಗೆ ಆಹ್ವಾನ ಪತ್ರಿಕೆ ಹರಿದಾಡುತ್ತಿದೆ ಸಿದ್ದರಾಮಯ್ಯ ಅವರ ವಿರೂಪಗೊಳಿಸಿದ ಭಾವಚಿತ್ರವನ್ನು ಬಳಸಿ ‘ಸಿದ್ದು ನಿಜಕನಸುಗಳು’ ಎಂಬ ಶೀರ್ಷಿಕೆಯಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪತ್ರಿಕೆಯಲ್ಲಿನ ಪುಸ್ತಕದ ಮುಖಪುಟ ವಿಪಕ್ಷ ನಾಯಕರ ಅವಹೇಳನಕಾರಿ, ಕಪೋಲಕಲ್ಪಿತ, ಪ್ರಚೋದನಕಾರಿ ಲೇಖನಗಳನ್ನು ಒಳಗೊಂಡಿರುವುದು ಸ್ಪಷ್ಟವಾಗಿದೆ. ಇಂತಹ ದ್ವೇ‍ಷಪೂರಿತ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು”  ಎಂದು ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದಲ್ಲದೆ, ಈ ಪುಸ್ತಕದ ಮೂಲಕ ಸಿದ್ಧರಾಮಯ್ಯನವರ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ಮಾಡಲು ಒಂದು ಸಮುದಾಯವನ್ನು ತುಚ್ಛೀಕರಣ ಮಾಡಲು ರಚಿಸಲಾಗಿದೆ ಎಂದು ಆರೋಪ ಮಾಡಿದ್ದರು.

Karnataka Assembly election: ಕೋಲಾರದಿಂದಲೇ ಸ್ಪರ್ಧಿಸುತ್ತೇನೆ: ಸಿದ್ದರಾಮಯ್ಯ ಅಧಿಕೃತ ಘೋಷಣೆ

ರಾಜ್ಯ ಕುರುಬರ ಸಂಘ ಸೇರಿದಂತೆ ಸಿದ್ಧರಾಮಯ್ಯ ಅವರ ಅಪಾರ ಅಭಿಮಾನಿಗಳು ಪುಸ್ತಕ ಬಿಡುಗಡೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ ನಡುವೆಯೇ, ಕೋರ್ಟ್‌ ಪುಸ್ತಕ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

click me!