
ಬೆಂಗಳೂರು (ಅ.14): ‘ಬಿಜೆಪಿಯವರದ್ದು ಜನಸಂಕಲ್ಪ ಯಾತ್ರೆಯಲ್ಲ, ಸುಳ್ಳು ಹೇಳುವ ಸಂಕಲ್ಪದ ಯಾತ್ರೆ. ನನ್ನ ಅವಧಿಯ ಸರ್ಕಾರದ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿಯವರು ತಾಕತ್ತಿದ್ದರೆ ಅಂಕಿ-ಅಂಶಗಳ ಸಹಿತ ಚರ್ಚೆಗೆ ಬರಲಿ. ಉತ್ತರ ಕುಮಾರರಂತೆ, ವಿದೂಷಕರಂತೆ ವರ್ತಿಸುವುದು ಬೇಡ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ. ಜನಸಂಕಲ್ಪ ಯಾತ್ರೆ ಹೆಸರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಸುಳ್ಳುಗಳನ್ನು ಮುಂದುವರೆಸಿದರೆ ಚುನಾವಣೆ ವೇಳೆ ಮಾರಿ ಹಬ್ಬ ಮಾಡಲು ಜನ ಕಾಯುತ್ತಿದ್ದಾರೆ ಎಂದೂ ಎಚ್ಚರಿಸಿದ್ದಾರೆ.
ಗುಲಾಮಗಿರಿ ಯೋಗ್ಯತೆ ಬಿಎಸ್ವೈಗೆ ಇರಲಿ: ‘ಸಿದ್ದರಾಮಯ್ಯನವರಿಗೆ ಮೋದಿಯವರ ಕಾಲಿನಡಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅಂತಹ ಗುಲಾಮಗಿರಿಯ ಯೋಗ್ಯತೆ ಯಡಿಯೂರಪ್ಪ ಅಂಥವರಿಗೇ ಇರಲಿ, ನನ್ನಂಥವರಿಗೆ ಅದು ಹೊಂದಾಣಿಕೆಯಾಗುವುದಿಲ್ಲ. ನಮ್ಮ ಪಕ್ಷದಲ್ಲಿ ಕಾಲ ಕೆಳಗೆ ಕುಳಿತುಕೊಳ್ಳುವ ಸಂಸ್ಕೃತಿ ಇಲ್ಲ. ನಾವು ಭುಜಕ್ಕೆ ಭುಜ ತಾಗಿಸಿ ನಡೆವ ಡೆಮಾಕ್ರಟಿಕ್ ಸಂಸ್ಕೃತಿಯವರು’ ಎಂದು ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.
ಮೋದಿ ವಿಶ್ವ ಗುರು ಅಲ್ಲ ಪುಕ್ಕಲು ಗುರು: ಸಿದ್ದರಾಮಯ್ಯ
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿಯವರು ಅವರ ಯಾತ್ರೆಗಳಲ್ಲಿ ನನ್ನನ್ನು ಗುರಿಯಾಗಿಸಿಕೊಂಡು ಸುಳ್ಳುಗಳನ್ನು ಹೇಳಿದ್ದಾರೆ. ನೀವು ಏನು ಮಾತನಾಡುವುದಿದ್ದರೂ ಅಂಕಿ-ಅಂಶಗಳ ಸಹಿತ ಚರ್ಚೆಗೆ ಬನ್ನಿ. ಅದನ್ನು ಬಿಟ್ಟು ನಿಮ್ಮ ಸ್ಥಾನದ ಘನತೆಗಳನ್ನು ನಿರ್ಲಕ್ಷಿಸಿ ಮಾತನಾಡುತ್ತಾ ಹೋದರೆ ರಾಜ್ಯದ ಜನ ಬಿಜೆಪಿಯವರನ್ನು ವಿದೂಷಕರು ಎನ್ನುತ್ತಾರೆ ಎಂದು ಟೀಕಿಸಿದರು.
ಶಿಶುಪಾಲನೂ ಕೃಷ್ಣನನ್ನು ‘ಬಚ್ಚಾ’ ಎಂದು ನಿರ್ನಾಮವಾದ: ‘ರಾಹುಲ್ ಗಾಂಧಿಯಂತಹ ಸಣ್ಣ ಹುಡುಗ ಕುಳಿತುಕೋ ಎಂದರೆ ಕುಳಿತುಕೊಳ್ಳುತ್ತೀರಿ. ಇದು ಸ್ವಾಭಿಮಾನದ ಸಂಕೇತವೇ’ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ಯಡಿಯೂರಪ್ಪನವರೇ, ‘ತುಸು ಮಹಾಭಾರತವನ್ನು ನೆನಪಿಸಿಕೊಳ್ಳಿ. ಪಾಂಡವರ ರಾಜಸೂಯಯಾಗದ ಸಂದರ್ಭದಲ್ಲಿ ಮಹಾಕ್ಷತ್ರಿಯ ಭೀಷ್ಮಾಚಾರ್ಯ ಮತ್ತು ಮಹಾಬ್ರಾಹ್ಮಣ ದ್ರೋಣಾಚಾರ್ಯ ಎಂಬ ಅತಿರಥ ಮಹಾರಥರಿದ್ದರೂ ಸಣ್ಣ ವಯಸ್ಸಿನ ಹುಡುಗ ಕೃಷ್ಣನಿಗೆ ಅಗ್ರ ಪೂಜೆ ಸಲ್ಲಬೇಕೆಂದು ಸೂಚಿಸಿ ಅದನ್ನು ಕಾರ್ಯಗತಗೊಳಿಸುತ್ತಾರೆ. ಆಗಲೂ ಶಿಶುಪಾಲನಂಥವರು ಸುಳ್ಳು ಕ್ಯಾತೆ ತೆಗೆದು ಒಂದೆ ಸಮ ನಿಂದಿಸಿ ನಿರ್ನಾಮವಾದ. ಆಗಲೂ ಶಿಶುಪಾಲ ನಮ್ಮ ಪಶುಪಾಲಕರ ನಾಯಕ ಕೃಷ್ಣನನ್ನು ತುಸು ಹೆಚ್ಚೂ ಕಡಿಮೆ ಬಚ್ಚಾ, ಹುಡುಗ ಎಂದು ಟೀಕಿಸಿದ್ದ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಶ್ರೀರಾಮುಲುಗೆ ಭಯ ಇದೆ: ಹಿಂದೆ ಸಿದ್ದರಾಮಯ್ಯ ಅವರು ಪಾದಯಾತ್ರೆ ಮಾಡಿ ಅಲ್ಲಿನ ಅದಿರು ಲೂಟಿ ನಿಲ್ಲಿಸಿದ್ದೆವು. ಈಗ ಮತ್ತೆ ಏನು ಮಾಡುತ್ತಾರೋ ಎಂಬ ಭಯ ಶ್ರೀರಾಮುಲುಗೆ ಕಾಡಿದೆ. ಹಾಗಾಗಿ ರಾಹುಲ್ ಗಾಂಧಿಗೆ ಬಳ್ಳಾರಿ ಏಕೆ ನೆನಪಾಯಿತು ಎಂದು ಪ್ರಶ್ನಿಸಿದ್ದಾರೆ ಎಂದರು. ತನಿಖೆನೂ ಮಾಡ್ತೀವಿ ಅದರಪ್ಪನ್ನೂ ಮಾಡ್ತೀವಿ ಎಂದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಅದು ಅವರ ಬಾಯಿಂದ ಬಂದದ್ದು ಅಲ್ಲ. ನಾಗಪುರದಿಂದ ಹೇಳಿದ್ದನ್ನ ಸಿಎಂ ಬೊಮ್ಮಾಯಿ ಹೇಳ್ತಾರೆ. ಇಂತಹ ಭಾಷೆ ಬಳಸದಿದ್ದರೆ ಅವರು ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ. ಬೊಮ್ಮಾಯಿ ಸಮಾಜವಾದದಿಂದ ಕೋಮುವಾದಕ್ಕೆ ಮತಾಂತರವಾಗಿದ್ದಾರೆದು ಹರಿಪ್ರಸಾದ್ ಹೇಳಿದರು.
ದಲಿತ ಕುಟುಂಬಕ್ಕೆ ಹಿಂಸೆ: ನಿಷ್ಷಕ್ಷಪಾತ ತನಿಖೆಗೆ ಸಿದ್ದು ಆಗ್ರಹ
ಬಿಎಸ್ವೈ ಯಾರಿಗೆ ಬುದ್ಧಿ ಹೇಳ್ತಾರೆ: ರಾಹುಲ್ ಬಚ್ಚಾ ಎಂಬ ಬಿಎಸ್ವೈ ಹೇಳಿಕೆಗೆ ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದು, ಜೈಲಿಗೆ ಹೋಗಿದ್ದವರು ರಾಹುಲ್ಗೆ ಬಚ್ಚಾ ಎಂದು ಹೇಳುವ ಯೋಗ್ಯತೆ ಇದೆಯಾ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಆಡಳಿತದಲ್ಲಿ 24 ಹಿಂದೂಗಳ ಹತ್ಯೆ ಎಂದ ಬಿಜೆಪಿ ನಾಯಕರ ಹೇಳಿಕೆಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನ ಸಮಾನ ಪ್ರಮಾಣದಲ್ಲಿ ಸಾವಿಗೀಡಾಗಿದ್ದಾರೆ. ಯಾವ ಪ್ರಕರಣದಲ್ಲೂ ಓರ್ವ ಕಾಂಗ್ರೆಸ್ಸಿಗರ ಹೆಸರಿಲ್ಲ. ಒಬ್ಬರ ಹೆಸರಿದ್ದರೂ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ. ಬಿಜೆಪಿ ಮತ್ತು ಎಸ್ಡಿಪಿಐ ಎರಡೂ ಕೊಲೆಗಡುಕ ಪಕ್ಷಗಳು ಎಂದು ರಮಾನಾಥ ರೈ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.