ಆಣೆ ಮಾಡು ಎನ್ನೋಕೆ ಅವನು ಯಾವೂರ ದಾಸಯ್ಯ?: ಸಿದ್ದು ವಿರುದ್ಧ ಎಚ್‌ಡಿಕೆ ಕಿಡಿ

By Govindaraj SFirst Published Apr 21, 2022, 3:20 AM IST
Highlights

‘ನನ್ನನ್ನು ದೇವೇಗೌಡರ ಮೇಲೆ ಆಣೆ ಮಾಡಿ ಹೇಳು ಎನ್ನೋಕೆ ಅವನು ಯಾವೂರ ದಾಸಯ್ಯ? ​-ಇದು ಬಿಜೆಪಿ ಜತೆ ಕೈ ಜೋಡಿಸಲ್ಲಾ ಎಂದು ಎಚ್‌.ಡಿ.ದೇವೇಗೌಡರ ಮೇಲೆ ಆಣೆ ಮಾಡಲಿ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ ಪರಿ.

ಹಾಸನ/ಚಾಮರಾಜನಗರ (ಏ.21): ‘ನನ್ನನ್ನು ದೇವೇಗೌಡರ (HD Devegowda) ಮೇಲೆ ಆಣೆ ಮಾಡಿ ಹೇಳು ಎನ್ನೋಕೆ ಅವನು ಯಾವೂರ ದಾಸಯ್ಯ? ​-ಇದು ಬಿಜೆಪಿ (BJP) ಜತೆ ಕೈ ಜೋಡಿಸಲ್ಲಾ ಎಂದು ಎಚ್‌.ಡಿ.ದೇವೇಗೌಡರ ಮೇಲೆ ಆಣೆ ಮಾಡಲಿ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ (Hd Kumaraswamy) ವಾಗ್ದಾಳಿ ನಡೆಸಿದ ಪರಿ. ಮಾತಿನುದ್ದಕ್ಕೂ ಸಿದ್ದರಾಮಯ್ಯ ಅಲ್ಲ, ಸುಳ್ಳಿನ ರಾಮಯ್ಯ ಎಂದು ಏಕವಚನದಲ್ಲಿ ಹರಿಹಾಯ್ದರು. ನಾನು ಕೇಳಿರುವ 4 ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರ ಕೊಡಲಿ. 

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮೇಲೆ ಆಣೆ ಮಾಡು ಎಂದು ಮಾತನಾಡಲು ಸಿದ್ದರಾಮಯ್ಯ ಯಾವುರ ದಾಸಯ್ಯ? ಜೆಡಿಎಸ್‌ ಪಕ್ಷದ ಬಗ್ಗೆ ಪದೇ ಪದೇ ಬಿಜೆಪಿ ಬಿ ಟೀಂ ಎಂದು ಅಪಪ್ರಚಾರ ಮಾಡಿ ರಾಜ್ಯದಲ್ಲಿ ಬಿಜೆಪಿ ಅ​ಧಿಕಾರಕ್ಕೆ ಬರಲು ಕಾರಣರಾದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಯೊಗ್ಯತೆಗೆ 50-60 ಸ್ಥಾನಗಳನ್ನು ಮಾತ್ರ ಜಯಗಳಿಲು ಮೀಸಲು ಎಂದು ಭವಿಷ್ಯ ನುಡಿದರು. 2008ರಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ. 

Karnataka Politics: ಪರ್ಸಂಟೇಜ್‌ ವ್ಯವಹಾರದ ಪಿತಾಮಹ ಸಿದ್ದರಾಮಯ್ಯ: ಕುಮಾರಸ್ವಾಮಿ

ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ಬಳಿ ಹಣ ಪಡೆದು, ಅಪರೇಷನ್‌ ಕಮಲ ನಡೆಸಲು ಬೆಂಬಲ ನೀಡಿ, ಆಪರೇಷನ್‌ ಕಮಲದಿಂದ ಬಂದು ಚುನಾವಣೆ ಎದುರಿಸದವರಿಗೆ ಒಳಗಿಂದೊಳಗೆ ಹಿಂಬದಿಯಲ್ಲಿ ಸಿದ್ದರಾಮಯ್ಯ ಬೆಂಬಲ ನೀಡಿದರು ಎಂದರು. ಸಿದ್ದರಾಮಯ್ಯನ ದುರಾಡಳಿತದ ಕಾರಣ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್‌ ಆತ್ಮಹತ್ಯೆ ಮಾಡಿಕೊಂಡರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ದರಾಮಯ್ಯ ಆಡಳಿತ ಕಾರಣ. ಅದನ್ನು ಬಿಟ್ಟು ಇಂದು ಬರಿ ಸಂತೊಷ್‌ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾರೆ.

ಅನ್ನ ತಿಂದ ಮನೆಗೆ ಕನ್ನ ಹಾಕ್ತಾರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನ ತಿಂದ ಮನೆಗೆ ಕನ್ನ ಹಾಕುವ ವ್ಯಕ್ತಿ ಸಿದ್ದರಾಮಯ್ಯ. ಜೆಡಿಎಸ್‌ ಕಾರ್ಯಕರ್ತರ ಶ್ರಮದಿಂದ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರ ಅನುಭವಿಸಿ ಪಕ್ಷ ಬಿಟ್ಟು ಹೋದರು.ಈಗ ನನ್ನ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಮೊನ್ನೆ ಯಾವುದೋ ಸಮಾವೇಶದಲ್ಲಿ ಕಾಂಗ್ರೆಸ್‌ ಪಕ್ಷ ಕಿತ್ತು ಹಾಕಬೇಕು ಎಂದು ಕರೆ ಕೊಟ್ಟಿದ್ದಾರೆ. ಅಂದರೆ ಅವರ ಹೃದಯದಲ್ಲಿ ಕಾಂಗ್ರೆಸ್‌ ಬಗ್ಗೆ ಇರುವ ಭಾವನೆ ಎಂಥಾದ್ದು ಎನ್ನುವುದು ನಿಮಗೆ ತಿಳಿಯುತ್ತದೆ. ಬೆಳಿಗ್ಗೆ ಎದ್ದರೆ ಬಿಜೆಪಿ ಬಿ ಟಿಂ ಎಂದು ಅಪಪ್ರಚಾರ ಮಾಡುತ್ತಾರೆ. ರಾಜ್ಯದಲ್ಲಿ ವಿವಾದ ಸೃಷ್ಟಿಮಾಡಿದ್ದ ಹಿಜಾಬ್‌ ವಿಷಯದಲ್ಲಿ ಕಾಂಗ್ರೆಸ್‌ ಪ್ರತಿಕ್ರಿಯೆ ನೀಡದೇ ಮಲಗಿತ್ತು. ಅಂಥಾ ಸಂದರ್ಭದಲ್ಲಿ ನಾನು ಬಂದು ಮಾತನಾಡಿದ್ದೆ ಎಂದು ಹೇಳಿದರು.

ಸಿದ್ದರಾಮಯ್ಯ ಹ್ಯೂಬ್ಲೆಟ್ ವಾಚ್ ಕೇಸ್, ರಾಜಕಾರಣದಲ್ಲಿ ಹಳೆ ಪ್ರಕರಣಕ್ಕೆ ಮತ್ತೆ ಜೀವ

ಬಿಜೆಪಿ ಜತೆ ಸೇರಲ್ಲವೆಂದು ತಂದೆ ಮೇಲೆ ಎಚ್ಡಿಕೆ ಆಣೆ ಮಾಡಲಿ: ಜೆಡಿಎಸ್‌ ಜ್ಯಾತ್ಯತೀತತೆಗೆ ಬದ್ಧವಾಗಿರುವ ಪಕ್ಷ ಎಂದು ಹೇಳುತ್ತಿರುವ ಎಚ್‌.ಡಿ.ಕುಮಾರಸ್ವಾಮಿ ಅವರೇ, ತಾವು ಬಿಜೆಪಿ ಜತೆ ಎಂದೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಿಮ್ಮ ತಂದೆ ಎಚ್‌.ಡಿ.ದೇವೇಗೌಡರ ಮೇಲೆ ಆಣೆ ಮಾಡಲು ಸಿದ್ಧರಿದ್ದೀರಾ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ನಿತ್ಯ ನನ್ನ ವಿರುದ್ಧ ನಂಜು ಕಾರುತ್ತಿರುವ ಕುಮಾರಸ್ವಾಮಿಯವರೇ ನೀವೆಲ್ಲಿ ನಿಂತಿದ್ದೀರಿ ಎಂಬುದನ್ನು ಮೊದಲು ಹೇಳಿ. ನಿಮ್ಮದು ಜಾತ್ಯತೀತತೆಗೆ ಬದ್ಧವಾಗಿರುವ ಪಕ್ಷ ಎಂದು ಹೇಳುತ್ತಲೇ ಬಂದಿದ್ದೀರಿ. ಹಾಗಿದ್ದರೆ, ಮುಂದಿನ ದಿನಗಳಲ್ಲಿ ನಿಮ್ಮ ಪಕ್ಷ ಬಿಜೆಪಿಯ ಜೊತೆ ಚುನಾವಣಾ ಪೂರ್ವ ಇಲ್ಲವೇ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಲು ಸಿದ್ಧ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ.

click me!