ಬೈ ಎಲೆಕ್ಷನ್: ಅಭ್ಯರ್ಥಿಗಳ ಆಯ್ಕೆಯಲ್ಲಿ ಸಿದ್ದು ಮೇಲುಗೈ, ಡಿಕೆಶಿ ಬರಿಗೈ..!

By Web DeskFirst Published Oct 31, 2019, 9:28 PM IST
Highlights

15 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಅಧಿಕೃತವಾಗಿ ಘೋಷಿಸಿದೆ. ಆದ್ರೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ.ಈ ಮೂಲಕ ಕಾಂಗ್ರೆಸ್ ನಲ್ಲಿ ತಮ್ಮ ಶಕ್ತಿ ಏನು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಬೆಂಗಳೂರು, [ಅ.31]: ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. 15 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಆದ್ರೆ, ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೈ ಮೇಲಾಗಿದ್ದು, ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Breaking: ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಕ್ಷೇತ್ರವಾರು ಜಾತಿ ಸಮೀಕರಣವನ್ನೂ ಮೀರಿ ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ನಲ್ಲಿ ತಮ್ಮ ಪ್ರಭಾವ ಏನು ಎನ್ನುವುದನ್ನು ವಿರೋಧಿಗಳಿಗೆ ತೋರಿಸಿಕೊಟ್ಟಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಜಾತಿ ಸಮೀಕರಣಕ್ಕೆ ಮನ್ನಣೆ ನೀಡುವುದಕ್ಕಿಂತ ಸಿದ್ದರಾಮಯ್ಯ ಮಾತಿಗೆ ಹೆಚ್ಚು ಬೆಲೆ ಕೊಟ್ಟು ಅಭ್ಯರ್ಥಿಗಳನ್ನ ಫೈನಲ್ ಮಾಡಿದಂತಿದೆ. ಹೀಗಾಗಿ, ಅಭ್ಯರ್ಥಿಗಳನ್ನ ಗೆಲ್ಲಿಸುವ ಸವಾಲು ಸಿದ್ದರಾಮಯ್ಯಗೆ ಎದುರಾಗಿದೆ.

ಟಿಪ್ಪು ಬಗ್ಗೆ ಮಾತಾಡಿದ್ದ ಶರತ್ ‘ಕೈ’ ತಪ್ಪಿದ ಹೊಸಕೋಟೆ, ಮುಂದಿನ ಹಾದಿ..?

8ರಲ್ಲಿ 7 ಅಭ್ಯರ್ಥಿಗಳು ಸಿದ್ದರಾಮಯ್ಯನವರ ಆಪ್ತರೇ. ಇವರಲ್ಲಿ ಇಬ್ಬರು ಕುರುಬ ಜನಾಂಗಕ್ಕೆ ಸೇರಿದವರಿಗೆ ಟಿಕೇಟ್ ನೀಡಲಾಗಿದೆ. ಹೊಸಕೋಟೆ ಕ್ಷೇತ್ರದಿಂದ ಭೈರತಿ ಸುರೇಶ್ ಪತ್ನಿ ಪದ್ಮಾವತಿ.  ಮಹಾಲಕ್ಷ್ಮಿ ಲೇಔಟ್​ನಿಂದ ಎಂ. ಶಿವರಾಜು ಅವರಿಗೆ ಟಿಕೆಟ್​ ಸಿಕ್ಕಿದ್ದು,  ಮಾಜಿ ಸಚಿವ ಡಿಕೆಶಿಗೆ ಭಾರೀ ಹಿನ್ನಡೆಯಾಗಿದೆ. 

ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಡಿಕೆಶಿ ಶಿಷ್ಯ ಮಂಜುನಾಥ್​​ಗೆ ಈ ಬಾರಿ ಟಿಕೆಟ್​ ಸಿಕ್ಕಿಲ್ಲ. ಕಳೆದ ಬಾರಿ ಡಿಕೆಶಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಟಿಕೆಟ್ ಕೊಡಿಸಿದ್ದರು. ಆದ್ರೆ, ಮಂಜುನಾಥ್ ಸೋಲು ಕಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಮಂಜುನಾಥ್ ಹೆಸರು ಕಾಂಗ್ರೆಸ್ ಹೈ ಕಮಾಂಡ್​ ಪರಿಗಣಿಸಿಲ್ಲ.

ಡಿಕೆಶಿ ಐಟಿ ಸುಳಿಗೆ ಸಿಲುಕಿದ್ದರಿಂದ ಆಪ್ತ ಮಂಜುನಾಥ್ ಗೆ ಟಿಕೆಟ್ ಕೊಡಿಸುವ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಇದರ ಲಾಭ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ, ಸ್ವಜಾತಿ ಶಿವರಾಜ್ ಗೆ ಟಿಕೆಟ್ ಕೊಡಿಸುವಲ್ಲಿ ಸಕ್ಸಸ್ ಆಗಿದ್ದಾರೆ. 

ಇನ್ನು ಹುಣಸೂರಿನಲ್ಲಿ ರಾಜಕೀಯ ಬದ್ಧ ವೈರಿ ಎಚ್.ವಿಶ್ವನಾಥ್ ಅವರನ್ನು ಮಣಿಸಲು ಸಿದ್ದರಾಮಯ್ಯ ಅವರು ತಮ್ಮ ಶಿಷ್ಯ ಮಂಜುನಾಥ್ ಗೆ ಟಿಕೇಟ್ ಕೊಡಿಸಿದ್ದಾರೆ.

ಒಟ್ಟಿನಲ್ಲಿ ತಮ್ಮ ಆಪ್ತರಿಗೆ ಟಿಕೇಟ್ ಕೊಡಿಸುವಲ್ಲಿ ಸಿದ್ದರಾಮಯ್ಯವೇನೋ ಯಶಸ್ವಿಯಾಗಿದ್ದಾರೆ. ಆದ್ರೆ ಆಪ್ತರನ್ನು ಗೆಲ್ಲಿಸಿಕೊಂಡುಬರುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

click me!