ಗಂಟೆ ಹೊಡೆದು ಪ್ರಮಾಣ ಮಾಡಲು ನಾನು ಸಿದ್ಧ: ಈಶ್ವರಪ್ಪ

By Kannadaprabha NewsFirst Published Mar 31, 2024, 1:48 PM IST
Highlights

ರಾಘವೇಂದ್ರ ಅಥವಾ ಅವರ ಬೆಂಬಲಿಗರು ಸಾಧು ಸಂತರಿಗೆ, ನನ್ನ ಬೆಂಬಲಿಸಿದ ಹೆಣ್ಣುಮಕ್ಕಳಿಗೆ ಕಣ್ಣೀರು ಹಾಕಿಸಿ ನೋವು ಕೊಟ್ಟಿಲ್ಲ ಎಂದು ಪ್ರಮಾಣ ಮಾಡಬೇಕು. ನನ್ನ ಮಗ ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್ ಕೊಡಿಸಿ ಗೆಲ್ಲಿಸುವುದಾಗಿ ಹೇಳಿಲ್ಲ ಎಂದು ಪ್ರಮಾಣ ಮಾಡಲಿ. ಸುಳ್ಳು ಹೇಳಿದ್ದನ್ನು ಒಪ್ಪಿಕೊಳ್ಳಲಿ ಎಂದ ಈಶ್ವರಪ್ಪ 

ಶಿವಮೊಗ್ಗ(ಮಾ.31):  ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಮತ್ತವರ ಬೆಂಬಲಿಗರು ಸ್ವತಂತ್ರ ಅಭ್ಯರ್ಥಿ ಕೆ. ಎಸ್.ಈಶ್ವರಪ್ಪನವರಿಗೆ ಆಶೀರ್ವದಿಸಿದ ಮಠಾಧೀಶರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿ ಆಣೆ ಪ್ರಮಾಣಕ್ಕೆ ಕರೆದ ಬಿ. ವೈ. ರಾಘವೇಂದ್ರ ಸವಾಲಿಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ ನನಗೆ ಇಂತಹದ್ದರಲ್ಲಿ ನಂಬಿಕೆ ಇಲ್ಲದಿದ್ದರೂ ಬೆನ್ನು ತೋರಿಸಿ ಹೋಗಬಾರದು ಎಂಬ ಕಾರಣಕ್ಕೆ ಇದಕ್ಕೆ ನಾನು ಸಿದ್ಧ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನನ್ನ ಜೀವನದಲ್ಲಿ ಇಂತಹ ಆಣೆ ಪ್ರಮಾಣ ಮಾಡಿಲ್ಲ. ಇದರಲ್ಲಿ ನಂಬಿಕೆಯೂ ನನಗಿಲ್ಲ. ಆದರೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಭಾವ ಬರಬಾರದು ಎಂಬ ಕಾರಣಕ್ಕೆ ಅವರ ಆಹ್ವಾನಕ್ಕೆ ನಾನು ಸಿದ್ಧ ಎಂದು ಈಶ್ವರಪ್ಪ ಹೇಳಿದರು. ನನ್ನ ದೈವ ಭಕ್ತಿಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ನನ್ನಷ್ಟು ದೈವ ಭಕ್ತರು ಅವರ್ಯಾರೂ ಇರಲಿಕ್ಕಿಲ್ಲ. ಚಂದ್ರಗುತ್ತಿ ಅಥವಾ ಅಯೋಧ್ಯೆಯೇ ಆಗಲಿ, ನಾನು ಬಂದು ಪ್ರಮಾಣ ಮಾಡಲು, ಗಂಟೆ ಹೊಡೆಯಲು ಸಿದ್ಧ ಎಂದರು.

ಈಶ್ವರಪ್ಪ ಬದಲಾವಣೆಗೆ ಕಾರಣ ನನಗೆ ಅರ್ಥವಾಗುತ್ತಿಲ್ಲ: ಬಿ.ವೈ.ರಾಘವೇಂದ್ರ

ಆದರೆ ರಾಘವೇಂದ್ರ ಅಥವಾ ಅವರ ಬೆಂಬಲಿಗರು ಸಾಧು ಸಂತರಿಗೆ, ನನ್ನ ಬೆಂಬಲಿಸಿದ ಹೆಣ್ಣುಮಕ್ಕಳಿಗೆ ಕಣ್ಣೀರು ಹಾಕಿಸಿ ನೋವು ಕೊಟ್ಟಿಲ್ಲ ಎಂದು ಪ್ರಮಾಣ ಮಾಡಬೇಕು. ನನ್ನ ಮಗ ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್ ಕೊಡಿಸಿ ಗೆಲ್ಲಿಸುವುದಾಗಿ ಹೇಳಿಲ್ಲ ಎಂದು ಪ್ರಮಾಣ ಮಾಡಲಿ. ಸುಳ್ಳು ಹೇಳಿದ್ದನ್ನು ಒಪ್ಪಿಕೊಳ್ಳಲಿ ಎಂದು ಈಶ್ವರಪ್ಪ ಹೇಳಿದರು. ಆದರೆ ಇದನ್ನು ನಾನು ಪದೇ ಪದೇ ಹೇಳುತ್ತಾ ಆಹ್ವಾನ ನೀಡೋದಿಲ್ಲ. ಇಂತಹದ್ದರಲ್ಲಿ ನನಗೆ ಆಸಕ್ತಿಯೂ ಇಲ್ಲ ಎಂದರು.

click me!