
ಉಡುಪಿ (ಅ.11): ಬಿಜೆಪಿಯಲ್ಲಿ ಒಂದು ವಾಶಿಂಗ್ ಮೇಶಿನ್ ಇದೆ, ಭ್ರಷ್ಟರನ್ನೆಲ್ಲಾ ಅದರಲ್ಲಿ ಹಾಕಿ ತಿರುಗಿಸುತ್ತಾರೆ, ಅವರೆಲ್ಲಾ ಕ್ಲೀನ್ ಆಗ್ತಾರೆ, ಈಗಾಗಲೇ 25 ಮಂದಿ ಭ್ರಷ್ಟರನ್ನು ಕ್ಲೀನ್ ಮಾಡಿದ್ದಾರೆ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ. ಅವರು ಉಡುಪಿಯಲ್ಲಿ ಚಿತ್ರದುರ್ಗದ ಶಾಸಕ ಪಪ್ಪಿ, ಲಾಕರ್ನಿಂದ ಇ.ಡಿ. 40 ಕೆಜಿ ಚಿನ್ನ ವಶಪಡಿಸಿಕೊಂಡ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು. ಮಹಾರಾಷ್ಟ್ರದ ಅಜಿತ್ ಪವರ್ ಮೇಲೆ 60 ಸಾವಿರ ಕೋಟಿ ರು. ಅಕ್ರಮ ಆಸ್ತಿಯ ಆರೋಪ ಇತ್ತು, ಅಸ್ಸಾಂನ ಸಿಎಂ ಬಿಸ್ವಾಸ್ ಮೇಲೆಯೂ ಅಕ್ರಮ ಆಸ್ತಿಯ ಆರೋಪ ಇತ್ತು.
ಅವರ ಮೇಲೆ ಆರೋಪ ಹೊರಿಸಿದ್ದು ಕೇಂದ್ರ ಬಿಜೆಪಿ ಸರ್ಕಾರದ ಕೈಯಲ್ಲಿರುವ ಸಂಸ್ಥೆ. ನಂತರ ಇಬ್ಬರು ಕೂಡ ದುಡ್ಡು ಕೊಟ್ಟು ಬಿಜೆಪಿಗೆ ಹೋದರು. ಇಡೀ ಮಹಾರಾಷ್ಟ್ರದ ಚುನಾವಣೆಯ ಬಿಜೆಪಿಯ ಖರ್ಚು ನೋಡಿಕೊಂಡರು. ಹಣ ಕೊಡುತ್ತಾರೋ ಅಂಥವರನ್ನು ಪಾರ್ಟಿಗೆ ಸೇರಿಸುತ್ತಾರೆ. ಅವರ ಬಳಿ ವಾಷಿಂಗ್ ಮೇಶಿನ್ ಇದೆ, ಅದಕ್ಕೆ ಹಾಕಿ ಭ್ರಷ್ಟಾಚಾರಿಗಳನ್ನೆಲ್ಲಾ ಕ್ಲೀನ್ ಮಾಡುತ್ತಾರೆ. ನಂತರ ಅವರೆಲ್ಲಾ ಪ್ರಾಮಾಣಿಕರಾಗುತ್ತಾರೆ, ಈಗಾಗಲೇ 25 ಮಂದಿ ಭ್ರಷ್ಟರನ್ನು ಹೀಗೆ ಕ್ಲೀನ್ ಮಾಡಿದ್ದಾರೆ. ಬಿಜೆಪಿಗೆ ಬಂದ ಮೇಲೆ ಅವರು ಒಂದು ರು. ಕೂಡ ಭ್ರಷ್ಟಾಚಾರ ಮಾಡಿಲ್ಲ ಎಂದವರು ಲೇವಡಿ ಮಾಡಿದರು.
ಪಪ್ಪಿ ಅವರೇನೂ ಬಿಹಾರ ಚುನಾವಣೆಗೆ ದುಡ್ಡು ಕೊಟ್ಟಿಲ್ಲ, ಕೊಡುತ್ತಾರೇ ಇಲ್ಲವೋ, ಆದರೇ ಅವರಿಗೆ ಆ ಶಕ್ತಿ ಇದೆ ಎಂದು ಲಾಡ್ ಹೇಳಿದರು. ಸಿಎಂ ಸಿದ್ದರಾಮಯ್ಯ ಪ್ರತಿವರ್ಷ ಔತಣಕೂಟಕ್ಕೆ ಕರೆಯುತ್ತಾರೆ, ಅಲ್ಲಿ ಪ್ರತಿಯೊಬ್ಬ ಮಂತ್ರಿಯನ್ನು ಕರೆದು ಮಾತನಾಡುತ್ತಾರೆ, ಅದರಲ್ಲೇನೂ ವಿಶೇಷ ಇಲ್ಲ. ಸಂಪುಟ ಪುನರಚನೆ ಸಹಜ ಪ್ರಕ್ರಿಯೆ. ಅವೆರಡಕ್ಕೂ ಸಂಬಂಧ ಇಲ್ಲ ಎಂದವರು ಹೇಳಿದರು. ರಾಜ್ಯದಲ್ಲಿ ಶೇ.78ರಷ್ಟು ಗಣತಿ ಪೂರ್ಣಗೊಂಡಿದೆ. ಅದು ಪೂರ್ಣವಾದ ಮೇಲೆ ವರದಿ ಬಹಳ ಚೆನ್ನಾಗಿರುತ್ತದೆ. ಗಣತಿಮೂಲಕ ಸಿದ್ದರಾಮಯ್ಯ ಸಮಾಜ ಒಡೆಯುತ್ತಿದ್ದಾರೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಹಾಗಿದ್ದರೇ ಕೇಂದ್ರ ಸರ್ಕಾರವೇ ಗಣತಿ ಮಾಡಿಸುವುದಕ್ಕೆ ಯಾಕೆ ಹೊರಟಿದೆ ಎಂದವರು ಪ್ರಶ್ನಿಸಿದರು.
ಬಿಗ್ ಬಾಸ್ ಪುನಃ ಆರಂಭಿರುವ ಬಗ್ಗೆ, ಯಾರಿಗೂ ತೊಂದರೆ ಅಗಬೇಕು ಎಂದು ನಿಲ್ಲಿಸಿಲ್ಲ. ಪರಿಸರಕ್ಕೆ ತೊಂದರೆ ಆಗ್ತಿದೆ ಅಂಥ ದೂರು ಬಂದಿತ್ತು, ಅದಕ್ಕೆ ನಿಲ್ಲಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೋಗಿ ಮುಂದಾಳತ್ವ ವಹಿಸಿ ಸಮಜಾಯಿಸಿ ಮಾಡಿದ್ದಾರೆ ಎಂದರು. ಡಿ.ಕೆ.ಶಿವಕುಮಾರ್, ಸಿನಿಮಾದವರ ನಟ್ ಬೋಲ್ಟ್ ಟೈಟ್ ಮಾಡುತ್ತೇನೆ ಎಂದು ಹೇಳಿದ್ದು ಅದು ಹಳೆಯ ಡೈಲಾಗ್, ಅದಕ್ಕೆ ಬಿಗ್ಬಾಸ್ ಮನೆಗೆ ಬೀಗ ಹಾಕಿದ್ದಕ್ಕೆ ಸಂಬಂಧ ಇಲ್ಲ ಎಂದು ಹೇಳಿದರು. ಹೆಣ್ಣು ಮಕ್ಕಳಿಗೆ ತಿಂಗಳಿಗೊಂದು ದಿನ ಮುಟ್ಟಿನ ರಜೆ ನೀಡಿರುವುದು ರಾಜ್ಯ ಸರ್ಕಾರದ ಪ್ರಗತಿಪರ ನಿರ್ಧಾರವಾಗಿದೆ. ಪರ ವಿರೋಧ ಇದ್ದೇ ಇರುತ್ತದೆ. ಆದರೆ ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತದಂತೆ ಬಡ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.
ಮುಟ್ಟಿನ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಸೈಕಲ್ ಯಾತ್ರೆ ಮಾಡುತ್ತಿದ್ದ ಒರಿಸ್ಸಾದ ರಂಜಿತಾ ಪ್ರಿಯದರ್ಶಿನಿ ಅವರು ನನ್ನನ್ನು ಭೇಟಿಯಾಗಿದ್ದರು. ಅವರೇ ತಿಂಗಳಲ್ಲಿ ಒಂದು ದಿನ ರಜೆಯ ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ನಾವು ತಜ್ಞರ ಸಮಿತಿ ಮಾಡಿ ಅಭಿಪ್ರಾಯ ಪಡೆದು ಅದನ್ನೀಗ ಜಾರಿಗೆ ತಂದಿದ್ದೇವೆ. ಇದರಿಂದ ಮುಟ್ಟಿನ ಸಮಸ್ಯೆಯಿಂದ ಬಳಲುವ ಗಾರ್ಮೆಂಟ್ ಇಂಡಸ್ಟ್ರಿ, ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದು ಸಚಿವ ಲಾಡ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.