
ಗದಗ(ಫೆ.22): ರೋಣ ಮತಕ್ಷೇತ್ರ ನಾಲ್ವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಒಂದೇ ವೇದಿಕೆ ಮೇಲೆ 'ಅಣ್ತಮ್ಮ' ನಂತೆ ಕೂತಿದ್ದು ಗದಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗಜೇಂದ್ರಗಡ ತಾಲೂಕಿನ ಇಟಗಿಯಲ್ಲಿ 'ಧರ್ಮದೇವತೆ' ಸಿನಿಮಾ ರಜತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೋಣ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿರುವ 'ಧರ್ಮ ದೇವತೆ' ಚಿತ್ರದ ನಿರ್ಮಾಪಕ ರವೀಂದ್ರ ದಂಡೀನ್ ಕಾರ್ಯಕ್ರಮ ಆಯೋಜಿಸಿದ್ರು
ವೇದಿಕೆ ಮೇಲೆ ಪ್ರಸನ್ನಾನಂದ ಪುರಿ ಸ್ವಾಮೀಜಿ ಸೇರಿದಂತೆ ಹಲವರು ಉಪಸ್ಥಿತರಿದ್ರು. ಕಾರ್ಯಕ್ರಮ ಆರಂಭವಾಗಿ ಕೆಲ ಹೊತ್ತಿನಲ್ಲೇ ರೋಣ ಬಿಜೆಪಿ ಮುಖಂಡರಾದ ಸಿದ್ದಪ್ಪ ಬಂಡಿ, ಮುಂಡರಗಿ ತಾಲೂಕು ಘಟಕದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಅಂದಪ್ಪ ಸಂಕನೂರು ಆಗಮಿಸಿದ್ರು. ಈ ಮೂವರು ಬಿಜೆಪಿ ಟಿಕೆಟ್ ಗಾಗಿ ಭರ್ಜರಿ ಪೈಪೋಟಿ ನಡೆಸಿದವ್ರೆ ಅನ್ನೋದು ವಿಶೇಷ. ಇವ್ರೆಲ್ಲ ಒಟ್ಟಿಗೆ ಕೂತಿದ್ರಲ್ದೆ, ಆತ್ಮೀಯತೆಯಿಂದ ಮಾತ್ನಾಡ್ತಿದ್ರು. ರೋಣ ಕ್ಷೇತ್ರದಲ್ಲಿ ಬಿಜೆಪಿ ಒಗ್ಗಟ್ಟಾಗಿದೆ ಅನ್ನೋದನ್ನ ಸಾರೋದಕ್ಕೆ ಬಂದಿದ್ದೇವೆ ಅನ್ನೋದು ನಾಲ್ವರ ಮಾತಾಗಿತ್ತು.
ಬಿಜೆಪಿ ರೋಣ ಶಾಸಕ ಕಳಕಪ್ಪ ಬಂಡಿ ವಿರುದ್ಧ ಶಕ್ತಿ ಪ್ರದರ್ಶನ.?
ರೋಣ ಶಾಸಕ ಕಳಕಪ್ಪ ಬಂಡಿ ಅವರಿಂದ ಅಂತರ ಕಾಯ್ದುಕೊಂಡಿರುವ ಶಾಸಕರ ಸಹೋದರ ಸಿದ್ದಪ್ಪ ಬಂಡಿ ಸೇರಿದಂತೆ ನಾಲ್ವರು ಒಂದೇ ವೇದಿಕೆ ಮೇಲೆ ಸೇರಿದ್ರು. ಅಂದಪ್ಪ ಸಂಕನೂರ ಬೆಂಬಲಿಗರು ಶಾಸಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬಹಿರಂಗ ಪತ್ರ ನೀಡಿದ್ದು ಇಲ್ಲಿ ಸ್ಮರಿಸ್ಬಹುದು. ಹೀಗಾಗಿ ಶಾಸಕರ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಇಳಿದ್ರಾ..? ಶಾಸಕರನ್ನೂ ಹೊರತಾಗಿ ನಮ್ಮಲ್ಲಿ ಯಾರಿಗಾದ್ರೂ ಟಿಕೆಟ್ ನೀಡಿ ಅನ್ನೋ ಒಗ್ಗಟ್ಟು ಪ್ರದರ್ಶಿಸಿದ್ರಾ ಅನ್ನೋ ಚರ್ಚೆಯೂ ಶುರುವಾಗಿದೆ. ತಮ್ಮ ಶಕ್ತಿ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಓಡಾಡ್ಕೊಂಡಿದ್ದ ನಾಲ್ವರು ಒಂದೇ ಕಡೆಸೇರಿದ್ದು ಹೊಸ ರಾಜಕೀಯ ಚರ್ಚೆಗೆ ನಾಂದಿಯಾಗಿದೆ.
ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್
ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಮಾತ್ನಾಡಿದ ಮುಂಡರಗಿ ತಾಲೂಕು ಘಟಕದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ರವೀಂದ್ರನಾಥ್ ದಂಡೀನ ಅವರು ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ರು. ಹೀಗಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದೇವೆ. ನಾವೆಲ್ಲರೂ ಒಂದಾಗಿದ್ದೇವೆ. ಪಕ್ಷ ಯಾರಿಗೆ ಟಿಕೆಟ್ ಘೋಷಣೆ ಮಾಡುತ್ತದೋ ಅವರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಅಂತಾ ಹೇಳಿದ್ರು. ಸಿದ್ದಪ್ಪ ಬಂಡಿ ಅವರು ಅಂದಪ್ಪ ಸಂಕನೂರು ಅವರೂ ಅದೇ ಮಾತನ್ನ ಹೇಳಿದ್ರು.
ರೋಣದಲ್ಲಿ ಒಟ್ಟಾಗಿ ಕಾಂಗ್ರೆಸ್ ಪ್ರಬಲ ಎದುರಾಳಿ ಜಿಎಸ್ ಪಾಟೀಲರನ್ನ ಎದುರಿಸಲು ಬಿಜೆಪಿ ಸಜ್ಜು ಆದಂತಿದೆ. ಮುಂದೆ ಈ ಒಗ್ಗಟ್ಟು ಪಕ್ಷಕ್ಕೆ ಯಾವೆಲ್ಲ ಲಾಭ ಕೊಡುತ್ತೆ ಅನ್ನೋದನ್ನ ಕಾದು ನೋಡ್ಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.