
ನವದೆಹಲಿ (ಅ.14): ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬವು ಬೆಂಗಳೂರಿನಲ್ಲಿ ಹಂಚಿಕೆ ಮಾಡಲಾಗಿದ್ದ ಭೂಮಿಯನ್ನು ಸರ್ಕಾರಕ್ಕೆ ಮರಳಿಸುವ ನಿರ್ಣಯ ಕೈಗೊಂಡಿದ್ದನ್ನು ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದಾರೆ. ಭಾನುವಾರ ಟ್ವೀಟ್ ಮಾಡಿರುವ ಅವರು, ‘ಖರ್ಗೆ ಸಾಹೇಬರು 11 ಬಾರಿ ಚುನಾಯಿತರಾಗಿದ್ದಾರೆ. ಇದು ಅವರ ಕುಟುಂಬಕ್ಕೆ ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸುವ ಹಕ್ಕನ್ನು ನೀಡುತ್ತದೆ ಹಾಗೂ ಇದು ಕಾಂಗ್ರೆಸ್ ಪಕ್ಷದ ಕೆಲವು ರಾಜವಂಶಗಳಿಗೆ ಸರಿ ಎಂದು ತೋರುತ್ತದೆ. ನಾವು ಇದನ್ನು ಹರ್ಯಾಣದಲ್ಲಿಯೂ ನೋಡಿದ್ದೇವೆ. ಆದರೆ ಈ ದೇಶದ ಜನರು ರಾಜಕೀಯ ಕುಟುಂಬಗಳು ಭೂಮಿಯನ್ನು ಕಬಳಿಸುವುದು ಒಂದು ಅಪರಾಧ ಎಂದು ನೋಡುತ್ತಾರೆ’ ಎಂದು ಕಿಡಿಕಾರಿದ್ದಾರೆ.
‘ಇಂದು 5 ಎಕರೆ ಭೂಮಿಯನ್ನು ಹಸ್ತಾಂತರಿಸಿದ್ದೀರಿ. ಇದಕ್ಕೂ ಮುನ್ನ ನಿಮ್ಮ ವಿರುದ್ಧದ ಭೂಕಬಳಿಕೆ ಆರೋಪವನ್ನು‘ಆಧಾರ ರಹಿತ’ ಎಂದು ಹೇಳಿದ್ದಿರಿ. ಆದರೆ ಇಂದು ಭೂಮಿ ಹಸ್ತಾಂತರಿಸುವ ಮೂಲಕ ನಿಮ್ಮ ಹೇಳಿಕೆ ಸರಿಯಾಗಿಲ್ಲ. ಆರೋಪ ನಿಜ ಎಂಬುದನ್ನು ನಿರೂಪಿಸಿದ್ದೀರಿ’ ಎಂದು ರಾಜೀವ್ ಚಾಟಿ ಬೀಸಿದ್ದಾರೆ. ಇನ್ನು ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಚಾಟಿ ಬೀಸಿರುವ ರಾಜೀವ್, ‘ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿಯನ್ನು ಉಗ್ರರ ಪಕ್ಷ ಎಂದಿದ್ದರು. ಅದಕ್ಕೆ ನೀವು ಪ್ರತಿಕ್ರಿಯಿಸಿಲ್ಲ’ ಎಂದೂ ಕುಟುಕಿದ್ದಾರೆ.
ವಿಜಯದಶಮಿ ದಿನವೇ ಕೇಂದ್ರದ ವಿರುದ್ಧ ಸಿದ್ದರಾಮಯ್ಯ ತೆರಿಗೆ ಸಮರ ಕರೆ
ಖರ್ಗೆ ವಿರುದ್ಧ ರಾಜೀವ್, ಬಿಜೆಪಿ ನಾಯಕರ ಕಿಡಿ: ಬಿಜೆಪಿ ಉಗ್ರರ ಪಕ್ಷ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ನಾಯಕರಾದ ರಾಜೀವ್ ಚಂದ್ರಶೇಖರ್ ಹಾಗೂ ಸುಧಾಂಶು ತ್ರಿವೇದಿ ಕಿಡಿಕಾರಿದ್ದಾರೆ. ಟ್ವೀಟ್ ಮಾಡಿರುವ ರಾಜೀವ್ ಚಂದ್ರಶೇಖರ್, ‘ಖರ್ಗೆ ಅವರು ತಮ್ಮ ಕುಟುಂಬಕ್ಕೆ ಸರ್ಕಾರಿ ಭೂಮಿಯನ್ನು ಉಡುಗೊರೆಯಾಗಿ ನೀಡಿದವರು. ಇಂಥವರು 26/11 ಉಗ್ರ ದಾಳಿಯನ್ನು ಪಾಕ್ ಉಗ್ರರಿಂದ ದೂರವಿಡಲು ಅವರ ಪಕ್ಷ ಯಾವ ರೀತಿ ಪ್ರಯತ್ನಿಸಿತು ಎಂಬುದನ್ನು ಮತ್ತು ಅವರ ಇಟಾಲಿಯನ್ ಮುಖ್ಯಸ್ಥೆ ಬಾಟ್ಲಾ ಹೌಸ್ನಲ್ಲಿ ಉಗ್ರರು ಕೊಲ್ಲಲ್ಪಟ್ಟಾಗ ಯಾವ ರೀತಿ ಅತ್ತರು ಎಂಬುದನ್ನು ನೆನಪಿಸಿಕೊಳ್ಳಬೇಕು’ ಎಂದು ಚಾಟಿ ಬೀಸಿದ್ದಾರೆ. ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಮಾತನಾಡಿ, ‘ಉಗ್ರರನ್ನು ಯಾವತ್ತೂ ಬೆಂಬಲಿಸಿದ ಕಾಂಗ್ರೆಸ್ ಪಕ್ಷ ಈಗ ನಮ್ಮ ಮೇಲೆ ಆರೋಪ ಮಾಡುತ್ತಿದೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.