
ಬಾಗಲಕೋಟೆ (ಮಾ.22): ದಿ. ಎಚ್.ವೈ. ಮೇಟಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಅವರು ನಡೆದು ಬಂದ ದಾರಿ, ಕಾರ್ಯಕರ್ತರಿಗೆ ಕೊಡುತ್ತಿದ್ದ ಗೌರವದಿಂದಾಗಿ ಕಾಂಗ್ರೆಸ್ ಗೆಲುವು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಗೆ ಮುಳುಗಡೆಯಾಗುವ ಭೂಮಿಗೆ ಪರಿಹಾರದ ಮೊತ್ತ ಹೆಚ್ಚಿಸಿರುವುದು ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರವಾಗಿದೆ. ಈಗ ಪರಿಹಾರ ಮೊತ್ತ ವಿತರಣೆಯನ್ನೂ ಆರಂಭಿಸಲಾಗಿದೆ ಎಂದರು.
ಟಿಕೆಟ್ ಗೆ ಸಂಬಂಸಿದಂತೆ ನಮ್ಮ ಪಕ್ಷದಲ್ಲಿ ಯಾವುದೇ ಕಗ್ಗಂಟು ಇಲ್ಲ. ಮೇಟಿ ಅವರ ಕುಟುಂಬದ ಸದಸ್ಯರೆಲ್ಲ ಒಗ್ಗಟ್ಟಾಗಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಳಂಬದಿಂದಾಗಿ ಬಾಗಲಕೋಟೆ ಕ್ಷೇತ್ರದ್ದಕ್ಕೂ ವಿಳಂಬವಾಗಿದೆ. ಯಾವುದೇ ಕ್ಷಣದಲ್ಲಿ ಹೆಸರು ಘೋಷಣೆಯಾಗಲಿದೆ. ಈ ಕುರಿತು ಪಕ್ಷದ ಮುಖಂಡರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ಚುನಾವಣೆಯಲ್ಲಿ ಅವರು (ಬಿಜೆಪಿ) ಮುಂದಿದ್ದಾರೆ. ನಾವು (ಕಾಂಗ್ರೆಸ್) ಹಿಂದಿದ್ದೇವೆ ಎಂಬುದಿಲ್ಲ. ಅವರ ಅಭ್ಯರ್ಥಿ ಘೋಷಣೆಯಾಗಿರುವುದರಿಂದ ಪ್ರಚಾರ ಮಾಡುತ್ತಿದ್ದಾರೆ. ನಾವೂ ಇಂದು ಸಭೆ ಕರೆದಿದ್ದೇವೆ. ಪ್ರಚಾರವನ್ನೂ ಆರಂಭಿಸುತ್ತೇವೆ ಎಂದರು.
ಬಿಜೆಪಿಯವರಿಗೆ ಒಳಮೀಸಲಾತಿ ನೆನಪಾಗಿದೆ. ಅಧಿಕಾರದಲ್ಲಿದ್ದಾಗ ಏನು ಮಾಡಿದರು? ಸೆಡ್ಯೂಲ್ 9 ರಲ್ಲಿ ಸೇರಿಸಿದರಾ? ಜನರಲ್ಲಿ ಸುಮ್ಮನೆ ಗೊಂದಲ ಹುಟ್ಟುಹಾಕುತ್ತಾರೆ. ಸುಳ್ಳು ಹೇಳಿಕೊಂಡೇ ತಿರುಗಾಡುತ್ತಾರೆ ಎಂದು ಟೀಕಿಸಿದರು. ಗ್ಯಾರಂಟಿ ಕೊಟ್ಟಿದ್ದು ತಪ್ಪು ಎಂದು ಅವರು ಘಂಟಾಘೋಷವಾಗಿ ಹೇಳಲಿ. ಒಳಗೊಳಗೆ ಹೇಳುವುದಲ್ಲ. ಬಡವರ ಹೊಟ್ಟೆಗೆ ಅನ್ನ, ಬೆಳಕು ಕೊಟ್ಟಿದ್ದು ತಪ್ಪು ಎಂದು ಹೇಳಿ ಜನತೆ ಮುಂದೆ ಬಿಜೆಪಿಯವರು ಹೋಗಲಿ. ಆಗ ಜನತೆ ಏನು ಹೇಳುತ್ತಾರೆ ಎಂದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಸುಳ್ಳು ಹೇಳುತ್ತಾರೆ ಎಂದು ಚಿತ್ರುದುರ್ಗದ ಸಂಸದರು ಟೀಕಿಸಿದ್ದಾರೆ. 2013ರ ಪಾದಯಾತ್ರೆ ಬಗ್ಗೆ ಹೇಳುತ್ತಾರೆ. ಆನಂತರ ಇವರು ಅಧಿಕಾರಕ್ಕೆ ಬಂದಿದ್ದರಲ್ಲ ಏನು ಮಾಡಿದರು. ನೀರಾವರಿ ಸಚಿವರಾಗಿದ್ದಾಗ ಯುಕೆಪಿ ಯೋಜನೆ ನೆನಪಾಗಲಿಲ್ಲವೇ? ಮುಖ್ಯಮಂತ್ರಿ ಬಗ್ಗೆ ಮಾತನಾಡಲು ಇವರಿಗೇನು ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಭ್ಯರ್ಥಿ ಮಾ.23ರಂದು ಮಧ್ಯಾಹ್ನ 12.30 ರಿಂದ 2.30ರೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟದ ಸಚಿವರು ಭಾಗವಹಿಸಲಿದ್ದಾರೆ. ಪಕ್ಷದ ಗೆಲುವಿಗೆ ಯಾವುದೇ ತೊಂದರೆ ಇಲ್ಲ. ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ಎಂದರು.
ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರೊಬ್ಬರು ಇಲ್ಲಿ ಗ್ರಾಮೀಣ ಮತ್ತು ನಗರ ಬೇರೆ ಬೇರೆ ಎಂದು ತಾರತಮ್ಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಈ ಬಗ್ಗೆ ಕೂಗಾಟ ಮಾಡಲು ಆರಂಭಿಸಿದ್ದರಿಂದ ಅವರನ್ನು ಹೊರಗೆ ಕಳುಹಿಸಲಾಯಿತು. ಪಕ್ಷದಲ್ಲಿ ಮಹಿಳೆಯರಿಗೆ ಸ್ಥಾನಮಾನಕ್ಕೆ ಸಂಬಂಸಿದಂತೆ ಮಹಿಳಾ ಕಾರ್ಯಕರ್ತರು ಅಸಮಧಾನ ಹೊರಹಾಕಿದರು. ನಮಗೆ ಸೂಕ್ತ ಸ್ಥಾನಮಾನ ನೀಡುವುದಿಲ್ಲ. ಮತ್ತೆ ಸಭೆಗೆ ಏಕೆ ಕರೆಯುತ್ತೀರಿ? ನಾವು ಸರ್ಕಾರದ ಗ್ಯಾರಂಟಿ ಬಗ್ಗೆ ಹೇಳಿ ಜನರನ್ನು ಕರೆದುಕೊಂಡು ಬರುತ್ತೇವೆ. ಗ್ಯಾರಂಟಿ ಬಗ್ಗೆ ಯಾಕೆ ಮಾತನಾಡುತ್ತೀರಿ ಎಂದು ಕಾರ್ಯಕರ್ತರೊಬ್ಬರು ಪ್ರಶ್ನೆ ಮಾಡಿದ್ದಕ್ಕೆ ಮಾತಿಗೆ ಮಾತು ಬೆಳೆಯಲಾರಂಭಿಸಿತು. ಸಚಿವರು ಮಧ್ಯೆ ಪ್ರವೇಶಿಸಿ ಮಾಧ್ಯಮದವರು ಇದ್ದಾರೆ ಎಂದರು. ಪಕ್ಷದ ಮುಖಂಡರು ಸಮಾಧಾನ ಪಡಿಸಿ, ಪರಿಸ್ಥಿತಿ ತಿಳಿಗೊಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.