
ಪಾಲಕ್ಕಾಡ್ (ಮಾ.22) ಕರ್ನಾಟಕದಲ್ಲಿ ಉಪ ಚುನಾವಣೆ ಹಾಗೂ ಪಂಚ ರಾಜ್ಯ ವಿಧಾನಸಭಾ ಚನಾವಣೆ ಕಾವು ಏರಿದೆ. ನಾಯಕರ ವಾಕ್ಸಮರ, ಆರೋಪ ಪ್ರತ್ಯಾರೋಪ ತೀವ್ರಗೊಂಡಿದೆ. ಇದರ ನಡುವೆ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ನಾಯಕರ ಪುತ್ರನ ಮದುವೆಯಲ್ಲಿ ಪಾಲ್ಗೊಂಡು ಫೋಟೋ ಹಂಚಿಕೊಂಡ ಕಾರಣಕ್ಕೆ ಕಾಂಗ್ರೆಸ್ ಮಹಿಳಾ ನಾಯಕಿಯನ್ನು ಅವಮಾನ ಮಾಡಲಾಗಿದೆ. ಇದರಿಂದ ಕೆರಳಿದ ಮಹಿಳಾ ನಾಯಕಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಘಟನೆ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ.
ಮಹಿಳಾ ಕಾಂಗ್ರೆಸ್ನ ಪಾಲಕ್ಕಾಡ್ ಜಿಲ್ಲಾ ಕಾರ್ಯದರ್ಶಿ ಜಯಲಕ್ಷ್ಮಿ ಅವರೇ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ಶೋರ್ನೂರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿ ಸಮ್ಮುಖದಲ್ಲಿ ಜಯಲಕ್ಷ್ಮಿ ಬಿಜೆಪಿ ಸೇರಿಕೊಂಡಿದ್ದಾರೆ. ಸಚಿವರು ಜಯಲಕ್ಷ್ಮಿ ಬಿಜೆಪಿ ಶಾಲು ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಶೋರ್ನೂರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂಕು ಟಿ. ದಾಸ್ ಅವರ ಪ್ರಚಾರ ಕಾರ್ಯಕ್ರಮದ ವೇಳೆ ಜಯಲಕ್ಷ್ಮಿ ಅವರು ಬಿಜೆಪಿ ಸದಸ್ಯತ್ವವನ್ನು ಸ್ವೀಕರಿಸಿದ್ದಾರೆ. ಇದೀಗ ಕೇರಳ ರಾಜಕೀಯದಲ್ಲಿ ಮಹತ್ವದ ತಿರುವಿಗೆ ಕಾರಣವಾಗಿದೆ.
ಕೇರಳ ಕಾಂಗ್ರೆಸ್ನಲ್ಲಿ ಮಹಿಳೆಯರಿಗೆ ಅಪಮಾನ, ಕಡೆಗಣಿಸುವುದು ನಡೆಯುತ್ತಿದೆ ಅನ್ನೋ ಆರೋಪಗಳ ಬೆನ್ನಲ್ಲೇ ಜಯಲಕ್ಷ್ಮಿ ನಿರ್ಧಾರ ಇದೀಗ ಕಾಂಗ್ರೆಸ್ ಮೇಲಿರುವ ಆರೋಪಗಳನ್ನು ಪುಷ್ಠೀಕರಿಸಿದೆ. ಕಾಂಗ್ರೆಸ್ನಲ್ಲಿ ನನಗೆ ತುಂಬಾ ಕೆಟ್ಟ ಅನುಭವವಾಯಿತು ಎಂದು ಜಯಲಕ್ಷ್ಮಿ ಅವರು ಏಷ್ಯಾನೆಟ್ ನ್ಯೂಸ್ಗೆ ತಿಳಿಸಿದ್ದಾರೆ. "ಸುರೇಶ್ ಗೋಪಿ ಅವರ ಮಗಳ ಮದುವೆಯ ಫೋಟೋವನ್ನು ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದಕ್ಕೆ ಕಾಂಗ್ರೆಸ್ ನಾಯಕರು ನನ್ನನ್ನು ಮತ್ತು ನನ್ನ ಕುಟುಂಬವನ್ನು ನಿಂದಿಸಿ, ಬೆದರಿಕೆ ಹಾಕಿದರು. ಹಣೆಗೆ ಒಂದು ಕುಂಕುಮ ಇಟ್ಟಿದ್ದಕ್ಕೂ ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡರು" ಎಂದು ಜಯಲಕ್ಷ್ಮಿ ಆರೋಪಿಸಿದ್ದಾರೆ. ತನ್ನೊಂದಿಗೆ ಇನ್ನೂ ಹಲವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್ ಗೋಪಿ, ವ್ಯಕ್ತಿಗಳನ್ನು ಮತ್ತು ಅವರ ಕುಟುಂಬವನ್ನು ಗುರಿಯಾಗಿಸುವ ಕೀಳುಮಟ್ಟದ ರಾಜಕಾರಣ ಈಗ ನಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. "ನನ್ನ ಮಗಳ ಮದುವೆ ಫೋಟೋ ಹಂಚಿಕೊಂಡಿದ್ದಕ್ಕೆ ಜಯಲಕ್ಷ್ಮಿ ಮತ್ತು ಅವರ ಕುಟುಂಬಕ್ಕೆ ಕಾಂಗ್ರೆಸ್ ನಾಯಕರು ಅವಮಾನ ಮಾಡಿದ್ದಾರೆ. ಹಿಂದೆ ನಾಯನಾರ್ ಮತ್ತು ವಿ.ಎಸ್. ಅಚ್ಯುತಾನಂದನ್ ಅವರ ಕಾಲದಲ್ಲೂ ರಾಜಕೀಯ ಸ್ಪರ್ಧೆ ಇತ್ತು. ಆದರೆ ಅವರು ಎಂದಿಗೂ ಕೆ. ಕರುಣಾಕರನ್ ಅವರ ಕುಟುಂಬವನ್ನು ನಿಂದಿಸಿರಲಿಲ್ಲ. ಆದರೆ ಇಂದಿನ ರಾಜಕೀಯ ಹಾಗಿಲ್ಲ. ಜಯಲಕ್ಷ್ಮಿ ಅವರಿಗೆ ಮಾಡಿದ ಅವಮಾನಕ್ಕೆ ಪಾಲಕ್ಕಾಡ್ನ ಜನರು ತಕ್ಕ ಉತ್ತರ ನೀಡಬೇಕು" ಎಂದು ಸುರೇಶ್ ಗೋಪಿ ಆಗ್ರಹಿಸಿದರು.
ಇದು ಕೇವಲ ಆರಂಭವಷ್ಟೇ, ಕಾಂಗ್ರೆಸ್ನಲ್ಲಿ ಇನ್ನೂ ಅನೇಕ ಭಿನ್ನಮತಗಳು ಸ್ಫೋಟಗೊಳ್ಳಲಿವೆ" ಎಂದು ಬಿಜೆಪಿ ಅಭ್ಯರ್ಥಿ ಶಂಕು ಟಿ. ದಾಸ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.