
ಬೆಂಗಳೂರು (ಮೇ.21): ವಿಧಾನಪರಿಷತ್ತಿಗೆ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಆಯ್ಕೆ ವಿಚಾರ ರಾಜ್ಯ ಕಾಂಗ್ರೆಸ್ನ ಎರಡು ಪ್ರಬಲ ಬಣಗಳ ನಡುವೆ ಕಗ್ಗಂಟು ಸೃಷ್ಟಿಸಿದ್ದು, ಈ ಸಮಸ್ಯೆ ಬಗೆಹರಿಸಲು ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದೆಹಲಿಗೆ ಬುಲಾವ್ ನೀಡಿದೆ. ಶಿವಕುಮಾರ್ ಶುಕ್ರವಾರ ದೆಹಲಿಗೆ ತೆರಳಿದ್ದು, ಸಿದ್ದರಾಮಯ್ಯ ಶನಿವಾರ ತೆರಳಲಿದ್ದಾರೆ. ರಾಜ್ಯಸಭೆಗೆ ಜೈರಾಂ ರಮೇಶ್ ಹೆಸರನ್ನು ಹೈಕಮಾಂಡ್ ಬಹುತೇಕ ಅಂತಿಮಗೊಳಿಸಿದೆ. ಹೀಗಾಗಿ ವಿಧಾನ ಪರಿಷತ್ನಲ್ಲಿ ಪಕ್ಷಕ್ಕೆ ದೊರೆಯುವ ಎರಡು ಸ್ಥಾನಕ್ಕೆ ಹೆಸರು ಅಂತಿಮಗೊಳಿಸುವುದು ಬಾಕಿಯಿತ್ತು. ಈ ಬಗ್ಗೆ ರಾಜ್ಯ ನಾಯಕರೇ ಹೈಕಮಾಂಡ್ಗೆ ಹೆಸರು ಸೂಚಿಸಬೇಕಿತ್ತು.
ಪಾಟೀಲ್ ವಿಚಾರದಲ್ಲಿ ಜಟಾಪಟಿ: ಡಿ.ಕೆ. ಶಿವಕುಮಾರ್ ಅವರು ಉತ್ತರ ಕರ್ನಾಟಕದ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಪರ ಲಾಬಿ ನಡೆಸಿರುವುದು ಹಾಗೂ ಪಾಟೀಲ್ ಆಯ್ಕೆಗೆ ಸಿದ್ದರಾಮಯ್ಯ ಸುತರಾಂ ಒಪ್ಪದಿರುವುದು ಕಗ್ಗಂಟು ಸೃಷ್ಟಿಸಿದೆ ಎನ್ನಲಾಗಿದೆ. ಎರಡು ಸ್ಥಾನಗಳ ಪೈಕಿ ಒಂದನ್ನು ಲಿಂಗಾಯತ ಸಮುದಾಯಕ್ಕೆ ನೀಡಬೇಕು ಎಂಬ ಬಗ್ಗೆ ಉಭಯ ನಾಯಕರಲ್ಲೂ ಭಿನ್ನಾಭಿಪ್ರಾಯ ಇಲ್ಲ. ಆದರೆ, ಸ್ಥಳೀಯ ಸಂಸ್ಥೆಯಿಂದ ಪರಿಷತ್ಗೆ ಟಿಕೆಟ್ ನಿರಾಕರಣೆ ನಂತರ ಎಸ್.ಆರ್.ಪಾಟೀಲ್ ಪಕ್ಷದ ವೇದಿಕೆ ಹೊರತಾಗಿ ಕೆಲ ಹೋರಾಟಗಳನ್ನು ಸಂಘಟಿಸಿದ್ದರು. ಇದು ನೇರವಾಗಿ ಸಿದ್ದರಾಮಯ್ಯ ವಿರುದ್ಧ ಎಂದು ಬಿಂಬಿಸಲಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಅವರು ಪಾಟೀಲ್ಗೆ ಟಿಕೆಟ್ ಬೇಡ ಎಂದು ಹೇಳಿ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸುತ್ತಿರುವ ಅಲ್ಲಂ ವೀರಭದ್ರಪ್ಪ ಪರ ನಿಂತಿದ್ದಾರೆ ಎನ್ನಲಾಗಿದೆ.
ಹೂಳೆತ್ತುವಲ್ಲಿ ಶೇ.100 ಅವ್ಯವಹಾರ: ಸಿದ್ದರಾಮಯ್ಯ
ಮಹಿಳೆ-ಅಲ್ಪಸಂಖ್ಯಾತ ಪರ ಲಾಬಿ: ಉಳಿದ ಒಂದು ಸ್ಥಾನಕ್ಕೆ ಮೂಲಗಳ ಪ್ರಕಾರ ಮಹಿಳೆಯೊಬ್ಬರಿಗೆ ವಿಧಾನಪರಿಷತ್ತಿಗೆ ಕಳುಹಿಸಬೇಕು ಎಂದು ಹೈಕಮಾಂಡ್ನಿಂದಲೇ ಸೂಚಿನೆಯಿದೆ. ಅಲ್ಪಸಂಖ್ಯಾತ (ಕ್ರಿಶ್ಚಿಯನ್)ಗೂ ಅವಕಾಶ ನೀಡಬೇಕು ಎಂಬ ಅಭಿಪ್ರಾಯವಿದೆ. ಆದರೆ, ಆಕಾಂಕ್ಷಿಗಳು ಮಾತ್ರ ಒಕ್ಕಲಿಗ (ಮಾಜಿ ಶಾಸಕ ನಾರಾಯಣಸ್ವಾಮಿ, ಬಿ.ಎಲ್. ಶಂಕರ್), ಹಿಂದುಳಿದ (ಲಕ್ಷ್ಮೀನಾರಾಯಣ, ನಾಗರಾಜ್ ಜಾಧವ್, ಎಂ.ಸಿ. ವೇಣುಗೋಪಾಲ್), ಮಹಿಳೆ (ರಾಣಿ ಸತೀಶ್, ಆರತಿ ಕೃಷ್ಣ, ಪುಷ್ಪಾ ಅಮರನಾಥ್) ಹಾಗೂ ಪರಿಶಿಷ್ಟಸೇರಿದಂತೆ ಎಲ್ಲ ಜಾತಿ ಹಾಗೂ ವರ್ಗಗಳಿಂದ ಸುಮಾರು 25ಕ್ಕೂ ಹೆಚ್ಚು ಮಂದಿ ಇದ್ದಾರೆ.
ನಾನು ಮತ್ತೆ ಸಿಎಂ ಆದರೆ ದಲಿತ ಸಾಲ ಮನ್ನಾ: ‘ನನ್ನ ಅಧಿಕಾರಾವಧಿಯಲ್ಲಿ ದಲಿತರ ಶ್ರೇಯೋಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದೇನೆ. ಈಗ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದರೆ ದಲಿತರ ಸಾಲ ಮನ್ನಾ ಮಾಡುತ್ತೇನೆ.’ ಹೀಗೆ ಹೇಳುವ ಮೂಲಕ ಮತ್ತೆ ಮುಖ್ಯಮಂತ್ರಿ ಹುದ್ದೆಗೇರುವ ಆಕಾಂಕ್ಷೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
Karnataka Politics: ಸಿದ್ದರಾಮಯ್ಯ ದಲಿತ ಸಾಲ ಮನ್ನಾ ಹೇಳಿಕೆಗೆ ಬಿಜೆಪಿ ಕಿಡಿ!
ವಸಂತನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶೋಷಿತರ ಸ್ವಾಭಿಮಾನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿದ್ದಾಗ ಶೋಷಿತ ಸಮುದಾಯ ಅಭಿವೃದ್ಧಿಯಾಗಬೇಕೆಂದು ದಲಿತರಿಗೆ ಅನುದಾನವನ್ನು 50 ಲಕ್ಷದಿಂದ 1 ಕೋಟಿ ರು. ವರೆಗೆ ಹೆಚ್ಚಳ ಮಾಡುವಂತೆ ಘೋಷಿಸಿದ್ದೆ. ಆದರೆ ನಂತರ ಅದನ್ನು ಯಾರೂ ಅನುಷ್ಠಾನಕ್ಕೆ ತರಲಿಲ್ಲ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮಾಡಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಯಡಿಯೂರಪ್ಪ, ಬೊಮ್ಮಾಯಿನೂ ಮಾಡಲಿಲ್ಲ, ಮತ್ತೊಮ್ಮೆ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದರೆ ದಲಿತರ ಸಾಲವನ್ನು ಮನ್ನಾ ಮಾಡುತ್ತೇನೆ. ಎಸ್ಸಿಪಿ, ಟಿಎಸ್ಪಿ ಅನುದಾನ ಕೇವಲ ದಲಿತ ಸಮುದಾಯಕ್ಕೆ ಮಾತ್ರ ಬಳಕೆ ಮಾಡುವೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.