ಕಾಂಗ್ರೆಸ್‌ನಲ್ಲಿ ಮತ್ತೊಂದು ಗುದ್ದಾಟಕ್ಕೆ ವೇದಿಕೆ ರೆಡಿ, ಸೋನಿಯಾ ಗಾಂಧಿ ಭೇಟಿಯಾದ ಸಚಿನ್ ಪೈಲೆಟ್!

By Suvarna NewsFirst Published Sep 29, 2022, 8:42 PM IST
Highlights

ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಅಶೋಕ್ ಗೆಹ್ಲೋಟ್ ಭಾರಿ ತಂತ್ರಗಾರಿಯಿಂದ ಸಿಎಂ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಈ ಬೆಳವಣಿಗೆ ನಡುವೆ ಸಚಿನ್ ಪೈಲೆಟ್ ನೇರವಾಗಿ ಸೋನಿಯಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

ನವದೆಹಲಿ(ಸೆ.29):  ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಎದ್ದಿರುವ ಬಿರುಗಾಳಿ ಮತ್ತೆ ಬೀಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಅಶೋಕ್ ಗೆಹ್ಲೋಟ್ ಸ್ಪರ್ಧಿಸುತ್ತಿಲ್ಲ ಎಂದು ಹಿಂದೆ ಸರಿದಿದ್ದಾರೆ. ಈ ಮೂಲಕ ತಮ್ಮ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ ಅಶೋಕ್ ಗೆಹ್ಲೋಟ್ ನಿಟ್ಟುಸಿರು ಬಿಟ್ಟ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಅಶೋಕ್ ಗೆಹ್ಲೋಟ್ ವಿರೋಧಿ ಬಣದ ನಾಯಕ ಸಚಿನ್ ಪೈಲೆಟ್ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಈ ಹಿಂದಿನ ಬಣ ರಾಜಕೀಯ ಹಾಗೂ ಬಿಕ್ಕಟ್ಟನ್ನು ಅಶೋಕ್ ಗೆಹ್ಲೋಟ್ ಬಣ ಸೃಷ್ಟಿಸಿತ್ತು. ಇದೀಗ ತಮ್ಮ ಸಿಎಂ ಸ್ಥಾನ ಉಳಿಸಿಕೊಳ್ಳಲು ಅಶೋಕ್ ಗೆಹ್ಲೋಟ್ ಯಾವ ಮಟ್ಟಕ್ಕೂ ಇಳಿಯುತ್ತಾರೆ ಎಂಬುದು ಇತ್ತೀಚಿಗಿನ ನಿರ್ದರ್ಶನ ಸಾಕ್ಷಿ. ಈ ಕುರಿತು ಸಚಿನ್ ಪೈಲೆಟ್ , ಸೋನಿಯಾ ಗಾಂಧಿಗೆ ವಿವರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಅಶೋಕ್ ಗೆಹ್ಲೋಟ್‌ಗೆ ಕ್ಲೀನ್ ಚಿಟ್ ನೀಡಿರುವುದರ ಹಿಂದೆ ಷಡ್ಯಂತ್ರ ಇದೆ ಎಂಬುದನ್ನು ಸೋನಿಯಾ ಗಾಂಧಿಗೆ ಪೈಲೆಟ್ ವಿವರಿಸಿದ್ದಾರೆ ಅನ್ನೋ ಮಾಹಿತಿಗಳು ಕೇಳಿಬರುತ್ತಿದೆ. ರಾಜಕೀಯ ಅಸ್ಥಿರತೆ ಸೃಷ್ಟಿಸಿದ ಅಶೋಕ್ ಗೆಹ್ಲೋಟ್ ವಿರುದ್ದದ ಸತತ ದೂರು ನೀಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಆದರೆ ಸಚಿನ್ ಪೈಲೆಟ್ ಹಾಗೂ ಸೋನಿಯಾ ಗಾಂಧಿ ಭೇಟಿ ಕುರಿತ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

 

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಬಿಜೆಪಿ ಮಾಜಿ ನಾಯಕ ಸ್ಪರ್ಧೆ, ಗೆಹ್ಲೋಟ್ ಪ್ಲಾನ್ ಸಕ್ಸಸ್!

ಕ್ಷಮೆ ಕೇಳಿದ ಗೆಹ್ಲೋಟ್‌
ರಾಜಸ್ಥಾನದಲ್ಲಿ ಬಂಡೆದ್ದಿರುವ ತಮ್ಮ ಬಣದ ಶಾಸಕರ ವರ್ತನೆ ಬಗ್ಗೆ ಪಕ್ಷದ ಹಿರಿಯ ಮುಖಂಡ ಹಾಗೂ ವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಬಳಿ ಭಾನುವಾರ ರಾತ್ರಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕ್ಷಮೆ ಕೇಳಿದರು ಎಂದು ತಿಳಿದುಬಂದಿದೆ. ಆದರೆ, ಇನ್ನು ಕೇಳದ ಖರ್ಗೆ, ‘ಗೆಹ್ಲೋಟ್‌ ಸಮ್ಮತಿ ಇಲ್ಲದೇ, ಇಂಥ ವಿದ್ಯಮಾನ ಅಸಾಧ್ಯ’ ಎಂದು ಕಿಡಿಕಾರಿದರು ಎಂದು ಮೂಲಗಳು ಹೇಳಿವೆ. ಈ ನಡುವೆ, ‘ಗೆಹ್ಲೋಟ್‌ ಕೆಳಗಿಳಿ ಸಲು ದಿಲ್ಲಿ ನಾಯಕನಿಂದ ಸಂಚು ನಡೆದಿದೆ’ ಎಂದು ವೀಕ್ಷಕ ಮಾಕನ್‌ ಹೆಸರೆತ್ತದೇ ಗೆಹ್ಲೋಟ್‌ ಬಣದ ಸಚಿವ ಧಾರಿವಾಲ್‌ ಆರೋಪಿಸಿದ್ದಾರೆ. ‘ದ್ರೋಹಿ ಗಳನ್ನು ಸಿಎಂ ಆಗಲು ಬಿಡಲ್ಲ’ ಎಂದು ಸಚಿನ್‌ ಪೈಲಟ್‌ಗೆ ಚಾಟಿ ಬೀಸಿದ್ದಾರೆ.·

ಕ್ಲೀನ್‌ಚಿಟ್‌:
ಪಕ್ಷದ ವೀಕ್ಷಕರು ಸೋನಿಯಾಗೆ ಸಲ್ಲಿಸಿದ ವರದಿಯಲ್ಲಿ, ಅಶೋಕ್‌ ಗೆಹ್ಲೋಟ್‌ ಆಪ್ತರಾದ ಸಚಿವ ಶಾಂತಿ ಧಾರಿವಾಲ್‌, ಮುಖ್ಯ ವಿಪ್‌ ಮಹೇಶ್‌ ಜೋಶಿ ಮತ್ತು ಶಾಸಕ ಧರ್ಮೇಂದ್ರ ರಾಥೋರ್‌ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ಶಾಸಕಾಂಗ ಪಕ್ಷದ ಸಭೆಗೆ ಪರ್ಯಾಯವಾಗಿ ಸಭೆ ಆಯೋಜಿಸುವ ಮೂಲಕ, ಈ ಮೂವರು ನಾಯಕರು ಗಂಭೀರ ಲೋಪ ಎಸಗಿದ್ದಾರೆ ಎಂದು ಹೇಳಲಾಗಿದೆ. ಪರ್ಯಾಯ ಸಭೆಯು ಅಶೋಕ್‌ ಗೆಹ್ಲೋಟ್‌ ಅವರಿಗೆ ಅರಿವಿದ್ದೇ ನಡೆದಿದೆ ಎಂದು ವರದಿಯಲ್ಲಿ ಹೇಳಿದ್ದರೂ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಶಿಫಾರಸು ಮಾಡಿಲ್ಲ.

Rajasthan Political Crisis: ಗೆಹ್ಲೋಟ್‌ಗೆ ವೀಕ್ಷಕರ ಕ್ಲೀನ್‌ಚಿಟ್‌; 3 ನಿಷ್ಠರಿಗೆ ಶೋಕಾಸ್‌ ನೋಟಿಸ್‌

ರಾಜ್ಯದಲ್ಲಿ 2 ಬಣ:
ರಾಜಸ್ಥಾನದಲ್ಲಿ ಮೊದಲಿನಿಂದಲೂ ಸಚಿನ್‌ ಪೈಲಟ್‌ ಹಾಗೂ ಗೆಹ್ಲೋಟ್‌ ಬಣಗಳು ಇವೆ. 2 ವರ್ಷದ ಹಿಂದೆ ಎರಡೂ ಬಣಗಳ ನಡುವೆ ಭಾರಿ ಕದನ ನಡೆದಿತ್ತು ಹಾಗೂ ಪೈಲಟ್‌ ಬಂಡೆದ್ದು, ತಮ್ಮನ್ನು ಮುಖ್ಯಮಂತ್ರಿ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಕೊನೆಗೆ ಹೈಕಮಾಂಡ್‌ ಮಧ್ಯಪ್ರವೇಶದ ಬಳಿಕ ಪೈಲಟ್‌ ಬಂಡಾಯ ತಣ್ಣಗಾಗಿತ್ತು.

click me!